ಸಾರಾಂಶ
ಕನ್ನಡ ಕೇವಲ ಭಾಷೆಯಲ್ಲ, ಅದು ಪ್ರತಿ ಮನದ ಉಸಿರು ಮತ್ತು ಕನ್ನಡವನ್ನು ನಾವು ತಾಯಿಯಂತೆ ಪ್ರೀತಿಸಬೇಕು ಮತ್ತು ತಂದೆಯಂತೆ ಗೌರವಿಸಬೇಕು.
ಮುಂಡಗೋಡ: ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಅಸ್ಮಿತೆಯ ಪ್ರತೀಕ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಸಂತ ಕೊಣಸಾಲಿ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಮುಂಡಗೋಡ ಘಟಕದ ವತಿಯಿಂದ ಪಟ್ಟಣದಲ್ಲಿ ನಿವೃತ್ತ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕನ್ನಡದ ಹಲವಾರು ದಿಗ್ಗಜರು ದೇಶಕ್ಕಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಸುಧಾಮೂರ್ತಿ, ನಾರಾಯಣಮೂರ್ತಿ, ನಂದನ್ ನೀಲೇಕಣಿ, ಹೀಗೆ ಮುಂತಾದವರು ಬಹಳಷ್ಟು ಸಾಧಕರು ಕನ್ನಡವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಸಹಕರಿಸಿದ್ದಾರೆ. ಕನ್ನಡ ಕೇವಲ ಭಾಷೆಯಲ್ಲ, ಅದು ಪ್ರತಿ ಮನದ ಉಸಿರು ಮತ್ತು ಕನ್ನಡವನ್ನು ನಾವು ತಾಯಿಯಂತೆ ಪ್ರೀತಿಸಬೇಕು ಮತ್ತು ತಂದೆಯಂತೆ ಗೌರವಿಸಬೇಕು. ಅಂದಾಗ ಮಾತ್ರ ಕನ್ನಡಕ್ಕೆ ತನ್ನದೇ ಆದ ಸ್ಥಾನ ಉಳಿಯಲಿಕ್ಕೆ ಸಾಧ್ಯವಿದೆ ಎಂದರು.
ಮೊದಲಿಗೆ ಭುವನೇಶ್ವರಿ ದೇವಿಯ ಪೂಜೆಯನ್ನು ನೆರವೇರಿಸಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಈ ಸಂದರ್ಭದಲ್ಲಿ ವಿನಾಯಕ್ ಶೇಟ್ ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿಯ ಕುರಿತು ಉಪನ್ಯಾಸ ನೀಡಿದರು.ಮಲ್ಲಮ್ಮ ನೀರಲಗಿ ಕನ್ನಡ ಕನ್ನಡ ಹಾಡನ್ನು ಹಾಡಿದರು. ಗೌರವ ಕಾರ್ಯದರ್ಶಿ ಎಸ್.ಡಿ. ಮುಡೆಣ್ಣವರ, ಸುಭಾಸ ಡೋರಿ, ಗೌರಮ್ಮ ಕೊಳ್ಳಾನವರ ಮುಂತಾದವರು ಉಪಸ್ಥಿತರಿದ್ದರು.