ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರ
ಮಾವು ಬೆಳೆಗಾರರಿಗೆ ಅನ್ಯಾಯವಾಗಿದೆ, ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾವು ಬೆಳೆಗೆ ಬೆಂಬಲ ಬೆಲೆ ಪ್ರಕಟಿಸಬೇಕು. ಈ ಮೂಲಕ ಮಾವು ರೈತರ ಹಿತರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಬಿಜೆಪಿ ಮಾಜಿ ಉಪಮುಖ್ಯಮಂತ್ರಿ ಹಾಗು ಶಾಸಕ ಡಾ.ಅಶ್ವತ್ಥ್ ನಾರಾಯಣ ಒತ್ತಾಯಿಸಿದರು.ಅವರು ಗುರುವಾರ ಶ್ರೀನಿವಾಸಪುರದ ಮಾವಿನ ಮಂಡಿಗಳಲ್ಲಿ ಮಾವು ಬೆಳೆಗಾರರ ಸಭೆಯಲ್ಲಿ ಮಾತನಾಡಿ, ಕೋಲಾರದ ಜನ ತುಂಬಾ ಕಷ್ಟಪಟ್ಟು ಬೆಳೆಗಳನ್ನು ಬೆಳೆಯುತ್ತಾರೆ. ಅವರ ತೋಟಗಾರಿಕೆ ಬೆಳೆಗೆ ಇವತ್ತು ಸಂಕಷ್ಟ ಎದುರಾಗಿದೆ ಎಂದರು.
ಟನ್ಗೆ ₹5 ಸಾವಿರ ಬೆಂಬಲ ಬೆಲೆಇದಕ್ಕಾಗಿ ಸರ್ಕಾರ ಒಂದು ಟನ್ ಮಾವಿಗೆ ಕನಿಷ್ಠ 5 ಸಾವಿರದಂತೆ ಬೆಂಬಲ ಬೆಲೆಯನ್ನು ಈ ತಕ್ಷಣ ಬಿಡುಗಡೆ ಮಾಡಬೇಕು ಆಂಧ್ರದ ತಿರಳು ಫ್ಯಾಕ್ಟರಿಗಳು ಮಾವು ಕೊಳ್ಳಲು ವ್ಯವಸ್ಥೆ ರೂಪಿಸಬೇಕು ಇದಕ್ಕೆ ಸರ್ಕಾರ ಅಗತ್ಯ ಕ್ರಮಗಳನ್ನು ತಗೆದುಕೊಳ್ಳಬೇಕು ಎಂದು ಅಗ್ರಹಿಸಿದರು.ಮಾಜಿ ಸಂಸದ ಮುನಿಸ್ವಾಮಿ ಮಾತನಾಡಿ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರು ಕೋಲಾರ ನಗರಕ್ಕೆ ಮೀಸಲಾಗಿದ್ದಾರೆ. ಯಾವತ್ತೂ ಈ ಭಾಗದ ಜನರ ಸಂಸ್ಯೆಗೆ ಸ್ಪಂದಿಸಿಲ್ಲ. ಮತ ಪಡೆದವರು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅಂತವರು ಜನನಾಯಕರಾಗುತ್ತಾರೆ. ಇವತ್ತು ಮಾವು ಬೆಳೆಗಾರ ಕಷ್ಟದಲ್ಲಿ ಇದ್ದಾನೆ. ಆಂಧ್ರದ ಚಿತ್ತೂರು ಜಿಲ್ಲೆಯ ತಿರಳು ಫ್ಯಾಕ್ಟರಿಗಳ ಮಾಲಿಕರು ನಮ್ಮ ಭಾಗದ ಮಾವಿನ ಕಾಯಿಯನ್ನು ಕೊಳ್ಳುವಂತಾಗಲು ಕರ್ನಾಟಕ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.ಆಂಧ್ರ ಸಿಎಂ ಜತೆ ಚರ್ಚಿಸಲಿ
ಮಾವು ಖರೀದಿ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಬರೆದು ಅದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಪ್ರದರ್ಶಿಸುವ ಬದಲು ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಬಹುದಿತ್ತು ಎಂದರು.ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ,ಮಾಜಿ ಅಧ್ಯಕ್ಷ ಡಾ.ವೇಣುಗೋಪಾಲ್,ತಾಲೂಕು ಅಧ್ಯಕ್ಷ ರೋಣೂರುಚಂದ್ರಶೇಖರ್, ಮುಖಂಡರಾದ ನಲ್ಲಪಲ್ಲಿರೆಡ್ಡೆಪ್ಪ, ಲಕ್ಷ್ಮಣಗೌಡ,ನಾಗದೇನಹಳ್ಳಿಚಂದ್ರು ಮುಂತಾದವರು ಇದ್ದರು.