ಸಾರಾಂಶ
ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನು ಒಂದು ಊರಿನಿಂದ ಇನ್ನೊಂದು ಊರಿಗೆ, ಜಿಲ್ಲೆ, ರಾಜ್ಯ, ದೇಶದಿಂದ ದೇಶಕ್ಕೆ ಪ್ರಯಾಣ ಮಾಡಬೇಕು. ನಮ್ಮ ಸುತ್ತಮುತ್ತಲಿನ ಪ್ರಕೃತಿ ನಮಗೆ ವಿವಿಧ ರೀತಿಯ ಕೊಡುಗೆ ನೀಡುತ್ತಿದೆ.
ಧಾರವಾಡ:
ವಿಶ್ವ ಪರ್ಯಟನೆ ಮಾಡುವುದರಿಂದ ಜೀವನಾನುಭವ ಹೆಚ್ಚುತ್ತದೆ ಮತ್ತು ಪ್ರವಾಸೋದ್ಯಮವು ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಪ್ರೆಸ್ಟೀಜ್ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ನಿರ್ದೇಶಕ ರಾಘವೇಂದ್ರ ಆನೆಗುಂದಿ ಹೇಳಿದರು.ಶುಕ್ರವಾರ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಉದ್ಘಾಟಿಸಿದ ಅವರು, ರಾಜ್ಯ ಮತ್ತು ದೇಶದಲ್ಲಿ ಸಾವಿರಾರು ಪ್ರವಾಸಿ ತಾಣಗಳಿವೆ. ಲಕ್ಷಾಂತರ ಪ್ರವಾಸಿಗರ ಸಂಚರಿಸುತ್ತಾರೆ. ಪ್ರವಾಸಿ ತಾಣಗಳ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯು ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು ಇಂದು ಹಂಪಿ ಮತ್ತು ಇನ್ನಿತರ ಪ್ರವಾಸಿ ತಾಣಗಳ ಉಳಿವಿಗೆ ಪ್ರವಾಸೋದ್ಯಮವೇ ಕಾರಣ ಎಂದರು.
ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನು ಒಂದು ಊರಿನಿಂದ ಇನ್ನೊಂದು ಊರಿಗೆ, ಜಿಲ್ಲೆ, ರಾಜ್ಯ, ದೇಶದಿಂದ ದೇಶಕ್ಕೆ ಪ್ರಯಾಣ ಮಾಡಬೇಕು. ನಮ್ಮ ಸುತ್ತಮುತ್ತಲಿನ ಪ್ರಕೃತಿ ನಮಗೆ ವಿವಿಧ ರೀತಿಯ ಕೊಡುಗೆ ನೀಡುತ್ತಿದೆ. ಮಾನವ ತನ್ನ ಸ್ವಾರ್ಥಕ್ಕಾಗಿ ಗಿಡ ಕಡೆಯುವುದು, ಮಣ್ಣು ಕೊರೆಯುವ ಮೂಲಕ ಪ್ರಕೃತಿಗೆ ಹಾನಿ ಮಾಡುತ್ತಿದ್ದಾನೆ. ಹೆಚ್ಚು ಜನ ಸಂಖ್ಯೆಯಿಂದ ಭೂಮಿಯ ಮೇಲಿನ ಪ್ರಕೃತಿ ನಾಶವಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಎನ್ನುವುದು ಊಹೆ ಆಗುತ್ತದೆ ಎಂದು ಹೇಳಿದರು.ಪ್ರತಿಯೊಂದು ರಾಷ್ಟ್ರವು ತಮ್ಮದೇ ಆದ ಉಡುಗೆ-ತೊಡುಗೆ, ಆಚಾರ-ವಿಚಾರ, ಆಡಳಿತ, ಉದ್ಯಮಗಳನ್ನು ಹೊಂದಿವೆ. ಪ್ರಪಂಚದಲ್ಲಿನ 195 ರಾಷ್ಟ್ರಗಳು ತಮ್ಮದೇ ಆಚರಣೆಗಳು, ಭಾಷೆ, ಸಂಸ್ಕೃತಿ ಹೊಂದಿವೆ. ಈ ವೈವಿಧ್ಯಮಯ ಬದುಕನ್ನು ಅವಕಾಶ ಸಿಕ್ಕರೆ ಎಲ್ಲರೂ ನೋಡಬೇಕೆಂದು ಉಪನ್ಯಾಸಕ ವಸೀಮ್ ಫಾರೂಕಿ ಮನವಿ ಮಾಡಿದರು.
ಹಿಂದುಸ್ಥಾನ ಯಾತ್ರಾ ಸಂಸ್ಥೆಯ ವಿಲಾಸಕುಮಾರ ದೇಸಾಯಿ ಪ್ರವಾಸೋದ್ಯಮ ಮತ್ತು ಶಾಂತಿ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ನ್ಯಾಯವಾದಿ ರವಿ ಕುಲಕರ್ಣಿ ನಿರೂಪಿಸಿದರು.ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಹೇಮಂತ ದೇಸಳ್ಳಿ, ಸಮಾಲೋಚಕ ಚೇತನ್ ಕ್ಯಾಸನೂರ ಇದ್ದರು.