ಸಾರಾಂಶ
ಭಟ್ಕಳ: ಶರಾಬಿ ನದಿ ರಕ್ಷಿಸಿ, ಅದರ ನೈರ್ಮಲ್ಯ ಕಾಪಾಡಿಕೊಳ್ಳಬೇಕೆಂದು ಶರಾಬಿ ನದಿ ರಕ್ಷಿಸಿ ಹೋರಾಟ ಸಮಿತಿಯ ನಿಯೋಗ ಸಹಾಯಕ ಆಯುಕ್ತರನ್ನು ಭೇಟಿಯಾಗಿ ನದಿ ರಕ್ಷಿಸುವಲ್ಲಿ ಗಮನ ಹರಿಸಬೇಕು ಎಂದು ಒತ್ತಾಯಿಸಿತು.
ತಮ್ಮನ್ನು ಭೇಟಿತಾದ ನಿಯೋಗಕ್ಕೆ ಭರವಸೆ ನೀಡಿದ ಸಹಾಯಕ ಆಯುಕ್ತೆ ಡಾ. ನಯನಾ, ಸರಾಬಿ ನದಿ ಮಾಲಿನ್ಯ ನಿರ್ಮೂಲನೆಗೆ ಮುಂದಿನ ವಾರ ಸಭೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
ಸಮಿತಿ ಸದಸ್ಯರು ಮಾತನಾಡಿ, ಇತ್ತೀಚೆಗೆ ಸಮಿತಿಯಿಂದ ಶರಾಬಿ ನದಿ ಹೂಳು ತೆಗೆಯಿಸಬೇಕೆಂದು ಹೋರಾಟ ಮಾಡಿ ಮನವಿ ಸಲ್ಲಿಸಲಾಗಿದೆ. ಇದೊಂದು ಗಂಭೀರ ಸಮಸ್ಯೆಯಾಗಿದ್ದು, ಆದಷ್ಟು ಬೇಗ ನದಿಯ ಸ್ವಚ್ಛತೆಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಆಗ ಸಹಾಯಕ ಆಯುಕ್ತರು, ಈ ನಿಟ್ಟಿನಲ್ಲಿ ತಾಂತ್ರಿಕ ತಜ್ಞರ ಸಮಿತಿ ರಚಿಸಲಾಗಿದ್ದು, ಒಂದು ವಾರದೊಳಗೆ ಗೌಸೀಯಾ ಸ್ಟ್ರೀಟ್ನ ವೆಟ್ವೆಲ್ನ ಬೇರಿಂಗ್ ಸಾಮರ್ಥ್ಯ ಮತ್ತು ತಗ್ಗು ಪ್ರದೇಶಕ್ಕೆ ನೀರು ಹರಿಸುವುದರಿಂದ ಆಗಬಹುದಾದ ಹಾನಿ ನಿರ್ಣಯಿಸಲಾಗುವುದು, ವರದಿ ಬಂದ ನಂತರ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹೋರಾಟ ಸಮಿತಿ ನಿಯೋಗದಲ್ಲಿ ಮೌಲ್ವಿ ಅಂಜುಮ್ ಗಂಗಾವಳಿ ನದ್ವಿ, ಡಾ. ಮುಹಮ್ಮದ್ ಹನೀಫ್ ಶಬಾಬ್, ಅಬ್ದುಲ್ ಸಮಿ ಮೆಡಿಕಲ್, ಕೆ.ಎಂ. ಅಶ್ಫಾಕ್, ಮುಹಮ್ಮದ್ ಹುಸೇನ್, ಮುಸ್ತಫಾ ಅಸ್ಕರಿ, ಶಮೂನ್ ಹಾಜಿ ಫಖಿ, ಮುಬಾಶಿರ್ ಹಲ್ಲಾರೆ, ಮೌಲಾನಾ ಇರ್ಷಾದ್ ನದ್ವಿ ಇದ್ದರು.