ಮರೆತು ಹೋದ ಮನೆಮಾತು ಮರಳಿ ನೆನಪಿಸಲು ಸ್ವಭಾಷಾ ಚಾತುರ್ಮಾಸ್ಯ

| Published : Jun 25 2025, 01:18 AM IST

ಮರೆತು ಹೋದ ಮನೆಮಾತು ಮರಳಿ ನೆನಪಿಸಲು ಸ್ವಭಾಷಾ ಚಾತುರ್ಮಾಸ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಶುದ್ಧವಾದ ಮಾತೃ ಭಾಷೆ ಮಾತನಾಡುವ ಪ್ರಯತ್ನ ಸ್ವಭಾಷಾ ಚಾತುರ್ಮಾಸ್ಯದ ತಿರುಳು. ಮರೆತ ಪದಗಳನ್ನು ನೆನಪಿಸಿಕೊಳ್ಳೋಣ

ಗೋಕರ್ಣ: ಮರೆತು ಹೋದ ಮನೆ ಮಾತನ್ನು ಮರಳಿ ನೆನಪಿಸುವ ಉದ್ದೇಶದಿಂದ ಈ ಬಾರಿಯ ಚಾತುರ್ಮಾಸ್ಯವನ್ನು ಸ್ವಭಾಷಾ ಚಾತುರ್ಮಾಸ್ಯ ಎಂಬ ಅಭಿದಾನದೊಂದಿಗೆ ಆಚರಿಸಲಾಗುತ್ತಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.

ವಿಶ್ವಾವಸು ಸಂವತ್ಸರದ ಚಾತುರ್ಮಾಸ್ಯ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಪರಮಪೂಜ್ಯರು ಆಶೀರ್ವಚನ ನೀಡಿದರು.

ನಾವು ನಮ್ಮ ಭಾಷೆ ಮಾತನಾಡುವುದು ದೇಶ,ಸಂಸ್ಕಂತಿ, ಭಾಷೆ,ಪರಂಪರೆಗೆ ನಾವು ಸಲ್ಲಿಸುವ ಅತಿದೊಡ್ಡ ಸೇವೆ. ಇದು ಜೀವನಕ್ಕೆ ಸ್ವಾರಸ್ಯವನ್ನೂ ತರುತ್ತದೆ ಎಂದರು.

ಶುದ್ಧವಾದ ಮಾತೃ ಭಾಷೆ ಮಾತನಾಡುವ ಪ್ರಯತ್ನ ಸ್ವಭಾಷಾ ಚಾತುರ್ಮಾಸ್ಯದ ತಿರುಳು. ಮರೆತ ಪದಗಳನ್ನು ನೆನಪಿಸಿಕೊಳ್ಳೋಣ. ಪರಕೀಯತೆ ನಮ್ಮ ನಾಲಿಗೆಯಲ್ಲೇ ಇದೆ. ನಮ್ಮ ನಾಲಿಗೆ ಕೆಡಿಸಿಕೊಳ್ಳದಿರೋಣ. ಸಂಸ್ಕಾರದಿಂದ ಶಬ್ದ. ಶಬ್ದದಿಂದ ವಾಕ್ಯ; ಅದು ಭಾಷೆಯ ಮೂಲ. ಆದ್ದರಿಂದ ಪ್ರತಿ ಪದವೂ ತನ್ನೊಂದಿಗೆ ಆ ಭಾಷೆಯ ಸಂಸ್ಕಾರ ತರುತ್ತದೆ. ಈ ಬಗ್ಗೆ ಎಚ್ಚರ ಅಗತ್ಯ ಎಂದು ಪ್ರತಿಪಾದಿಸಿದರು.

ಇದೇ ಮೊಟ್ಟಮೊದಲ ಬಾರಿಗೆ ಇಂಥ ಸೂತ್ರ ಇಟ್ಟುಕೊಂಡು ಚಾತುರ್ಮಾಸ್ಯ ಆಚರಿಸಲಾಗುತ್ತಿದೆ. ಚಾತುರ್ಮಾಸ್ಯ ಧರ್ಮಕ್ಕೆ ಸೀಮಿತ ಎಂದು ವಾದಿಸುವವರಿದ್ದಾರೆ. ಭಾಷೆ ಉಳಿಸುವುದು ಕೂಡಾ ಧರ್ಮದ ಒಂದು ಅಂಗ. ಉರಿಯುವುದು ಬೆಂಕಿಯ ಧರ್ಮ; ಹರಿಯುವುದು ನೀರಿನ ಧರ್ಮ; ಅಂತೆಯೇ ನಮ್ಮ ಭಾಷೆ ಮಾತನಾಡುವುದು ನಮ್ಮ ಧರ್ಮ ಎಂದು ವಿಶ್ಲೇಷಿಸಿದರು.

ಮನೆಮಾತು ಮರೆತು ಹೋಗಿದೆ. ಉಪ ಭಾಷೆಗಳು ಬಹುತೇಕ ನಶಿಸಿವೆ. ಕನ್ನಡ ಮಾತನಾಡುವ ಸಂದರ್ಭದಲ್ಲೂ ಕನ್ನಡ ಕಡೆಗಣಿಸುತ್ತೇವೆ. ನಮ್ಮ ಭಾಷೆಯಲ್ಲಿ ಬೇರೆ ಭಾಷೆ ತೂರಿಕೊಂಡಿದೆ. ಈ ಬಾರಿಯ ಚಾತುರ್ಮಾಸ್ಯ ಭಾಷೆ ಶುದ್ಧಗೊಳಿಸುವ ಪ್ರಯತ್ನಕ್ಕೆ ಶ್ರೀಕಾರ ಹಾಕಲಿದೆ ಎಂದು ಬಣ್ಣಿಸಿದರು.

ಹಲವು ವರ್ಷಗಳ ಹಿಂದೆ ಬಿಎಂಶ್ರೀಯವರ ಕಾಲದಲ್ಲಿ ಒಂದು ಇಂಗ್ಲಿಷ್ ಪದ ಬಳಸಿದರೆ ಒಂದು ರೂಪಾಯಿ ತಪ್ಪುಕಾಣಿಕೆ ತೆಗೆದಿಡಬೇಕು ಎಂಬ ಕಾಸಿನ ಸಂಘ ಹಿಂದೆ ಅಸ್ತಿತ್ವದಲ್ಲಿತ್ತು. ಕನ್ನಡದ ಸಾರ ಉಳಿಸಿಕೊಳ್ಳುವುದು ಇದರ ಉದ್ದೇಶವಾಗಿತ್ತು. ಕನ್ನಡ ಶುದ್ಧವಾಗಿ ಮಾತನಾಡಲು ಕಲಿಯೋಣ. ಭಾಷೆಯಲ್ಲಿ ಒಂದು ಪದ ಮರೆಯಾದರೆ ಅದಕ್ಕೆ ಸಂಬಂಧಿಸಿದ ಸಂಸ್ಕಂತಿ- ಸಂಸ್ಕಾರ ಎಲ್ಲವೂ ನಾಶವಾಗುತ್ತದೆ. ಒಂದು ಪರಕೀಯ ಪದ ಆಯಾ ಭಾಷೆಯ ಸಂಸ್ಕಾರ ತರುತ್ತದೆ. ನಮಗೆ ಗೊತ್ತಾಗದಂತೆ ನಾವೇ ಪರಕೀಯರಾಗುತ್ತಿದ್ದೇವೆ. ಉದಾಹರಣೆಗೆ ಇಂಗ್ಲಿಷ್ ನಾವು ಆವಾಹಿಸಿಕೊಂಡಿರುವ ಆಕ್ರಮಣ. ನಮ್ಮತನ ಉಳಿಸಿಕೊಳ್ಳಬೇಕಾದರೆ ನಮ್ಮ ಭಾಷೆ ಉಳಿಸಿಕೊಳ್ಳುವುದು ಅನಿವಾರ್ಯ ಎಂದು ಪ್ರತಿಪಾದಿಸಿದರು.

ಗುಲಾಮಗಿರಿ, ದಾಸ್ಯದ ಸಂಕೇತ ಏಕೆ ಎಂದು ಈಗ ಪ್ರಶ್ನಿಸದಿದ್ದರೆ ಮುಂದಿನ ದಿನ ಈ ಪ್ರಶ್ನೆ ಎತ್ತುವವರೂ ಇರಲಾರರು. ರಾಮಚಂದ್ರಾಪುರ ಮಠ ಶುದ್ಧ ದೇಸಿ ತಳಿಯ ಗೋವು ಉಳಿಸಲು ಬಹುದೊಡ್ಡ ಆಂದೋಲನ ನಡೆಸಿದೆ. ಭಾರತೀಯ ತಳಿಗಳ ಪರಿಶುದ್ಧತೆ ಉಳಿಯಬೇಕು ಎಂಬ ಕಾರಣಕ್ಕೆ ತಳಿ ಸಂಕರ ವಿರೋಧಿಸುತ್ತಾ ಬಂದಿದೆ. ಗೋವಿನಲ್ಲಿ ತಳಿಸಂಕರ ಹೇಗೆ ಪ್ರಮಾದವೋ ಭಾಷೆಯಲ್ಲಿ ಕೂಡಾ ಸಂಕರ ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಭಿಪ್ರಾಯಪಟ್ಟರು.

ನಮ್ಮ ಮಾತೃಭಾಷೆಯ ಹಲವು ಪದಗಳು ಮರೆತು ಹೋಗಿವೆ. ಕನ್ನಡ ಮಾತನಾಡುವ ಪ್ರಯತ್ನ ಇಂದಿನಿಂದಲೇ ಆರಂಭವಾಗಲಿ, ಕನ್ನಡ ಮಾತನಾಡಬೇಕಾದಲ್ಲಿ ಕನ್ನಡವನ್ನೇ ಮಾತನಾಡೋಣ. ಪರಿಸ್ಥಿತಿಗೆ ಅನುಗುಣವಾಗಿ ಆಂಗ್ಲ ಭಾಷೆ ಮಾನಾಡಿದರೆ ತಪ್ಪಲ್ಲ; ಆದರೆ ಕನ್ನಡದ ಜತೆ ಅದನ್ನು ಬೆರೆಸುವುದು ಬೇಡ. ಹಾಗೆ ಮಾಡಿದರೆ ಇಡೀ ಸಮಾಜವೇ ಭಾಷೆ ಇಲ್ಲದ ಸಮಾಜವಾಗಿ ಮಾರ್ಪಾಡಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಈ ಸಮಾಜವನ್ನು ಬದಲಾಯಿಸುವ ಕಾರ್ಯ ಇಂದಿನಿಂದಲೇ ಆರಂಭವಾಗಲಿ. ಮನೆಗಳಲ್ಲಿ ಕನ್ನಡ ಅಭ್ಯಸಿಸೋಣ. ಮರೆತು ಹೋದ ಹಳೆ ಪದಗಳ ಮರು ಅನ್ವೇಷಣೆ ನಡೆಯಲಿದೆ, ಮತ್ತೆ ಕೆಲ ಪದ ಸೃಷ್ಟಿ ಮಾಡುವ ಪ್ರಮೇಯವೂ ಬರುತ್ತದೆ. ಅದನ್ನೂ ಮಾಡೋಣ ಎಂದು ಸಲಹೆ ಮಾಡಿದರು.

ಮೊದಲ ಹಂತದಲ್ಲಿ ಪರಕೀಯ ಶಬ್ದ ಕಡಿಮೆ ಮಾಡೋಣ; ಅಂತಿಮವಾಗಿ ಶುದ್ಧ ಭಾಷೆ ಉಳಿಸಿ ಬೆಳೆಸೋಣ. ಚಾತುರ್ಮಾಸ್ಯದಲ್ಲಿ ನಾಲಿಗೆ ಶುದ್ಧೀಕರಣದ ಕಾರ್ಯ ಮಾಡೋಣ.ನಮ್ಮತನ ಉಳಿಸಿಕೊಳ್ಳೋಣ ಎಂದು ಆಶಿಸಿದರು.

ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಜಿ.ಎಲ್. ಗಣೇಶ್, ಚಾತುರ್ಮಾಸ್ಯ ಸಮಿತಿ ಸಂಚಾಲಕ ಮಂಜುನಾಥ ಸುವರ್ಣಗದ್ದೆ, ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ್ ಭಾಸ್ಕರ ಹೆಗಡೆ, ಮಹಾಮಂಡಲ ಉಪಾಧ್ಯಕ್ಷ ಜಿ.ಜಿ. ಹೆಗಡೆ ತಲೆಕೇರಿ, ಯುಎಸ್‍ಜಿ ಭಟ್ ಮತ್ತಿತರರು ಉಪಸ್ಥಿತರಿದ್ದರು.