ಶಿರಹಟ್ಟಿ: ಪರಿಸರವು ಗಾಳಿ, ನೀರು, ಮಣ್ಣು, ಸಸ್ಯಗಳು ಮತ್ತು ಪ್ರಾಣಿಗಳ ಸಮೂಹವಾಗಿದೆ. ಇವುಗಳ ಸಮತೋಲನದಿಂದಲೇ ಜೀವಜಗತ್ತು ಉಳಿದುಕೊಂಡಿದೆ ಎಂದು ಪಪಂ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ನಗರ ಘಟಕದ ಅಧ್ಯಕ್ಷ ನಾಗರಾಜ ಲಕ್ಕುಂಡಿ ತಿಳಿಸಿದರು.ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬಿಜೆಪಿ ನಗರ ಘಟಕದ ವತಿಯಿಂದ ಪಟ್ಟಣದಲ್ಲಿ ಸಸಿ ನೆಟ್ಟು ಮಾತನಾಡಿ, ಅರಣ್ಯನಾಶ, ಮಾಲಿನ್ಯ, ಅತಿಯಾದ ಸಂಪನ್ಮೂಲ ಬಳಕೆ ಮತ್ತು ಹವಾಮಾನ ಬದಲಾವಣೆಗಳಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಇದರ ಪರಿಣಾಮವಾಗಿ ಬರ, ಪ್ರವಾಹ, ತಾಪಮಾನ ಏರಿಕೆ ಮತ್ತು ವಿವಿಧ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದರು.

ಮರಗಳನ್ನು ನೆಡುವುದು, ನೀರನ್ನು ಮಿತವಾಗಿ ಬಳಸುವುದು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಪರಿಸರಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಸಣ್ಣ ಪ್ರಯತ್ನವೂ ಪರಿಸರ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡುತ್ತದೆ ಎಂದರು.ಪರಿಸರವನ್ನು ಕಾಪಾಡುವುದು ಎಂದರೆ ನಮ್ಮದೇ ಜೀವನ ಮತ್ತು ಮುಂದಿನ ಪೀಳಿಗೆಯ ಭವಿಷ್ಯವನ್ನು ಕಾಪಾಡಿದಂತೆಯೇ. ಆದ್ದರಿಂದ ಪರಿಸರ ಉಳಿದರೆ ಮನುಕುಲದ ಉಳಿವು ಎಂಬುದು ಸತ್ಯ. ಈ ಬಾರಿ ತಾಪಮಾನ ವಿಪರೀತ ಹೆಚ್ಚಾಗಿದ್ದು, ಸಸಿಗಳನ್ನು ಬೆಳೆಸಿ ಸಂರಕ್ಷಿಸುವುದು ಇಂದಿನ ಅಗತ್ಯವಾಗಿದೆ ಎಂದರು.ಮುಖಂಡ ಫಕ್ಕೀರೇಶ ರಟ್ಟಿಹಳ್ಳಿ, ತಿಮ್ಮರಡ್ಡಿ ಮರಡ್ಡಿ ಮಾತನಾಡಿ, ಬದಲಾವಣೆಗೆ ನಾವೆಲ್ಲರೂ ಕೈಜೋಡಿಸಬೇಕಾಗಿದೆ. ಪ್ರಕೃತಿಯ ಮೇಲೆ ಮಾನವನ ಅಕ್ರಮಣ ಹೆಚ್ಚಾಗುತ್ತಿದೆ. ಜೀವಪರಿಸರ ಬಿಕ್ಕಟ್ಟು ಉಂಟಾಗಲಿದೆ. ಪ್ರಕೃತಿಯಲ್ಲಿನ ನೈಸರ್ಗಿಕ ಸಂಪತ್ತು ನಾಶವಾಗುತ್ತಿದ್ದು, ಅನೇಕ ಜೀವರಾಶಿಗಳು ಕಣ್ಮರೆಯಾಗುತ್ತಿವೆ. ನೂರಾರು ದೇವರ ಪೂಜೆಗಿಂತ ಒಂದು ಮರ ಬೆಳೆಸುವುದು ಉತ್ತಮ ಎಂದರು.

ಶಂಕರ ಮರಾಠೆ, ನಂದಾ ಪಲ್ಲೇದ, ಪರಶುರಾಮ ಡೊಂಕಬಳ್ಳಿ, ಬಸವರಾಜ ವಡವಿ, ಬಸವರಾಜ ತುಳಿ, ವಿಜಯರಡ್ಡಿ ಮೇಕಳಿ, ಸಂತೋಷ ತೋಡೆಕಾರ, ಉದಯಕುಮಾರ ತೋಟರ, ಮಲ್ಲು ಕಬಾಡಿ, ಮಂಜು ಕಾಳಗಿ, ಹೇಮಂತರಡ್ಡಿ ಅಳವಂಡಿ, ಪರಸು ಗೋಪಾಳಿ, ವೀರನಗೌಡ ಪಾಟೀಲ, ಮಂಜುನಾಥ ಮಾಚೇನಹಳ್ಳಿ, ಅಕ್ಬರ್ ಯಾದಗಿರಿ ಸೇರಿ ಅನೇಕರು ಇದ್ದರು.