ಸಾರಾಂಶ
ಕನ್ನಡಪ್ರಭ ವಾರ್ತೆ ಕಲಾದಗಿ
ಕಳೆದ ೬೦ ವರ್ಷಗಳಲ್ಲಿ ಹಲವಾರು ಹಗರಣ ನಡೆಸಿದ ಕಾಂಗ್ರೆಸ್ ಆಡಳಿತದಿಂದ ರೋಸಿ ಹೋದ ದೇಶದ ಜನತೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಮತ ನೀಡಿದ್ದಾರೆ. ಕಳೆದ 10 ವರ್ಷಗಳಿಂದ ನರೇಂದ್ರ ಮೋದಿಯ ಆಡಳಿತ ಮೆಚ್ಚಿ ಬೆಂಬಲ ನೀಡುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಹೇಳಿದರು.ಕಲಾದಗಿಯಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣಗಳು, ರೈಲ್ವೆ, ಶಾಲಾ ಕಾಲೇಜು, ರಸ್ತೆ, ಆಸ್ಪತ್ರೆ ಎಲ್ಲವೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಆಗಬೇಕು ಎನ್ನುವ ಕನಸು ಹೊಂದಿದವರು ಮೋದಿಯವರು. ದೇಶದ ಜನರು ಯಾರೂ ಬಡತನದಲ್ಲಿ ಇರಬಾರದು ಎಂದ ಶ್ರಮಿಸಿದ್ದರ ಫಲವಾಗಿ ೪೦ ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಎಲ್ಲ ಜನರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ಆದರೆ, ಬಡವರಿಗೆ ಹಣಕಾಸು ಸಾಲ ಸೌಲಭ್ಯ ಸಿಗಲು ಮೋದಿಯೇ ಗ್ಯಾರಂಟಿಯಾಗಿ ಬಡವರಿಗೆ ಸಾಲ ಸೌಲಭ್ಯ ಸಿಗುವಂತೆ ಮಾಡಿದ್ದಾರೆ. ಎಲ್ಲರೂ ಶ್ರೀಮಂತರಾಗಿ ಸಮೃದ್ಧವಾಗಿ ಜೀವನ ಸಾಗಿಸುವಂತೆ ಅನೇಕ ಯೋಜನೆ ತಂದಿದ್ದಾರೆ. ಮೋದಿಯವರ ಪಾರದರ್ಶಕ ಆಡಳಿತ ಪರಿಣಾಮ ಜಗತ್ತಿನಲ್ಲಿ ಭಾರತ ವಿಶ್ವಗುರು ಸ್ಥಾನಕ್ಕೇರಲಿದೆ. ಬಾಗಲಕೋಟೆ ಕುಡಚಿ ರೈಲ್ವೆ ಮಾರ್ಗ ವಿಳಂಬವಾಗಲು ಕಾಂಗ್ರೆಸ್ ಸರ್ಕಾರ ಕಾರಣ. ಭೂಸ್ವಾಧೀನ ಪ್ರಕ್ರಿಯೆ ಮಾಡಿಕೊಳ್ಳದ ಕಾರಣ, ನಾಲ್ಕು ಅವಧಿಗೆ ಆಶೀರ್ವಾದ ಮಾಡಿದ ಮತದಾರರು ಐದನೇ ಬಾರಿಗೂ ಆಶೀರ್ವದಿಸಿ ನರೇಂದ್ರ ಮೋದಿಯವರ ಕೈಬಲ ಬಡಿಸಬೇಕು ಎಂದು ಹೇಳಿದರು.
ಮಾಜಿ ಸಚಿವ ಎಸ್.ಕೆ.ಬೆಳ್ಳುಳ್ಳಿ ಮಾತನಾಡಿ, ಒಂದು ಕಾಲದಲ್ಲಿ ಭಿಕ್ಷುಕರ ದೇಶ ಎನಿಸಿಕೊಂಡಿದ್ದ ಭಾರತ ಇಂದು ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಕೇವಲ ದೇಶದ ಚಿಂತನೆ ಮಾಡದೆ ಇಡೀ ಜಗತ್ತಿನ ಚಿಂತನೆ ಮಾಡುತ್ತಿರುವ ನರೇಂದ್ರ ಮೋದಿಯವರು, ಅಖಂಡ ಭಾರತ ನಿರ್ಮಾಣದ ಗುರಿ ಹೊಂದಿದ್ದಾರೆ. ನರೇಂದ್ರ ಮೋದಿಯವರ ಕೈ ಬಲ ಪಡಿಸಲು ಬಿಜೆಪಿ ಅಭ್ಯರ್ಥಿಗೆ ಮತ ನೀಡಲು ಮನವಿ ಮಾಡಿದರು.ಅಶೋಕ ಲಿಂಬಾವಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಎಚ್.ಆರ್. ನಿರಾಣಿ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಹೂವಪ್ಪ ರಾಠೋಡ ಮಾತನಾಡಿದರು. ಕೆ.ಆರ್.ಶಿಲ್ಪಿ, ಶ್ರೀಶೈಲ ಗೌರಿ, ಎಸ್.ಐ.ಛಬ್ಬಿ, ರಾಜು ಪೂಜಾರ, ಲಕ್ಷ್ಮಣಗೌಡ ಗೌಡರ, ಶಿವಲಿಂಗಪ್ಪ ಗಾಣಿಗೇರ, ಇನ್ನಿತರರು ಇದ್ದರು.