ಕನಕಪುರ: ಜೀವನದಲ್ಲಿ ಯಶಸ್ಸು ಹಾಗೂ ಗುರಿ ಸಾಧಿಸಲು ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕೋಡಿಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಟಿ.ವೆಂಕಟೇಶ್ ತಿಳಿಸಿದರು
ಕನಕಪುರ: ಜೀವನದಲ್ಲಿ ಯಶಸ್ಸು ಹಾಗೂ ಗುರಿ ಸಾಧಿಸಲು ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕೋಡಿಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಟಿ.ವೆಂಕಟೇಶ್ ತಿಳಿಸಿದರು. ನಗರದ ಬ್ಲಾಸಮ್ ಶಾಲೆಯಲ್ಲಿ ಮಾತೃಶ್ರೀ ನಮನ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 163ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಎಂದರೆ ಕೇವಲ ಮಾಹಿತಿ ತುಂಬುವುದಲ್ಲ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ ಉತ್ತಮ ವ್ಯಕ್ತಿತ್ವ ರೂಪಿಸುವುದು ಶಿಕ್ಷಣದ ಆಶಯವಾಗಬೇಕು. ಇಡೀ ಜಗತ್ತಿಗೆ ವಿವೇಕದ ಬೆಳಕನ್ನು ನೀಡಿದ ಮಹಾ ಸಂತ ವಿವೇಕಾನಂದರು ಸಾರಿದ ಹಿಂದೂ ಧರ್ಮದ ಹಿರಿಮೆಯ ಜೊತೆಗೆ ಜಗತ್ತಿನ ಎಲ್ಲಾ ಧರ್ಮಗಳನ್ನು ಗೌರವಿಸಬೇಕೆನ್ನುವ ತತ್ವಗಳನ್ನು ಎಲ್ಲರೂ ಅನುಸರಿಸಬೇಕು ಎಂದರು.
ಕೋಲ್ಕತಾದಲ್ಲಿ ಜನಿಸಿದ ಬಾಲಕ ನರೇಂದ್ರ ರಾಮಕೃಷ್ಣ ಪರಮಹಂಸರ ಭಕ್ತರಾಗಿ ದೇಶದಲ್ಲಿದ್ದ ಸಾಮಾಜಿಕ ಪಿಡುಗುಗಳ ವಿರುದ್ಧ ಜಾಗೃತಿ, ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಸಮಾನತೆಗೆ ನಾಂದಿ ಹಾಡಿದ ಚಿಂತಕ. ಅಮೆರಿಕಾ ದೇಶದ ಚಿಕಾಗೊ ನಗರದಲ್ಲಿ ಭಾಷಣದ ಮೂಲಕ ಇಡೀ ವಿಶ್ವವೇ ನಿಬ್ಬೆರಗಾಗಿ ನೋಡುವಂತೆ ಜಗತ್ತಿಗೆ ಧಾರ್ಮಿಕ ಬೆಳಕನ್ನು ಚೆಲ್ಲಿದ ಏಕೈಕ ವ್ಯಕ್ತಿ ಸ್ವಾಮಿ ವಿವೇಕಾನಂದರು ಎಂದರು.ಮಾತೃಶ್ರೀ ನಮನ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಡಾ.ಚಂದ್ರ, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಪ್ರತಿಮಾ ದೇವಿ, ಪರಿಸರ ಪ್ರೇಮಿ ಮರಸಪ್ಪ ರವಿ, ಚಾಕನಹಳ್ಳಿ ಗ್ರಾಪಂ ಅಧ್ಯಕ್ಷೆ ದುಂಡಮ್ಮ, ನಗರಸಭೆ ನಾಮನಿರ್ದೇಶನ ಸದಸ್ಯ ವೀರೇಶ್, ಬ್ಲಾಸಮ್ ಶಾಲೆ ಪ್ರಾಂಶುಪಾಲೆ ಗಂಗಾಂಬಿಕೆ, ಮುಖ್ಯಶಿಕ್ಷಕ ನಾಗೇಂದ್ರಪ್ಪ, ಪತ್ರಕರ್ತರಾದ ಟಿ.ಸಿ.ವೆಂಕಟೇಶ್, ಕೆ.ವಿ.ಮನು, ಗಾಯಕ ಚಂದ್ರಾಜ್, ಯುವ ಮುಖಂಡ ದರ್ಶನ್ ಇತರರಿದ್ದರು.
ಕೆ ಕೆ ಪಿ ಸುದ್ದಿ 01:ಕನಕಪುರದ ಬ್ಲಾಸಮ್ ಶಾಲೆಯಲ್ಲಿ ಮಾತೃಶ್ರೀ ನಮನ ಚಾರಿಟಬಲ್ ಟ್ರಸ್ಟ್ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಕೆ.ಟಿ.ವೆಂಕಟೇಶ್, ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಡಾ.ಚಂದ್ರ ಇತರರಿದ್ದರು.