ಸಾರಾಂಶ
ಧಾರ್ಮಿಕ ಕಾರ್ಯಗಳು ಮನಸ್ಸಿನ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಂಡು ದುಷ್ಟಶಕ್ತಿಗಳ ನಿಗ್ರಹಕ್ಕೆ ಸಹಕಾರಿಯಾಗಲಿದೆ.
ಅಳ್ನಾವರ:
ಆರ್ಥಿಕ ಚಟುವಟಿಕೆ ಕೈಕೊಳ್ಳುವ ಮೂಲಕ ಕೌಟುಂಬಿಕ ಜವಾಬ್ದಾರಿ ನಿರ್ವಹಿಸುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸದಸ್ಯರು ಸಾಮಾಜಿಕ ಕಾರ್ಯದಲ್ಲಿಯೂ ತೊಡಗಿಕೊಂಡು ನಾಡಿಗೆ ಉತ್ತಮ ಸಂದೇಶ ಸಾರುತ್ತಿದ್ದಾರೆ ಎಂದು ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ ತಿಳಿಸಿದರು.ಪಟ್ಟಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಳ್ನಾವರ ವಲಯದ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಮತ್ತು ಪೂಜಾ ವ್ಯವಸ್ಥಾಪನಾ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಲಕ್ಷ್ಮೀ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಧಾರ್ಮಿಕ ಕಾರ್ಯಗಳು ಮನಸ್ಸಿನ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಂಡು ದುಷ್ಟಶಕ್ತಿಗಳ ನಿಗ್ರಹಕ್ಕೆ ಸಹಕಾರಿಯಾಗಲಿದ್ದು ಇದೊಂದು ವಿನೂತನ ಕಾರ್ಯವಾಗಿದೆ ಎಂದರು.ಪಪಂ ಉಪಾಧ್ಯಕ್ಷ ಅಮೋಲ ಗುಂಜೀಕರ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾರಂಭವಾದ ನಂತರ ಖಾಸಗಿ ಬಡ್ಡಿ ವ್ಯವಹಾರಕ್ಕೆ ಕಡಿವಾಣ ಹಾಕಿದಂತಾಗಿದೆ. ರಾಜ್ಯದಲ್ಲಿ ಬಡ ಕುಟುಂಬಗಳ ಬದುಕಿಗೆ ಆಧಾರ ಕಲ್ಪಿಸಿದ ಈ ಯೋಜನೆ ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಯೋಜನೆಯ ಒಕ್ಕೂಟಗಳ ಸದಸ್ಯರು ಸ್ವಯಂ ಉದ್ಯೋಗದ ಮೂಲಕ ತಯಾರಿಸಿದ ವಸ್ತುಗಳಿಗೆ ಸಂಸ್ಥೆಯ ವತಿಯಿಂದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.ಯೋಜನೆಯ ಜಿಲ್ಲಾ ನಿರ್ದೇಶಕ ಪ್ರದೀಪ ಶೆಟ್ಟಿ, ಅರ್ಚಕ ಚನ್ನಯ್ಯ ಆರಾಧ್ಯಮಠ, ಎಸ್.ಬಿ. ಪಾಟೀಲ, ಸುಮಾ ಸೊಪ್ಪಿ, ರೇಖಾ ಕಲಘಟಗಿ, ವಲಯ ಮೇಲ್ವಿಚಾರಕ ಸೋಮನಿಂಗ ಗರಗ, ಶಿಕ್ಷಕಿ ರಂಜನಾ ಪಂಚಾಳ, ಹಳಿಯಾಳ ವಲಯದ ಭಾಸ್ಕರ ಪಟಕಾರ, ವರ್ಷಾ, ಮಧು, ಲಕ್ಷ್ಮೀ, ರೇಣುಕಾ ಇದ್ದರು.