ಸಾರಾಂಶ
ಬೇಲೂರು: ತಾಲೂಕಿನ ಬಿಕ್ಕೋಡು ಗ್ರಾಮದ ಸರ್ಕಾರಿ ಜಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡುತ್ತಿದ್ದು, ಅಲ್ಲಿದ್ದ ಆಟೋ ನಿಲ್ದಾಣ ತೆರವುಗೊಳಿಸಿದ ಹಿನ್ನೆಲೆ ಗ್ರಾಮಸ್ಥರು ಹಾಗೂ ಚಾಲಕರು ಪ್ರತಿಭಟಿಸಿ ಆ ಜಾಗವನ್ನು ಉಳಿಸಲು ಮನವಿ ಮಾಡಿದ್ದರಿಂದ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಎಂ. ಮಮತಾ ಪರಿಶೀಲನೆ ನಡೆಸಿದರು.
ಅಧಿಕಾರಿಗಳ ವಿರುದ್ಧ ಗರಂ ಆದ ದಂಡಾಧಿಕಾರಿಗಳು:ಸ್ಥಳ ಪರಿಶೀಲನೆ ಮಾಡುವ ವೇಳೆ ಸರ್ಕಾರಿ ಜಾಗವನ್ನು ಕಬಳಿಸಿ ಅಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣ ಮಾಡುತ್ತಿರುವ ಬಗ್ಗೆ ಗಮನಿಸಿದ ತಹಸೀಲ್ದಾರರು, ಗ್ರಾಪಂ ಅಧಿಕಾರಿಗಳಿಗೆ ಯಾರು ಸರ್ಕಾರಿ ಜಾಗದಲ್ಲಿ ಮಳಿಗೆ ನಿರ್ಮಾಣ ಮಾಡಲು ಅನುಮತಿ ಕೊಟ್ಟಿರುವುದು. ಸರ್ವೇ ನಂ. ೩೪ ರಲ್ಲಿ ಗೋಮಾಳ ಜಾಗವಿದೆ. ಆದರೆ ಅಲ್ಲಿ ದೇಗುಲ ನಿರ್ಮಾಣವಾಗಿದೆ. ಅದು ನಮ್ಮ ಸಂಪ್ರದಾಯದ ಸಂಕೇತ. ಆದರೆ ಇಲ್ಲಿ ಖಾಸಗಿಯವರಿಗೆ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಲು ಅನುಮತಿ ಕೊಟ್ಟಿದ್ದು ಯಾರು? ನೀವು ಕಣ್ಣು ಮುಚ್ಚಿ ಕುಳಿತಿದ್ದೀರಾ ಎಂದು ಹರಿಹಾಯ್ದ ಅವರು, ಸರ್ಕಾರಿ ಜಾಗ ಉಳಿಸುವುದು ನಮ್ಮ ಕರ್ತವ್ಯ. ಯಾರು ಬಲಾಡ್ಯರಿದ್ದರೂ ಅವರನ್ನು ಬಿಡುವುದಿಲ್ಲ. ಇಲ್ಲಿ ನಿರ್ಮಾಣ ಮಾಡುತ್ತಿರುವ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು. ಈ ಸರ್ಕಾರಿ ಜಾಗದಲ್ಲಿ ಅನಧಿಕೃತ ಕಟ್ಟಡಗಳಿಗೆ ಅವಕಾಶ ನೀಡಬಾರದು. ಇಲ್ಲಿರುವ ಕೆಲ ವಸ್ತುಗಳನ್ನು ವಶಪಡಿಸಿಕೊಳ್ಳುವಂತೆ ತಿಳಿಸಿ, ಈ ಜಾಗ ಸರ್ಕಾರಿ ಆಸ್ತಿ ಎಂದು ನಾಮಫಲಕ ಹಾಕುವಂತೆ ಸೂಚನೆ ನೀಡಿದರು. ಆಟೊ ಚಾಲಕರು,ಸಾರ್ವಜನಿಕರು ಹಾಗೂ ಗ್ರಾಪಂ ಅಧಿಕಾರಿಗಳು ಇದ್ದರು.