ವಿಜಯಪುರ: ಅರೆ ಸಂಸ್ಕರಿತ ಹಾಗೂ ಉಪಯೋಗಿಸಲು ಅಯೋಗ್ಯ ಕೊಳಚೆ ನೀರನ್ನು ಜನಿಕರಿಗೆ ನೀಡುತ್ತಿರುವ ಏಕೈಕ ರಾಜ್ಯ ಕರ್ನಾಟಕ ಎಂದು ಶಾಶ್ವತ ನೀರಿನ ಹೋರಾಟ ಸಮಿತಿ ಸಂಚಾಲಕ ಪಿ.ಹರೀಶ್ ತೀವ್ರ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ರೋಟರಿ ಶಾಲಾ ಪ್ರಸಾದ ಭವನದಲ್ಲಿ ರೋಟರಿ ಸಂಸ್ಥೆ ಆಯೋಜಿಸಿದ್ದ ವೃತ್ತಿ ಸೇವಾ ಪುರಸ್ಕಾರ ಹಾಗೂ ರೋಟರಿ ಇಂಟರ್‌ನ್ಯಾಷನಲ್ ಸಂಸ್ಥೆಯ ೧೨೧ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಸಾರ್ವಜನಿಕರ ತೆರಿಗೆ ಹಣದಲ್ಲಿ ಅಪ್ರಯೋಜಕ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳಿಗೆ ಅರೆ ಸಂಸ್ಕರಿತ ಕೊಳಚೆ ನೀರನ್ನು ಹರಿಸಲಾಗುತ್ತಿದೆ. ಇದರಿಂದ ಅಂತರ್ಜಲ ಕಲುಷಿತಗೊಳ್ಳುತ್ತಿದೆ. ಈ ನೀರನ್ನು ಬಳಸಿ ಬೆಳೆಯುವ ಸೊಪ್ಪು, ತರಕಾರಿ ವಿಷಮಯವಾಗುತ್ತಿವೆ. ಇದು ಮನುಷ್ಯರು ಮತ್ತು ಜಾನುವಾರುಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇದರ ವಿರುದ್ಧ ಎಲ್ಲರೂ ಒಗ್ಗೂಡಿ ಹೋರಾಡಬೇಕಿದೆ ಎಂದರು.

ಡಾ. ಕನಕ ಸ್ವರೂಪ್ ನಟರಾಜ್ ಮಾತನಾಡಿ, ಪಾಶ್ಚಾತ್ಯ ಜೀವನಶೈಲಿ ಮತ್ತು ಮೊಬೈಲ್ ಬಳಕೆಯಿಂದಾಗಿ ಮನುಷ್ಯ ಒತ್ತಡದ ಬದುಕಿಗೆ ಸಿಲುಕಿ ರೋಗಗಳನ್ನು ಆಹ್ವಾನಿಸುತ್ತಿದ್ದಾನೆ. ದಿನಕ್ಕೆ ಕನಿಷ್ಠ ಒಂದು ಗಂಟೆ ವ್ಯಾಯಾಮ ಮತ್ತು ಊಟದ ನಂತರ ೧೫ ನಿಮಿಷಗಳ ನಡಿಗೆ ಅಗತ್ಯ ಎಂದು ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಕವಿತಾ ಮಾತನಾಡಿ, ರಾಜ್ಯದಲ್ಲಿ ಅಪೌಷ್ಟಿಕತೆ ಪ್ರಮಾಣ ಶೇ.೨೩ರಿಂದ ಶೇ.೧೭ಕ್ಕೆ ಇಳಿಕೆಯಾಗಿದೆ. ಬಾಲ್ಯ ವಿವಾಹ ಅಥವಾ ಮಹಿಳಾ ದೌರ್ಜನ್ಯ ಕಂಡು ಬಂದಲ್ಲಿ ಸಾರ್ವಜನಿಕರು ತಕ್ಷಣ ಸಹಾಯವಾಣಿ ೧೦೯೮ಕ್ಕೆ ಕರೆ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ರೋಟರಿ ಸಂಸ್ಥೆಯ ಜನರಲ್ ಸೆಕ್ರೆಟರಿ ಜಗದೀಶ್ ಎಂ.ಮುಗುಲಿ ಮಾತನಾಡಿ, ಸಾಮಾಜಿಕ ಸೇವೆ ಸಲ್ಲಿಸುವ ಸಾಧಕರಿಗೆ ಸೇವಾ ಪುರಸ್ಕಾರ ನೀಡಿ, ಅವರ ಸೇವೆಯನ್ನು ಮತ್ತಷ್ಟು ವಿಸ್ತರಿಸುವುದು ನಮ್ಮ ಕರ್ತವ್ಯ. ಭೂಮಿ ಮೇಲೆ ಜನಿಸುವ ಪ್ರತಿ ಮನುಷ್ಯನೂ ಸಮಾಜಕ್ಕೆ ಏನಾದರೂ ಒಂದು ಕೊಡುಗೆ ನೀಡಬೇಕು. ಸಮಾಜ ಸೇವೆ ನಮ್ಮ ಸ್ವಯಂ ಇಚ್ಛೆಯಿಂದ ಮೂಡಿ ಬರಬೇಕು. ಪ್ರತಿಯೊಬ್ಬರು ಯಾವುದಾದರೂ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.


ಇದೇ ಸಂದರ್ಭದಲ್ಲಿ ನೀರಾವರಿ ಹೋರಾಟಗಾರ ಹರೀಶ್, ವೈದ್ಯರಾದ ಕನಕ ಸ್ವರೂಪ್ ನಟರಾಜ್, ಬ್ಯಾಂಕ್ ವ್ಯವಸ್ಥಾಪಕ ಮಹೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕವಿತಾ ಅವರಿಗೆ ವೃತ್ತಿ ಸೇವಾ ಪುರಸ್ಕಾರ ಹಾಗೂ

ವಿಜಯಪುರ ರೋಟರಿ ಸಂಸ್ಥೆ ಸಂಸ್ಥಾಪಕ ಸದಸ್ಯ ಹಾಗೂ ರೋಟರಿ ಸಂಸ್ಥೆಯಲ್ಲಿ ೫೦ ವರ್ಷ ಸೇವೆ ಸಲ್ಲಿಸಿದ ಕೆ. ಸಯೋಜಾತಪ್ಪ, ಚೆನ್ನಪ್ಪ, ಸಿದ್ದರಾಜು, ಸಿ.ಬಸಪ್ಪರನ್ನು ಜಿಲ್ಲಾ ರೋಟರಿ ಸಂಸ್ಥೆಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚ.ವಿಜಯಬಾಬು ವಹಿಸಿದ್ದರು. ಕೆನರಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಮಹೇಶ್, ಕಾರ್ಯದರ್ಶಿ ಅಶೋಕ್ ಕುಮಾರ್, ವೃತ್ತಿ ಸೇವಾ ನಿರ್ದೇಶಕಿ ಎ.ಎಂ.ಮಂಜುಳಾ, ಮಾಜಿ ಅಧ್ಯಕ್ಷರಾದ ಬಿ.ಸಿ.ಸಿದ್ದರಾಜು, ಬಸವರಾಜು, ಮಹೇಶ್, ವಿನಯ್, ಕಿರಣ್, ವಕೀಲರಾದ ಮೋಹನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

(ಫೋಟೋ ಕ್ಯಾಫ್ಷನ್‌)

ವಿಜಯಪುರದ ರೋಟರಿ ಸಂಸ್ಥೆಯಲ್ಲಿ ಆಯೋಜಿಸಿದ್ದ ವೃತ್ತಿ ಸೇವಾ ಪುರಸ್ಕಾರ ಹಾಗೂ ರೋಟರಿ ಇಂಟರ್ನ್ಯಾಷನಲ್ ಸಂಸ್ಥೆಯ ೧೨೧ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ವೃತ್ತಿ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು.