ಕನ್ನಡಪ್ರಭ ವಾರ್ತೆ ಬೇಲೂರು

ವಿಧಾನಪರಿಷತ್ ಚುನಾವಣೆಯಲ್ಲಿ ತಾವು ಅಡ್ಡಮತದಾನ ಮಾಡಿಲ್ಲ ಎಂದು ಶಾಸಕ ಎಚ್.ಕೆ. ಸುರೇಶ್ ಮಂಗಳವಾರ ವಿಶ್ವವಿಖ್ಯಾತ ಚನ್ನಕೇಶವ ದೇವಸ್ಥಾನದ ಮುಂಭಾಗ ಐತಿಹಾಸಿಕ ಹಿನ್ನೆಲೆಯುಳ್ಳ ಬಲಿಪೀಠ ಮುಟ್ಟಿ ಪ್ರಮಾಣ ಮಾಡಿದರು.ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯ ಬಳಿಕ ತಮ್ಮ ವಿರುದ್ಧ ಕೆಲವು ರಾಜಕೀಯ ವಲಯಗಳಿಂದ ಅಡ್ಡಮತದಾನದ ಆರೋಪಗಳು ಕೇಳಿಬಂದಿದ್ದವು. ಈ ಆರೋಪಗಳಿಗೆ ತೆರೆ ಎಳೆಯುವ ಉದ್ದೇಶದಿಂದ ಶಾಸಕ ಎಚ್. ಕೆ. ಸುರೇಶ್ ಅವರು ಚನ್ನಕೇಶವ ಸ್ವಾಮಿಯ ಸನ್ನಿಧಿಗೆ ಆಗಮಿಸಿ, ದೇವರ ಸಮ್ಮುಖದಲ್ಲಿ ತಾವು ಯಾವುದೇ ಅಡ್ಡಮತದಾನ ಮಾಡಿಲ್ಲ ಎಂದು ಪ್ರಮಾಣ ಮಾಡಿ ಧರ್ಮಸ್ಥಳದಲ್ಲಿ ಕೂಡ ಪ್ರಮಾಣ ಮಾಡಲು ತೆರಳುತ್ತಿರುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಚ್. ಕೆ.ಸುರೇಶ್, ನಾನು ಯಾವುದೇ ಒತ್ತಡ, ಆಮಿಷ ಅಥವಾ ವೈಯಕ್ತಿಕ ಲಾಭಕ್ಕಾಗಿ ಮತ ಚಲಾಯಿಸಿಲ್ಲ. ನಮ್ಮ ಪಕ್ಷದ ಅಭ್ಯರ್ಥಿಗೆ ನಿಷ್ಠೆಯಿಂದ ಮತ ಹಾಕಿದ್ದೇನೆ. ಅದರಂತೆ ಧರ್ಮಸ್ಥಳಕ್ಕೆ ತೆರಳಿ ಅಣ್ಣಪ್ಪ ಸ್ವಾಮಿಯ ದರ್ಶನವನ್ನು ಮಾಡಿ ಬಳಿಕ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪ್ರಮಾಣ ಮಾಡಲಾಗುತ್ತದೆ ಇಂತಹ ಷಡ್ಯಂತ್ರಕ್ಕೆ ನಾನು ಎಂದಿಗೂ ಕೂಡ ಜಗ್ಗುವುದಿಲ್ಲ ಕಾರಣ ಕ್ಷೇತ್ರದ ಜನತೆ ನನ್ನ ಮೇಲೆ ಅಪಾರವಾದ ವಿಶ್ವಾಸವನ್ನು ಇಟ್ಟಿದ್ದಾರೆ. ಅಲ್ಲದೆ ನರೇಂದ್ರ ಮೋದಿಯವರು ನನ್ನ ಚುನಾವಣೆ ಸಂದರ್ಭದಲ್ಲಿ ಪ್ರಚಾರ ನಡೆಸಿದ್ದನ್ನು ನಾನು ಎಂದಿಗೂ ಮರೆಯುವುದಿಲ್ಲ. ಪಕ್ಷದ್ರೋಹ ಮಾಡುವುದಿಲ್ಲ. ನನ್ನ ವಿರುದ್ಧ ಮಾಡಲಾಗುತ್ತಿರುವ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ರಾಜಕೀಯ ದುರುದ್ದೇಶದಿಂದ ಕೂಡಿವೆ. ದೇವರ ಮುಂದೆ ಸುಳ್ಳು ಹೇಳುವ ಪ್ರಶ್ನೆಯೇ ಇಲ್ಲ. ನನ್ನ ರಾಜಕೀಯ ಜೀವನ ಪಾರದರ್ಶಕತೆ ಮತ್ತು ಜನರ ವಿಶ್ವಾಸದ ಮೇಲೆ ನಿಂತಿದೆ. ನನ್ನ ಮೇಲೆ ಜನರು ಇಟ್ಟಿರುವ ನಂಬಿಕೆಯನ್ನು ಎಂದಿಗೂ ದ್ರೋಹ ಮಾಡುವುದಿಲ್ಲ ಎಂದರು.ಇತ್ತೀಚೆಗೆ ನಡೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಕೆಲ ಬಿಜೆಪಿ ಶಾಸಕರು ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಮತ ಹಾಕಿದ್ದಾರೆ ಎಂದು ಕೆಲವರ ಮೇಲೆ ಆರೋಪ ಬಂದಿತ್ತು. ಹಾಗೆಯೇ ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಎಚ್. ಕೆ. ಸುರೇಶ್‌ ಅವರ ಮೇಲೂ ಈ ಆರೋಪ ಇತ್ತು. ಅದರಲ್ಲೂ ಸಿಎಂ ಆಗಿರುವ ಡಿ.ಕೆ.ಶಿವಕುಮಾರ್‌ ಅವರು ಬೇಲೂರು ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವುದಾಗಿ ಆಮಿಷ ಒಡ್ಡಿದ್ದಾರೆ. ಹಾಗಾಗಿ ಸುರೇಶ್‌ ಬಿಜೆಪಿ ಅಭ್ಯಥಿಗೆ ಅಡ್ಡಮತದಾನ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸುರೇಶ್‌ ಮಂಗಳವಾರ ಶ್ರೀ ಚನ್ನಕೇಶವನ ಮುಂದೆ ಪ್ರಮಾಣ ಮಾಡಿದ್ದಾರೆ.