ಸಾರಾಂಶ
ಜಿಲ್ಲೆಯ ಕಾರ್ಯಕರ್ತರಿಗೆ ಎಚ್.ಡಿ.ಕುಮಾರಸ್ವಾಮಿ ಮನವಿ । ಜೆಡಿಎಸ್ ಮುಖಂಡರ ಸಭೆ । ಎಚ್ಡಿಕೆ, ಎಚ್ಡಿ ರೇವಣ್ಣ ಕಣ್ಣೀರು
ಕನ್ನಡಪ್ರಭ ವಾರ್ತೆ ಹಾಸನಪ್ರಜ್ವಲ್ ರೇವಣ್ಣ ಈ ಕ್ಷೇತ್ರದ ಅಭ್ಯರ್ಥಿ ಅಲ್ಲ. ಕುಮಾರಸ್ವಾಮಿಯೇ ಈ ಕ್ಷೇತ್ರದ ಅಭ್ಯರ್ಥಿ ಎಂದುಕೊಂಡು ಗೆಲ್ಲಿಸಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಂಬನಿ ಮಿಡಿದರು. ಇನ್ನೊಂದೆಡೆ ನಾನು ಚಿಕಿತ್ಸೆ ಪಡೆದು ರಾಜ್ಯಾದ್ಯಂತ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಹೇಳಿದ ವೇಳೆ ಸ್ಥಳದಲ್ಲೆ ಇದ್ದ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಕಣ್ಣು ಕೂಡ ತೇವವಾದ ಪ್ರಸಂಗ ನಡೆಯಿತು.
ನಗರದ ಬಿ.ಎಂ.ರಸ್ತೆ ಬಳಿ ಇರುವ ಜ್ಷಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಜೆಡಿಎಸ್ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನಡೆಯಲು ಸಮಸ್ಯೆ ಇದ್ದರೂ ರಾಜ್ಯಸಭೆಯ ಅಧಿವೇಶನದಲ್ಲಿ ಭಾಗವಹಿಸಿ ರಾಜ್ಯದ ರೈತರ ನೀರಾವರಿ ಕೊಬ್ಬರಿ ಬೆಲೆಯ ಬಗ್ಗೆ ಮಾತನಾಡಿ ಸರ್ಕಾರದ ಗಮನ ಸೆಳೆದಿದ್ದಾರೆ. ಇದು ಹಾನಸ ಜಿಲ್ಲೆಯ ಜನತೆ ಕೊಟ್ಟ ಶಕ್ತಿ. ಶ್ರೀರಾಮ ದೇವರ ಕಟ್ಟೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಪ್ರಜ್ವಲ್ ರೇವಣ್ಣ ಮುಂದಿನ ಅಭ್ಯರ್ಥಿ ಎಂದು ದೇವೇಗೌಡರು ಘೋಷಣೆ ಮಾಡಿದರು. ನಂತರ ಯಾವ ರೀತಿ ಚರ್ಚೆಗಳು ಹಾಸನ ಜಿಲ್ಲೆ ಹಾಗೂ ರಾಜ್ಯದಲ್ಲಿ ನಡೆಯುತ್ತಿದೆ ಎಂದು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಪ್ರಾರಂಭವಾಗಿ ಒಂದು ವರ್ಷ ಪೂರೈಸಿ ಪ್ರತಿ ದಿನ ೫ ಗ್ಯಾರಂಟಿ ಮೇಲೆ ಲೋಕಸಭೆ ಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ ಎಂದು ಹೇಳಿದರು.‘೫೨ ಸಾವಿರ ಕೋಟಿ ರು. ವೆಚ್ಚದ ೫ ಗ್ಯಾರಂಟಿ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಗ್ಯಾರಂಟಿಗಳಿಗಾಗಿ ೧ ಲಕ್ಷದ ೫ ಸಾವಿರ ಕೋಟಿ ರು. ಹಣ ಒಂದೇ ವರ್ಷದಲ್ಲಿ ರಾಜ್ಯ ಸರ್ಕಾರ ಖರ್ಚು ಮಾಡಿದೆ. ಅದಕ್ಕೆ ಜಾಹೀರಾತು ಕೊಡುತ್ತಾರೆ. ಸಾಲ ಮಾಡಿ ತುಪ್ಪ ತಿನ್ನುವ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು.
ಮೈತ್ರಿಯಿಂದ ಬಿಜೆಪಿ ಶಕ್ತಿ ಹೆಚ್ಚಾಗಿದೆ:ಬಿಜೆಪಿ- ಜೆಡಿಎಸ್ ಮೈತ್ರಿಯಿಂದ ಬಿಜೆಪಿಗೆ ಕೂಡ ಶಕ್ತಿ ಜಾಸ್ತಿಯಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ೨ ಲಕ್ಷ ಜೆಡಿಎಸ್ ಮತ ಇದೆ. ಅದೇ ರೀತಿ ಶಿವಮೊಗ್ಗದಲ್ಲಿ ಪಕ್ಷದ ಶಕ್ತಿ ಇದೆ. ಅದನ್ನು ಹಾಸನ ಜಿಲ್ಲೆಯ ಬಿಜೆಪಿ ಮುಖಂಡರು, ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎರಡು ಪಕ್ಷದವರು ಜೆಡಿಎಸ್ ಸೋಲಿಸಲು ಪಕ್ಷ ಕಡಿಮೆ ಮತ ಪಡೆದಿದೆ ಎಂದು ತಿಳಿಸಿದರು.
‘ಭವಿಷ್ಯದಲ್ಲಿ ಮಂಡ್ಯ. ಹಾಸನ ಕೋಲಾರದಲ್ಲಿ. ಜೆಡಿಎಸ್ ಅಭ್ಯರ್ಥಿ ನಿಲ್ಲಿಸಲು ಬಿಜೆಪಿ ಅವಕಾಶ ನೀಡಿದೆ. ನಾವು ಕೇಳಿದರೆ ಇನ್ನೂ ಎರಡು ಕ್ಷೇತ್ರ ಕೊಡುತ್ತಿದ್ದರು. ಅದರೆ ಚುನಾವಣೆ ನಡೆಯುವ ರೀತಿ ನೋಡಿದರೆ ನಮ್ಮಿಂದ ಸೇವೆ ಪಡೆದವರು ಕೈ ಕೊಟ್ಟಿದ್ದಾರೆ. ಜಾತಿಯಲ್ಲಿ ಬಡತನ ಇಲ್ಲ. ಲಿಂಗಾಯಿತರು, ಒಕ್ಕಲಿಗರಲ್ಲಿ ಬಡವರಿದ್ದಾರೆ. ಅದೇ ರೀತಿ ದಲಿತರಲ್ಲೂ ಕೂಡ ಬಡವರಿದ್ದಾರೆ. ಎಲ್ಲಾ ಜಾತಿಯವರು ಬಡವರಿದ್ದಾರೆ. ಜಾತಿಗಣತಿ ವರದಿ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.ಮಾಜಿ ಸಚಿವ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಶಾಸಕರಾದ ಎಚ್.ಪಿ. ಸ್ವರೂಪ್, ಸಿ.ಎನ್. ಬಾಲಕೃಷ್ಣ, ಎ. ಮಂಜು, ಮಾಜಿ ಸಚಿವರಾದ ಎಚ್.ಕೆ. ಕುಮಾರಸ್ವಾಮಿ, ಲಿಂಗೇಶ್, ಬಿ.ವಿ. ಕರೀಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಭೋಜರಾಜ್, ತೋ.ಚ. ಅನಂತಸುಬ್ಬರಾಯ್, ಹುಡಾ ಮಾಜಿ ಅಧ್ಯಕ್ಷ ಕೆ.ಎಂ. ರಾಜೇಗೌಡ, ಮುಖಂಡರಾದ ಸಂತೋಷ್, ಎಚ್ಡಿಎಫ್ಸಿ ಬ್ಯಾಂಕ್ ಅಧ್ಯಕ್ಷ ನಾಗರಾಜು, ಬಿದರಿಕೆರೆ ಜಯರಾಂ, ಗಿರೀಶ್ ಚನ್ನವೀರಪ್ಪ, ಪ್ರಭುಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಸಿ.ಆರ್. ಶಂಕರ್, ಅಶೋಕ್, ಮಾಧ್ಯಮ ವಕ್ತಾರ ಹೊಂಗೆರೆ ರಘು ಇದ್ದರು.
ಪ್ರಜ್ವಲ್, ನಾನು ತಪ್ಪು ಮಾಡಿದ್ರೆ ಕ್ಷಮಿಸಿಎಚ್.ಡಿ. ಕುಮಾರಸ್ವಾಮಿ ಆಡಳಿತದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ ಮತ್ತು ನಾನು ಏನಾದರೂ ತಪ್ಪು ಮಾಡಿದ್ದರೆ ಕ್ಷಮಿಸಿ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಕ್ಷಮೆ ಕೇಳಿದರು. ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಬುಧವಾರ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಜೆಡಿಎಸ್ ಮುಖಂಡರ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಸನ ಜಿಲ್ಲೆಯ ಶಿಕ್ಷಣ ಇಲಾಖೆಗೆ ೫ ಸಾವಿರ ಕೋಟಿ ರು. ಹಣವನ್ನು ೨೦೦೬ನೇ ಸಾಲಿನಲ್ಲಿ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಯೋಜನೆಯಡಿ ಜಿಲ್ಲೆಗೆ ೧೦ ಸಾವಿರ ಕೋಟಿ ರು. ಹಣವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೊಡಿಸಿದ್ದಾರೆ. ಹಾಸನ ಜಿಲ್ಲೆಯ ರೈತರ ೫೨೦ ಕೋಟಿ ರು. ಸಾಲ ಮನ್ನಾ ಮಾಡಿದ್ದಾರೆ ಎಂದು ಹೇಳಿದರು. ೯ ತಿಂಗಳಿನಿಂದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕುಡಿಯುವ ನೀರು ಕೊಡಲು ಸಾಧ್ಯವಾಗಿಲ್ಲ. ಯಾವುದೇ ಗ್ರಾಮಕ್ಕಾದರೂ ಕುಡಿಯುವ ನೀರು ಕೊಡಿ ಅನ್ನುವ ಸ್ಥಿತಿ ಉಂಟಾಗಿದೆ. ಇಂಧನ ಇಲಾಖೆಯಲ್ಲಿ ಕುಮಾರಸ್ವಾಮಿ ಕಾಂತ್ರಿಕಾರಿ ಕೆಲಸ ಮಾಡಿ ಹಲವು ವಿದ್ಯುತ್ ಸಬ್ ಸ್ಟೆಷನ್ ಮಾಡಿಸಿದರು. ಇವುಗಳನ್ನೆಲ್ಲಾ ಅನುಷ್ಠಾನಗೊಳಿಸುವಾಗ ಕೆಲ ತಪ್ಪುಗಳಾಗಿರಬಹುದು. ಅದಕ್ಕಾಗಿ ಕ್ಷಮೆ ಕೇಳುವೆ ಎಂದರು. ಹಾಸನದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು.