ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ರೈತರು ಡೇರಿಗೆ ಗುಣಮಟ್ಟದ ಹಾಲನ್ನು ಸರಬರಾಜು ಮಾಡುವ ಮೂಲಕ ಹೆಚ್ಚಿನ ಲಾಭ ಪಡೆದು ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಚಾಮುಲ್ ನಿರ್ದೇಶಕ ಎಚ್.ಎಸ್.ಬಸವರಾಜು ಸಲಹೆ ನೀಡಿದರು.ನಗರದ ರಾಮಸಮುದ್ರ ಬೂದಿತಿಟ್ಟು ಕ್ರಾಸ್ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಜನಶ್ರೀವಿಮೆ ಯೋಜನೆ, ರೈತ ಕಲ್ಯಾಣ ಟ್ರಸ್ಟ್, ರಾಸುಗಳಿಗೆ ವಿಮೆ, ವಶುವೈದ್ಯಕೀಯ ಸೇವೆಯನ್ನು ವೈದ್ಯರು ಮನೆ ಬಾಗಿಲಿಗೆ ಬಂದು ನೀಡುತ್ತಿದ್ದಾರೆ. ಮೇವಿನ ಬಿತ್ತನೆ ಬೀಜಗಳನ್ನು ಶೇ.50 ರಷ್ಟು ರಿಯಾಯ್ತಿ ದರದಲ್ಲಿ ನೀಡಲಾಗುವುದು. ಒಕ್ಕೂಟವನ್ನು ಸ್ಥಾಪನೆ ಮಾಡುವ ಸಂದರ್ಭದಲ್ಲಿ 82 ಕೋಟಿ ರು. ನೀಡುವುದಾಗಿ ಆಶ್ವಾಸನೆ ಕೊಟ್ಟಿತ್ತು. ಆದರೆ ಬಿಡುಗಡೆ ಮಾಡಿದ್ದು ಮಾತ್ರ 30 ಕೋಟಿ ರು. ಈಗ 7 ವರ್ಷ ತುಂಬಿ 8ನೇ ವರ್ಷ ನಡೆಯುತ್ತಿದ್ದು ಬಾಕಿ 52 ಕೋಟಿ ರು. ಅನುದಾನವನ್ನು ಬಿಡುಗಡೆ ಮಾಡುವಂತೆ ಒಕ್ಕೂಟ ಸಹಕಾರ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಿಎಂಗೆ ಮನವಿ ಮಾಡಿದರೂ ನೀಡುತ್ತಿಲ್ಲ ಇದು ಬೇಸರದ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಒಂದು ಹೈಟೆಕ್ ಫ್ಯಾಕ್ಟರಿ ಸ್ಥಾಪಿಸಿದ್ದಾರೆ. ಹೊರತು ಬಾಕಿ ಅನುದಾನ ಕೊಟ್ಟಿಲ್ಲ. ಹಾಲಿನ ಉತ್ಪನ್ನಗಳ ಜೊತೆಯಲ್ಲಿ ಮೊಸರು, ಪೇಢಾ, ಮಜ್ಜಿಗೆ ಜೊತೆನಲ್ಲಿ ಬೇರೆ ಘಟಕಗಳನ್ನು ಸ್ಥಾಪನೆ ಮಾಡಿಕೊಂಡಾಗ ಒಕ್ಕೂಟಕ್ಕೆ ಲಾಭ ಬಂದು ರೈತರಿಗೆ ಹೆಚ್ಚಿನ ದರ ನೀಡಲು ಸಾಧ್ಯವಾಗುತ್ತದೆ ಎಂದರು.ನಿರ್ದೇಶಕ ಸದಾಶಿವಮೂರ್ತಿ ಮಾತನಾಡಿ, ಈ ಸಂಘದಲ್ಲಿ ಸಾವಿರಕ್ಕೂ ಹೆಚ್ಚು ಲೀಟರ್ ಹಾಲಿನ ಉತ್ಪಾದನೆ ಮಾಡುತ್ತಿದ್ದು, ಹೆಚ್ಚಿನ ಲಾಭದತ್ತ ಮುನ್ನಡೆಯುತ್ತಿದೆ ಎಂದರು. ಸಭೆಯಲ್ಲಿ ಕಾರ್ಯಕ್ರಮದಲ್ಲಿ ಹೆಚ್ಚು ಹಾಲು ಸರಬರಾಜು ಮಾಡಿದವರಿಗೆ ಬಹುಮಾನ ನೀಡಲಾಯಿತು. ಸಂಘದ ಅಧ್ಯಕ್ಷ ಎಂ ಬಸವಣ್ಣ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಚಾಮುಲ್ ಸಹಾಯಕ ವ್ಯವಸ್ಥಾಪಕ ಡಾ. ಎನ್.ಅಮರ್, ಮಾರ್ಗ ವಿಸ್ತರಣಾಧಿಕಾರಿ ಹೆ.ಜೆ.ಲಕ್ಷ್ಮಯ್ಯ, ಮುಖ್ಯಕಾರ್ಯನಿರ್ವಾಕ ಎಸ್.ಚಂದ್ರಶೇಖರ್, ಎನ್.ಚಿನ್ನಸ್ವಾಮಿ, ಪ್ರತಾಪ್ ಮಹೇಶ್, ಪ್ರಭುಸ್ವಾಮಿ ಸೇರಿದಂತೆ ಕಾರ್ಯಕಾರಿ ಮಂಡಳಿ ಸದಸ್ಯರು ಹಾಜರಿದ್ದರು.