ಸಾರಾಂಶ
ದೇವದುರ್ಗ ತಾಲೂಕಿನ ಕೊಪ್ಪರ, ಯಾಟಗಲ್, ಗೂಗಲ್, ಇಟಗಿ ಸೇರಿ ಅನೇಕ ಗ್ರಾಮಗಳಿಗೆ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಭೇಟಿ ನೀಡಿ ಪ್ರವಾಹದ ಜಾಗೃತಿ ಮೂಡಿಸಿದರು.
ದೇವದುರ್ಗ: ಬಸವ ಸಾಗರದಲ್ಲಿ ಒಳಹರಿವು ಹೆಚ್ಚಾಗಿರುವ ಹಿನ್ನೆಲೆ ಕೃಷ್ಣಾ ನದಿ ಪಾತ್ರದಲ್ಲಿ ಹೆಚ್ಚುವರಿ ನೀರು ಹರಿಸಲಾಗಿದ್ದು, ನದಿ ದಂಡೆಯಲ್ಲಿರುವ ಗ್ರಾಮಸ್ಥರು ಸುರಕ್ಷಿತ ಕ್ರಮ ಪಾಲಿಸಬೇಕೆಂದು ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಮನವಿ ಮಾಡಿದ್ದಾರೆ.
ತಾಲೂಕಿನ ಕೊಪ್ಪರ, ಯಾಟಗಲ್, ಗೂಗಲ್, ಇಟಗಿ ಸೇರಿ ಅನೇಕ ಗ್ರಾಮಗಳಲ್ಲಿ ಗ್ರಾಮಸಭೆ ಮೂಲಕ ಮನವಿ ಮಾಡಿದರು. ಮಕ್ಕಳು ಹಾಗೂ ಜಾನುವಾರುಗಳು ನದಿ ದಂಡೆಗೆ ಹೋಗದಂತೆ ಜಾಗೃತಿ ವಹಿಸಬೇಕು. ಮುಂಜಾಗ್ರತಾವಾಗಿ ಈಗಾಗಲೇ ಡಂಗುರ ಮೂಲಕ ಸಾರಲಾದ ಅಂಶಗಳನ್ನು ಪಾಲಿಸಬೇಕು. ತೊಂದರೆಯಾದಲ್ಲಿ ಕೂಡಲೇ ಗ್ರಾಮಲೆಕ್ಕಿಗರು, ಕಂದಾಯ ನೀರಿಕ್ಷಕರು ಹಾಗೂ ತಹಸೀಲ್ದಾರ್ ಕಚೇರಿಗೆ ಮಾಹಿತಿ ನೀಡಬೇಕು.ನದಿ ಪಾತ್ರದಲ್ಲಿ ಹೊಸ ನೀರು ಹರಿಯುತ್ತಿರುವದರಿಂದ ಕುಡಿವ ನೀರಿನ ತೊಂದರೆ ಮತ್ತು ಅನಾರೋಗ್ಯ ಕಾಡುವ ಸಂದರ್ಭವಿರುತ್ತಿದ್ದು, ಆರೋಗ್ಯ ಇಲಾಖೆ ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ಸೇವಾ ಕಾರ್ಯಾಚರಣೆ ಪ್ರಾರಂಭಗೊಳಿಸಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಅವರು ತಿಳಿಸಿದರು.
ತಾಲೂಕಿನ ಕರ್ಕಿಹಳ್ಳಿ ಗ್ರಾಮದ ಪ್ರಾಥಮಿಕ ಶಾಲೆಗೆ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಶುಕ್ರವಾರ ಭೇಟಿ ನೀಡಿದರು. ಬಿಸಿಊಟ ಹಾಗೂ ಅಡುಗೆ ಕೋಣೆ ಸೇರಿ ಇತರೆ ಸೌಲಭ್ಯ ಪರಿಶೀಲಿಸಿದರು. ಶಾಲಾ ಮಕ್ಕಳೊಂದಿಗೆ ಬಿಸಿಊಟ ಸೇವೆಸಿದರು. ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.