ಸಾರಾಂಶ
ಚಾಮರಾಜನಗರ: ಕಾಡಂಚಿನ ಪ್ರದೇಶ, ಗ್ರಾಮಗಳಲ್ಲಿ ವನ್ಯಜೀವಿಗಳು ಹಾಗೂ ಜಾನುವಾರು ಹತ್ಯೆ ನಡೆಯದಂತೆ ಕಟ್ಟುನಿಟ್ಟಿನ ತುರ್ತು ಮುಂಜಾಗ್ರತಾ ಕ್ರಮಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಹಿಸುವಂತೆ ಪಶುಸಂಗೋಪನೆ, ರೇಷ್ಮೆ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಸೂಚನೆ ನೀಡಿದರು.
ಇತ್ತೀಚೆಗೆ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವಲಯದಲ್ಲಿ ಸಂಭವಿಸಿದ ಹುಲಿಗಳ ಅಸಹಜ ಸಾವು ಹಾಗೂ ಗುಂಡ್ಲುಪೇಟೆ ವಲಯದ ಕಂದೇಗಾಲ ಭಾಗದಲ್ಲಿ ಕೋತಿಗಳ ಮರಣಕ್ಕೆ ಸಂಬಂಧಿಸಿದಂತೆ ಹನೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಜಿಲ್ಲಾಧಿಕಾರಿಗಳು, ಅರಣ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿವರ ಪಡೆದರು.ಹುಲಿಗಳ ಸಾವಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಕೇಂದ್ರ ಹಾಗೂ ರಾಜ್ಯಮಟ್ಟದ ಅಧಿಕಾರಿಗಳ ತನಿಖಾ ತಂಡದ ಬಗ್ಗೆ ಪೂರ್ಣ ಮಾಹಿತಿ ಪಡೆದುಕೊಂಡು ತನಿಖೆಯು ಯಾವ ಹಂತದಲ್ಲಿದೆ ಎಂಬ ಬಗ್ಗೆಯು ಅರಣ್ಯ ಅಧಿಕಾರಿಗಳಿಂದ ವಿವರ ಪಡೆದರು.
ಅರಣ್ಯದಂಚಿನ ಗ್ರಾಮಗಳಲ್ಲಿ ಜಾನುವಾರು ಸಂರಕ್ಷಣೆಗೆ ಅರಣ್ಯ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು. ವನ್ಯಜೀವಿಗಳು ಆಹಾರ ಅರಸಿ ಗ್ರಾಮಗಳಿಗೆ ಬರದಂತೆ ಅರಣ್ಯದಲ್ಲೇ ಸೂಕ್ತ ಆಹಾರ ನೀರು ಒದಗಿಸುವ ಕಾರ್ಯವನ್ನು ತುರ್ತಾಗಿ ಮಾಡಬೇಕು. ಜಾನುವಾರಿಗೆ ಕಾಡು ಸಮೀಪದ ಗ್ರಾಮಗಳಲ್ಲೇ ನರೇಗಾ ಯೋಜನೆಯಡಿ ಮೇವು ಬೆಳೆಸಿ, ಕೆರೆಗಳನ್ನು ನಿರ್ಮಿಸಿ ಅನುಕೂಲ ಮಾಡಿಕೊಡಬೇಕು. ಸ್ಥಳೀಯ ಭಾಗದ ಜಾನುವಾರುಗಳಿಗೆ ಮೇವು ನೀರು ಕೊರತೆಯಾಗಬಾರದು ಎಂದು ನಿರ್ದೇಶನ ನೀಡಿದರು.ಅರಣ್ಯ ಹಾಗೂ ಇದರ ಸಮೀಪದ ಗ್ರಾಮಗಳಲ್ಲಿ ಗಸ್ತು ಹೆಚ್ಚಿಸಬೇಕು. ರಾತ್ರಿಯ ವೇಳೆಯಲ್ಲೂ ವಿಶೇಷ ಗಸ್ತು ವ್ಯವಸ್ಥೆ ಇರಬೇಕು. ವಾಚರ್ಗಳು ಇನ್ನಿತರ ಅರಣ್ಯ ಸಿಬ್ಬಂದಿಯನ್ನು ನಿಯೋಜಿಸಿ ಅರಣ್ಯ ಅಧಿಕಾರಿಗಳು ಮೇಲುಸ್ತುವಾರಿ ಮಾಡಿದರೆ ಪ್ರಾಣಿಗಳ ಉಪಟಳ ತಪ್ಪಿಸಬಹುದಾಗಿದೆ. ವನ್ಯಜೀವಿಗಳು ಜಾನುವಾರು ಮೇಲೆ ದಾಳಿ ಮಾಡಿದಾಗ ರೈತರನ್ನು, ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಂತ್ವನ ಹೇಳಬೇಕು. ಜಾನುವಾರು ರಕ್ಷಣೆಗೆ ಶೀಘ್ರ ಸ್ಪಂದಿಸಿ ಮಾಹಿತಿ ನೀಡಬೇಕಿದೆ ಎಂದರು.
ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೊರಗುತ್ತಿಗೆ ವಾಚರ್ ಸಿಬ್ಬಂದಿಗೆ ಸಕಾಲದಲ್ಲಿ ವೇತನ ಪಾವತಿಸುವುದು ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳ ಮುಖ್ಯ ಜವಾಬ್ದಾರಿಯಾಗಿದೆ. ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸದೆ ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಬೇಕು. ಅರಣ್ಯ ಇಲಾಖೆ ವಿಶೇಷವಾಗಿ ಕಾಡಂಚಿನ ಭಾಗಗಳ ಪ್ರಾಣಿಗಳು, ಜನ ಜಾನುವಾರುಗಳಿಗೆ ಸೂಕ್ತ ರಕ್ಷಣೆ, ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಅಗತ್ಯವಿರುವ ಅನುದಾನದ ನೆರವು ಮಂಜೂರು ಮಾಡಿಸಲು ಕ್ರಮ ತೆಗೆದುಕೊಳ್ಳಲಾಗುವುದೆಂದು ತಿಳಿಸಿದರು.ಶಾಸಕ ಎಂ.ಆರ್. ಮಂಜುನಾಥ್, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಮಾಜಿ ಶಾಸಕ ಆರ್. ನರೇಂದ್ರ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೆಚ್ಚುವರಿ ಪ್ರಭಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸಂತೊಷ್ ಕುಮಾರ್, ಬಂಡೀಪುರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರ್, ಕಾವೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುರೇಂದ್ರ, ಹನೂರು ವಲಯದ ಪ್ರೊಬೆಷನರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಉಮಾಪತಿ, ಹೆಚ್ಚುವರಿ ಪ್ರಭಾರದಲ್ಲಿರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಿಲ್, ತಹಸೀಲ್ದಾರ್ ಗುರುಪ್ರಸಾದ್ ಹಾಜರಿದ್ದರು.