ಕನ್ನಡಪ್ರಭ ವಾರ್ತೆ ಮದ್ದೂರು
ಚರ್ಮವಾದ್ಯ ತರಬೇತಿಯಿಂದ ನಮ್ಮ ಸಂಸ್ಕೃತಿ ಉಳಿಸುವ ಜೊತೆಗೆ ಯುವಕರು ಉದ್ಯೋಗ ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಡಾ.ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಾ.ಕೆ.ಎಂ.ವಸುಂಧರಾ ತಿಳಿಸಿದರು.ತಾಲೂಕಿನ ಚಾಮನಹಳ್ಳಿ ಲಿಡ್ಕರ್ ಭವನದಲ್ಲಿ ಡಾ.ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಬೆಂಗಳೂರು, ಅಖಿಲ ಕರ್ನಾಟಕ ಡಾ.ಬಾಬು ಜಗಜೀವನ್ ರಾಂ ಸಂಘಗಳ ಒಕ್ಕೂಟ, ಜಾನಪದ ಪರಿಷತ್ನಿಂದ ಸೋಮವಾರ ಸಂಜೆ ಆಯೋಜಿಸಿದ್ದ ಚರ್ಮ ವಾದ್ಯ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ತರಬೇತಿ ಪಡೆದವರಿಗೆ ಪ್ರಶಸ್ತಿ ಪತ್ರ ಹಾಗೂ ಚರ್ಮವಾದ್ಯಗಳನ್ನು ವಿತರಿಸಿ ಮಾತನಾಡಿದರು.
ನಿಗಮವು ಪರಿಶಿಷ್ಟ ಜಾತಿಯ (ಎಸ್ಸಿ) ಚರ್ಮ ಕುಶಲಕರ್ಮಿಗಳ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿದೆ. ಕೌಶಲ್ಯ ತರಬೇತಿ, ಸಾಲ ಸೌಲಭ್ಯ ಮತ್ತು ಚರ್ಮ ಉತ್ಪನ್ನಗಳ ಮಾರುಕಟ್ಟೆ ಅವಕಾಶಗಳನ್ನು ಒದಗಿಸುತ್ತದೆ ಎಂದರು.ಚರ್ಮ ಕುಶಲಕರ್ಮಿಗಳಿಗೆ ತರಬೇತಿ ನೀಡಿ ಸುಧಾರಿತ ಉಪಕರಣಗಳನ್ನು ಒದಗಿಸಿ ಅವರು ತಯಾರಿಸಿದ ಉತ್ಪನ್ನಗಳಿಗೆ (ಲಿಡ್ಕರ್ ಬ್ರಾಂಡ್ ಹೆಸರಿನಲ್ಲಿ) ಮಾರುಕಟ್ಟೆ ಒದಗಿಸುವ ಮೂಲಕ ಸ್ವಯಂ ಉದ್ಯೋಗವನ್ನು ಉತ್ತೇಜಿಸಲಾಗುವುದು ಎಂದರು.
ರಾಜ್ಯದಲ್ಲಿ ಈಗಾಗಲೇ ಸುಮಾರು 18 ಮಳಿಗೆಗಳನ್ನು ಆರಂಭಿಸಿದ್ದು, ಶೀಘ್ರ ಮಂಡ್ಯದಲ್ಲೂ ಜೂನ್ ತಿಂಗಳಲ್ಲಿ ಲಿಡ್ಕರ್ ಮಳಿಗೆಯನ್ನು ಆರಂಭಿಸಲು ನಿಗಮದಿಂದ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ತಮಟೆಯು ನಮ್ಮ ಸಂಸ್ಕೃತಿಯ ಸಂಕೇತ ಹಾಗೂ ಪ್ರತಿಭಟನೆ, ಭಕ್ತಿ, ಕೋಪ, ಆಕ್ರೋಶ ಸೇರಿದಂತೆ ಹಲವು ವಿಷಯಗಳಿಗೆ ತಮಟೆ ಸಾಕ್ಷಿಯಾಗಿದೆ. ನಿಗಮದ ಚರ್ಮವಾದ್ಯ ತರಬೇತಿ ಸದುಪಯೋಗ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಯುವಕರಿಗೆ ಕಿವಿಮಾತು ಹೇಳಿದರು.
ಹಲವು ತಂಡಗಳು ಅಮೆರಿಕದಲ್ಲಿ ನಡೆಯುವ ಅಕ್ಕ ಸಮ್ಮೇಳನದಲ್ಲಿ ಹೋಗಿ ಜನಪದ ಪ್ರದರ್ಶನಗಳನ್ನ ಹಮ್ಮಿಕೊಂಡು ಪ್ರಶಸ್ತಿಗಳನ್ನು ಪಡೆದುಕೊಂಡು ಬಂದಿರುವುದು ಮೆಚ್ಚುಗೆಯ ವಿಷಯ. ತಮಟೆ ವಾದ್ಯವು ಸಂಸ್ಕೃತಿ, ಶ್ರೀಮಂತಿಕೆ, ಗಾಂಭೀರ್ಯ ಹಾಗೂ ಪರಂಪರೆ ಸೂಚಿಸುತ್ತದೆ. ತರಬೇತಿ ಪಡೆದ ಯುವಕರು ಬೇರೆಯವರಿಗೂ ತರಬೇತಿ ನೀಡಬೇಕು ಎಂದರು.ಕರ್ನಾಟಕ ಜಾನಪದ ಪರಿಷತ್ತ್ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ ಮಾತನಾಡಿ, ಜಾನಪದ ಕಲೆಗಳು ತನ್ನದೆಯಾದ ಮಹತ್ವ ಹೊಂದಿದೆ. ಜತೆಗೆ ವ್ಯಕ್ತಿಯ ಬದುಕು ರೂಪಿಸಿಕೊಳ್ಳಲು ಹಾಗೂ ಉದ್ಯೋಗ ಪಡೆದುಕೊಳ್ಳಲು ಸಹಕಾರಿಯಾಗಿದೆ. ನಿರಂತರ ಪರಿಶ್ರಮ ಪಟ್ಟರೆ ಯಾವುದೇ ಕಲೆಯಲ್ಲೂ ಯಶಸ್ವಿಯಾಗಿ ಜನ ಪ್ರಸಿದ್ಧಿ ಪಡೆಯಬಹುದು ಎಂದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜು ಮಾತನಾಡಿ, ನಾಡು ಹಾಗೂ ದೇಶ ಕಲೆಗಳ ಮೇಲೆ ನಿಂತಿದೆ. ಕಲೆಗಳು ಮನಸಿನ ಒತ್ತಡ ನಿವಾರಣೆ ಮಾಡಿ ಉತ್ತಮ ವ್ಯಕ್ತಿತ್ಚ ರೂಪಿಸುತ್ತದೆ ಎಂದರು.ರಾಷ್ತ್ರೀಯ ಯುವ ಪ್ರಶಸ್ತಿ ಪುರಸ್ಕೃತ ಕೀಲಾರ ಕೆ.ಎಂ.ಕೃಷ್ಣೇಗೌಡ ಮಾತನಾಡಿ, ಅಳಿವಿನಂಚಿರುವ ಜನಪದ ಕಲೆಗಳನ್ನು ಉಳಿಸಲು ಮತ್ತು ಪ್ರೋತ್ಸಾಹಿಸಲು ಕಾರ್ಯಾಗಾರಗಳು ಅತ್ಯವಶ್ಯಕ ಎಂದರು.
ತರಬೇತಿದಾರ ಸಿ.ಮಂಜುನಾಥ್ ಮಾತನಾಡಿ, ತರಬೇತಿ ಪಡೆದ ಯುವಕರಿಗೆ ಹಲವು ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಈ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.ಅಖಿಲ ಕರ್ನಾಟಕ ಡಾ.ಬಾಬು ಜಗಜೀವನ್ ರಾಮ್ ಸಂಘದ ಚಾಮನಹಳ್ಳಿ ಮಂಜು ಮಾತನಾಡಿದರು. ನಿಗಮದ ಜಿಲ್ಲಾ ಸಂಚಾಲಕ ಚೇತನ್, ಮುಖಂಡರಾದ ಪುಟ್ಟರಂಗಯ್ಯ, ಗುರುರಾಜ್, ಕಿರಣ್, ಲತಾಕುಮಾರಿ, ಹನುಮಂತು, ಆನಂದ್, ವಿನಯ್, ಕೇಶವ ಸೇರಿದಂತೆ ಇತರರು ಇದ್ದರು.