ಬಂಗಾರಪೇಟೆ ಪಟ್ಟಣದ ಸ.ನಂ. 7ರಲ್ಲಿ ವಿವಿಧ ಸರ್ವೆ ನಂಬರ್‌ಗಳ ಮೂಲಕ ಹಾದು ಹೋಗುವ ನೀರಿನ ರಾಜಕಾಲುವೆಯನ್ನು ಮುಚ್ಚಿರುವುದನ್ನು ತೆರವುಗೊಳಿಸಲು ಪಟ್ಟಣದ‌ ನಿವಾಸಿ ಪ್ರೇಮ್ ಕುಮಾರ್ ಎಂಬುವರು ಜಿಲ್ಲಾಧಿಕಾರಿಗಳಿಗೆ ಮನವಿ‌ ಮಾಡಿಕೊಂಡಿದ್ದರು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಸ್ಥಳೀಯ ರಿಯಲ್ ಎಸ್ಟೇಟ್ ಮಾಫಿಯಾಗಳ ಒತ್ತುವರಿಯಿಂದ ಕಣ್ಮರೆಯಾಗಿರುವ ರಾಜುಕಾಲುವೆಯನ್ನು‌ ಸರ್ವೆ ಮೂಲಕ ಪತ್ತೆ ಹಚ್ಚಿ ತೆರವುಗೊಳಿಸಿ ಮಾರ್ಚ್‌ 7ರೊಳಗೆ ವರದಿ ನೀಡುವಂತೆ ಲೋಕಾಯುಕ್ತರು ತಹಸೀಲ್ದಾರ್‌ಗೆ ನೋಟಿಸ್‌ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ವೇ ಕಾರ್ಯ ಚುರುಕಾಗಿದೆ.‌ಕಸಬಾ ಹೋಬಳಿ ಬಂಗಾರಪೇಟೆ ಪಟ್ಟಣದ ಸ.ನಂ. 7ರಲ್ಲಿ ವಿವಿಧ ಸರ್ವೆ ನಂಬರ್‌ಗಳ ಮೂಲಕ ಹಾದು ಹೋಗುವ ನೀರಿನ ರಾಜಕಾಲುವೆಯನ್ನು ಮುಚ್ಚಿರುವುದನ್ನು ತೆರವುಗೊಳಿಸಲು ಪಟ್ಟಣದ‌ ನಿವಾಸಿ ಪ್ರೇಮ್ ಕುಮಾರ್ ಎಂಬುವರು ಜಿಲ್ಲಾಧಿಕಾರಿಗಳಿಗೆ ಮನವಿ‌ ಮಾಡಿಕೊಂಡಿದ್ದರು.ಅದರಂತೆ ಜಿಲ್ಲಾಧಿಕಾರಿಗಳ ಆದೇಶ ಅನ್ವಯ ಕಳೆದ ವರ್ಷ ಸೆಪ್ಟೆಂಬರ್‌ 19 ಮತ್ತು 20 ರಂದು ತಾಲೂಕು ಸರ್ವೆ ಅಧಿಕಾರಿ, ಕಸಬಾ ರಾಜಸ್ವ ನಿರೀಕ್ಷಕ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಜಂಟಿಯಾಗಿ ಸದರಿ ವಿವಿಧ ಸರ್ವೆ ನಂಬರ್ ಗಳ ಮುಖಾಂತರ ಕೆರೆಗೆ ಹಾದು ಹೋಗುವ ನೀರಿನ ರಾಜುಕಾಲುವೆಯನ್ನು ಅಳತೆ ಮಾಡಿ ಒತ್ತುವರಿಯಾಗಿರುವ ಬಗ್ಗೆ ಕ್ರಮ ತೆಗೆದುಕೊಳ್ಳಲು ನಕ್ಷೆಯೊಂದಿಗೆ ತಹಸೀಲ್ದಾರ್‌ರಿಗೆ ವರದಿ ಸಲ್ಲಿಸಿದ್ದರು.ಗ್ರಾಮಸ್ಥರ ಸಮಕ್ಷಮ ಕಾಲುವೆಯ ಸುತ್ತಮುತ್ತಲಿನ ಆಸ್ತಿಗಳನ್ನು ಅಳತೆ ಮಾಡಿ ಕೋಆರ್ಡಿನೇಟ್ ಪಾಯಿಂಟ್‌ಗಳನ್ನು ಸಂಗ್ರಹಿಸಲಾಗಿದ್ದು, ಸದರಿ ಕೋಆರ್ಡಿನೆಟ್ ಪಾಯಿಂಟ್‌ಗಳನ್ನು ಗಣಕಯಂತ್ರದಲ್ಲಿ ಜೋಡಿಸಿಕೊಂಡು ಕಾಲುವೆಯ ಲಾಗು ಸರ್ವೆ ನಂಬರ್ ಗಳ ಪ್ಲಾಟ್ ಮಾಡಿ ಸ್ಥಳದಲ್ಲಿ ದೊರಕಿದ ಸರ್ವೆ ಕಲ್ಲುಗಳ ಮೇಲೆ ಪಡೆದ ಕೋಆರ್ಡಿನೇಟ್‌ಗಳೊಂದಿಗೆ ಕೂರಿಸಿಕೊಂಡು ಪುನಃ ಸ್ಥಳಕ್ಕೆ ಹೋಗಿ ಕಾಲುವೆಯ ಮಾರ್ಕಿಂಗ್ ಅವಶ್ಯಕತೆಯಿತ್ತು.ಸದರಿ ಕಾಲುವೆಯನ್ನು ಮಾರ್ಕಿಂಗ್ ಮಾಡುವ ಸಮಯದಲ್ಲಿ ಪುರಸಭೆ ಹಾಗೂ ಗ್ರಾಮ ಪಂಚಾಯಿತಿ ಕಾರ್ಯಾಲಯದ ಸಿಬ್ಬಂದಿ ಅವಶ್ಯಕತೆಯಿದ್ದು,‌ ಈ ಮಧ್ಯೆ ತಾಲೂಕು ಸರ್ವೆ ಅಧಿಕಾರಿ ಕರ್ತವ್ಯದಿಂದ ಬಿಡುಗಡೆಗೊಂಡಿರುವ ಕಾರಣ ನಕ್ಷೆಯಲ್ಲಿ ಅಲೈನ್ ಮೆಂಟ್ ಹಾಗೂ ಮಾರ್ಕಿಂಗ್ ಕಾರ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ದಿನಾಂಕ ಕಳೆದ ವಾರ ಸಂಬಂಧಿಸಿದ ಅಧಿಕಾರಿಗಳು ಜಂಟಿಯಾಗಿ ಕೆರೆಗೆ ಹಾದು ಹೋಗುವ ನೀರಿನ ರಾಜಕಾಲುವೆಗಳನ್ನು ಅಳತೆ ಮಾಡಿ ನಕ್ಷೆಯಂತೆ ಒತ್ತುವರಿ ತೆರವುಗಳಿಸಿ ಮಹಜರ್ ವರದಿ ಸಲ್ಲಿಸಲು ತಹಸೀಲ್ದಾರ್ ಅವರು ಸೂಚಿಸಿದ್ದಾರೆ.ಈ ಸೂಚನೆ ಹಿನ್ನೆಲೆಯಲ್ಲಿ ‌ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅರ್ಧದಲ್ಲೇ ನಿಂತುಕೊಂಡಿದ್ದ ರಾಜಕಾಲುವೆಗಳ ಒತ್ತುವರಿ ಸರ್ವೆ ಅಳತೆ ಕಾರ್ಯ ಪೂರ್ಣಗೊಳಿಸಿದ್ದಾರೆ.ಒತ್ತುವರಿ ತೆರುವು ಯಾವಾಗ:

ಅಧಿಕಾರಿಗಳು ನಡೆಸಿದ ರಾಜಕಾಲುವೆಗಳ ಒತ್ತುವರಿಯನ್ನು ಸರ್ವೆ ಮೂಲಕ ಪತ್ತೆ ಹಚ್ಚಲಾಗಿದೆ. ಒತ್ತುವರಿಯಾಗಿರುವ ರಾಜಕಾಲುವೆಗಳು ರಿಯಲ್ ಎಸ್ಟೇಟ್ ಮಾಫಿಯಾದಿಂದ ಹುಡುಕಾಡಬೇಕಾದ ಪರಿಸ್ಥಿತಿ ಬಂದಿದೆ. ಒತ್ತುವರಿ ರಾಜುಕಾಲುವೆ ಸಂಪೂರ್ಣವಾಗಿ ಮುಚ್ಚಿ ಹೋಗಿದೆ. ಕಾಲುವೆ ಒತ್ತುವರಿ ಜಾಗದಲ್ಲಿ ಐಷರಾಮಿ ಕಟ್ಟಡಗಳು ಎದ್ದಿವೆ. ರಿಯಲ್ ಎಸ್ಟೇಟ್ ಮಾಫಿಯಾಗೆ ರಾಜಕಾಲುವೆ ಮೂಲವೇ ಮಾಯವಾಗಿದೆ. ಬೇಸಿಗೆ ಕಾಲ ಪ್ರಾರಂಭವಾಗಿದೆ. ಮಳೆಗಾಲದೊಳಗಡೆ ಒತ್ತುವರಿ ತೆರುವುಗೊಳಿಸಿ ರಾಜುಕಾಲುವೆ ವಿಂಗಡಿಸಿದರೆ ಕೆರೆಗೆ ಮಳೆ‌ ನೀರು ಹಾದು ಹೋಗಲು ಬಹಳ ಅನುಕೂಲವಾಗುತ್ತದೆ. ತಾಲೂಕು ಆಡಳಿತ ಮುಲಾಜಿಲ್ಲದೆ ಒತ್ತುವರಿಯನ್ನು ತೆರವುಗೊಳಿಸಿ ರಾಜಕಾಲುವೆಗಳಿಗೆ ಮತ್ತೆ ಚಾಲನೆ ನೀಡಬೇಕಿದೆ.ನಿವೇಶನಗಳಾಗಿ ರಾಜಕಾಲುವೆ ಮಾರಾಟ:

ರಿಯಲ್ ಎಸ್ಟೇಟ್ ಪ್ರಭಾವದಿಂದ ರಾಜಕಾಲುವೆಗಳನ್ನೇ ನಿವೇಶನಗಳನ್ನಾಗಿ ಗುರ್ತಿಸಿ ಸಾರ್ವಜನಿಕರಿಗೆ ಮಾರಾಟ ಮಾಡಲಾಗಿದೆ ಎಂಬ ಆರೋಗಳು ವ್ಯಾಪಕವಾಗಿ ಕೇಳಿ ಬರುತ್ತಿದೆ. ಲಕ್ಷಾಂತರ ರುಪಾಯಿಗೆ ಮಾರಾಟ ಮಾಡಿ ಪಂಚಾಯಿತಿಯಲ್ಲಿ ಖಾತೆ ತೆರೆದು ನಂತರ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯೂ ನಡೆದಿದೆ. ಮಾರಾಟವಾಗಿರುವ ರಾಜಕಾಲುವೆ ಸ್ಥಳದಲ್ಲಿ ಕಷ್ಟಪಟ್ಟು ಸಾಲ ಸೋಲ ಮಾಡಿ ಕಟ್ಟಡಗಳನ್ನು ನಿರ್ಮಾಣ ಮಾಡಿಕೊಂಡು ಜೀವನ ನಡೆಸುತ್ತಿರುವವರಿಗೆ ಆತಂಕ ಶುರುವಾಗಿದೆ. ರಾಜಕಾಲುವೆ ಮೂಲವನ್ನೇ ಹಾಳು ಮಾಡಿ ನಿವೇಶನಗಳನ್ನಾಗಿ ವಿಂಗಡಿಸಿ ಮಾರಾಟ ಮಾಡಿರುವವರ ವಿರುದ್ಧ ತಾಲೂಕು ಆಡಳಿತ ಯಾವ ರೀತಿ ಕಾನೂನು ಕ್ರಮಕ್ಕೆ ಮುಂದಾಗುವದೋ ಎಂಬುದನ್ನು ಕಾದು ನೋಡ ಬೇಕಾಗಿದೆ.