ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪ್ರತಿನಿತ್ಯ ಡೆಂಘೀ ಪ್ರಕರಣಗಳು ಉಲ್ಬಣಗೊಳ್ಳುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ನಿಯಂತ್ರಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಚನ್ನಬಸಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಬುಧವಾರ ನಡೆದ ಡೆಂಘೀ ನಿಯಂತ್ರಣ ಕುರಿತು ನಡೆದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿವಮೊಗ್ಗ ನಗರ ಜಿಲ್ಲೆಯ ಮುಖ್ಯ ಕೇಂದ್ರವಾಗಿದ್ದು ನಗರದಲ್ಲಿ ಡೆಂಘೀ ಪ್ರರಕಣಗಳು ಹೆಚ್ಚಾಗದಂತೆ ಕಟೆಚ್ಚರ ವಹಿಸಬೇಕು. ಕೊರೋನಾ ಸಮಯದಲ್ಲಿ ಅಧಿಕಾರಿಗಳು ಸಂಘಟಿತರಾಗಿ ಕೆಲಸ ಮಾಡಿದ ರೀತಿಯಲ್ಲಿಯೇ ಈಗಲೂ ಮಾಡಬೇಕಾದ ಅಗತ್ಯವಿದೆ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಟರಾಜ್ ಮಾತನಾಡಿ, ಶಿವಮೊಗ್ಗ ನಗರ ಪ್ರದೇಶದಲ್ಲಿ 471 ಜನರಿಗೆ ಡೆಂಘೀ ಪರೀಕ್ಷೆ ಮಾಡಲಾಗಿದ್ದು, 54 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಪ್ರತಿ ವಾರ್ಡ್ನಲ್ಲಿ ಲಾರ್ವ ಸಮೀಕ್ಷೆ ನಡೆಸಲಾಗುತ್ತಿದ್ದು, ಪ್ರತಿ ಶುಕ್ರವಾರ ಡ್ರೈಡೇ ಆಚರಿಸಲಾಗುತ್ತಿದೆ. ಆಶಾ ಕಾರ್ಯಕರ್ತೆರು, ಸ್ಥಳೀಯರು, ವೈದ್ಯಕೀಯ ವಿದ್ಯಾರ್ಥಿಗಳನ್ನು ಬಳಸಿಕೊಂಡು ಸರ್ವೆ ಕಾರ್ಯ ಮಾಡಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಈ ಕಾರ್ಯದಲ್ಲಿ ಎಲ್ಲಾ ಇಲಾಖೆಗಳನ್ನು ಬಳಸಿಕೊಳ್ಳಲಾಗಿದೆ. ಗಪ್ಪಿಮೀನು, ಪಾಸಿಟಿವ್ ಕೇಸ್ ಇರುವ ಕಡೆಗಳಲ್ಲಿ ಸೊಳ್ಳೆ ನಿಯಂತ್ರಿಸುವ ಹೊಗೆಗಳ ಸಿಂಪಣೆ ಮಾಡಲಾಗುತ್ತಿದ್ದು, ಡೆಂಘೀ ನಿಯಂತ್ರಣದಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಪ್ರತಿಯೊಬ್ಬರು ಕಾಯಿಲೆಯ ಕುರಿತು ಎಚ್ಚರಿಕೆ ವಹಿಸಬೇಕಾಗಿದೆ ಎಂದರು.ಶಾಸಕ ಚನ್ನಬಸಪ್ಪ ಪ್ರತಿಕ್ರಿಯಿಸಿ, ನಗರದ ಜನತೆಯ ಆರೋಗ್ಯ ಮತ್ತು ಜೀವ ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬ ಅಧಿಕಾರಿಯೂ ಡೆಂಘೀ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು. ಕೋವಿಡ್ ಸಂದರ್ಭದಲ್ಲಿ ಹೇಗೆ ಸಂಘಟಿತವಾಗಿ ಕೆಲಸ ಮಾಡಿಲಾಯಿತೊ ಅದೇ ರೀತಿಯಲ್ಲಿ ಡೆಂಘೀ ನಿಯಂತ್ರಿಸುವಲ್ಲಿ ನಿಮ್ಮೆಲರ ಸೇವೆ, ಸಹಕಾರ ಅಗತ್ಯ ಎಂದರು.
ನಗರದ 35 ವಾರ್ಡ್ಗಳಲ್ಲಿ ಸೊಳ್ಳೆ ನಿಯಂತ್ರಿಸುವ ಔಷಧಯುಕ್ತ ಹೊಗೆ ಸಿಂಪಣೆ ಮಾಡುತ್ತಿದ್ದು, ಅತೀ ವೇಗವಾಗಿ ಈ ಕಾರ್ಯ ಪೂರ್ಣಗೊಳ್ಳಬೇಕಿದೆ. ಮಹಾನಗರ ಪಾಲಿಕೆ ಆಯುಕ್ತರು ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಆರೋಗ್ಯದ ವಿಷಯದಲ್ಲಿ ಖರ್ಚು ಮಾಡಲು ಹಿಂದೇಟು ಹಾಕಬಾರದು. ಸಾವು ನೋವುಗಳು ಆಗುತ್ತಿರುವ ಸಂದರ್ಭದಲ್ಲಿ ಕಾರ್ಯಪ್ರವೃತ್ತರಾಗಿ ಎಚ್ಚರಿಕೆಯಿಂದ ಕೆಲಸ ಮಾಡಿದರೆ ಮಾತ್ರ ಕಾಯಿಲೆ ನಿಯಂತ್ರಿಸಲು ಸಾಧ್ಯ. ಎಲ್ಲಾ ಇಲಾಖೆಗಳ ಸಹಕಾರ ತೆಗೆದುಕೊಳ್ಳಿ ಎಂದು ಸೂಚಿಸಿದರು.ಮನೆ ಮನೆಗಳಿಗೆ ತೆರಳಿ ಲಾರ್ವಾ ಸರ್ವೆ ಮಾಡಲು ಸ್ವಯಂ ಸೇವಕರು, ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಸರ್ವೆ ಕಾರ್ಯ ನಡೆಸಲು ಆರೋಗ್ಯ ಇಲಾಖೆ ಚಿಂತನೆ ಮಾಡಿದ್ದು, ಈ ಕಾರ್ಯಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಕಲ್ಪಿಸಬೇಕು. ಮಹಿಳಾ ಸಂಘ, ಕನ್ನಡ ಯುವಕ ಸಂಘ, ಗಣಪತಿ ಸಂಘಟನೆಗಳು, ಸಂಘಸಂಸ್ಥೆಗಳ ಸಭೆ ಕರೆದು ಸಹಕಾರ ಕೋರಿ ಡೆಂಘೀ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಮಹಾ ನಗರಪಾಲಿಕೆ ಆಯುಕ್ತ ಡಾ.ಕವಿತ ಯೋಗಪ್ಪನವರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸಿದ್ದನ ಗೌಡ ಪಾಟೀಲ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡದಪ್ಪ ಕಸಬಿ, ತಾಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್, ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.