ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ನಗರದ ಎಮ್ಮೆಕೆರೆಯ ಸ್ಮಾರ್ಟ್ ಸಿಟಿ ಸ್ವಿಮ್ಮಿಂಗ್ಪೂಲ್ನ ಆಡಳಿತ ಮಂಡಳಿಯು ಈಜು ಪಟುಗಳಿಗೆ ತರಬೇತಿಗೆ ಸರಿಯಾದ ಅವಕಾಶ ನೀಡುತ್ತಿಲ್ಲ ಎಂದು ದಕ್ಷಿಣ ಕನ್ನಡ ಈಜು ಸಂಸ್ಥೆ ಗಂಭೀರ ಆರೋಪಿಸಿದೆ.ದ.ಕ. ಈಜು ಸಂಸ್ಥೆಯ ಅಧ್ಯಕ್ಷ ಯತೀಶ್ ಬೈಕಂಪಾಡಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಕ್ರೀಡಾ ಈಜು ಪಟುಗಳು 1987 ರಿಂದ ನಗರದ ಮಹಾನಗರ ಪಾಲಿಕೆಯ ಮಂಗಳಾ ಈಜು ಕೊಳದಲ್ಲಿ ಅಭ್ಯಸಿಸುತ್ತಿದ್ದಾರೆ. ಪ್ರಸ್ತುತ ಬೆಳಗ್ಗೆ 5 ರಿಂದ 7 ಗಂಟೆ ಮತ್ತು ರಾತ್ರಿ 7.30 ರಿಂದ 9.30ರವರೆಗೆ ಅಭ್ಯಸಿಸುತ್ತಿದ್ದು, ರಾತ್ರಿಯ ಅಭ್ಯಾಸವನ್ನು 9.30 ಗಂಟೆಗೆ ಮುಗಿಸಿ ಮನೆ ತಲುಪಿ ತಮ್ಮ ದೈನಂದಿನ ಕೆಲಸಗಳನ್ನು ಮಾಡಿ ಮಲಗುವಾಗ ರಾತ್ರಿ 11.00 ಗಂಟೆಯಾಗುತ್ತಿದೆ. ಬೆಳಗ್ಗೆ 4.00 ಗಂಟೆಗೆ ಎದ್ದು ಬೆಳಗ್ಗಿನ ಅಭ್ಯಾಸವನ್ನು 5.00 ರಿಂದ 6.30 ಗಂಟೆ ಯವರೆಗೆ ಮಾಡಿ, ಕೇವಲ 5 ಗಂಟೆಯ ವಿಶ್ರಾಂತಿ ಈಜು ಪಟುಗಳಿಗೆ ದೊರೆಯುತ್ತಿದೆ. ವಿಶ್ರಾಂತಿಯ ಅಭಾವದಿಂದ ಈಜು ಪಟುಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದರು.
ಪ್ರತಿದಿನ ರಾತ್ರಿ 7.30 ರಿಂದ 9.30 ರವರೆಗೆ ಈಜು ಅಭ್ಯಾಸವನ್ನು ಕೇವಲ ಮಂಗಳಾ ಈಜು ಕೊಳದಲ್ಲಿ ಮಾತ್ರ ಮಾಡುತ್ತಿದ್ದು, ಉಳಿದ ಎಲ್ಲ ಈಜು ಕೊಳದಲ್ಲಿ ಅಭ್ಯಾಸಕ್ಕೆ ಪ್ರಾಶಸ್ತವಾದ ಬೆಳಗ್ಗೆ 5 ರಿಂದ 7 ಗಂಟೆ ಮತ್ತು ಸಂಜೆ 6.00 ರಿಂದ 8.00 ಗಂಟೆ ಯವರೆಗೆ ಅವಕಾಶವಿದೆ. ಕಳೆದ ಡಿಸೆಂಬರ್ 2024ರ ವರೆಗೆ ಎಮ್ಮೆಕೆರೆಯ ಈಜು ಕೊಳದಲ್ಲಿ ಅಭ್ಯಸಿಸುತ್ತಿದ್ದು ಈಜು ಕೊಳವನ್ನು ಏಕಾಏಕಿ ಮಂಗಳೂರಿನ ವಿ ವನ್ ಅಕ್ವಾಟಿಕ್ ಸಂಸ್ಥೆಗೆ ಟೆಂಡರ್ ಮೂಲಕ ವಹಿಸಿಕೊಟ್ಟಿದ್ದು ಅಗತ್ಯ ಸಮಯದಲ್ಲಿ ಈಜು ಪಟುಗಳಿಗೆ ಪ್ರವೇಶ ನಿರಾಕರಿಸಿರುತ್ತಾರೆ ಎಂದು ಅವರು ಆರೋಪಿಸಿದರು.ಈ ಬಗ್ಗೆ ಆದ ಅನ್ಯಾಯವನ್ನು ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಮತ್ತು ಉಸ್ತುವಾರಿ, ಸಚಿವರ, ಜಿಲ್ಲಾಧಿಕಾರಿಗಳ ಮತ್ತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಕೂಡ ಕಲಾಪದಲ್ಲಿ ಪ್ರಸ್ತಾಪಿಸಿದ್ದಾರೆ. ಆದರೆ ಪ್ರಯೋಜನವಾಗಿಲ್ಲ ಎಂದರು.