ಕನ್ನಡಪ್ರಭ ವಾರ್ತೆ ಪಾಂಡವಪುರ

ಬೇಸಿಗೆ ಕ್ರಮಿಸುತ್ತಿರುವುದರಿಂದ ರೈತರ ಬೆಳೆಗಳಿಗೆ ವಿದ್ಯುತ್ ಸಮಸ್ಯೆಯಾಗದಂತೆ ಇಲಾಖೆ ಅಧಿಕಾರಿಗಳು ಕೆಲಸ ಮಾಡಬೇಕು. ತಾಲೂಕಿನಲ್ಲಿ ಎಷ್ಟು ಅಕ್ರಮ ವಿದ್ಯುತ್ ಸಂಪರ್ಕಗಳಿವೆ ಎನ್ನುವ ಮಾಹಿತಿ ನೀಡಬೇಕು ಎಂದು ಸೆಸ್ಕ್ ಅಧಿಕಾರಿಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಾಕೀತು ಮಾಡಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಅಕ್ರಮ ವಿದ್ಯುತ್ ಸಂಪರ್ಕ ಗುರುತಿಸಿ ನಿಮ್ಮ ಇಲಾಖೆಯಲ್ಲಿ ಇರುವ ಯೋಜನೆಗಳ ಬಗ್ಗೆ ಬಹಳಷ್ಟು ಮಂದಿ ರೈತರಿಗೆ ಮಾಹಿತೆಯೇ ಇಲ್ಲವಾಗಿದೆ. ಮುಖ್ಯ ವಿಚಾರಗಳನ್ನು ಚರ್ಚಿಸಲು ಇಇ, ಎಇಇ ಇಬ್ಬರು ಸಭೆ ಬರೋದಿಲ್ಲ ಯಾಕೆ? ಎಂದು ಎಇಇ ರವಿಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಬೇಸಿಗೆಯಲ್ಲಿ ರೈತರ ಯಾವುದೇ ರೈತರ ಟಿಸಿಗಳು ಸುಟ್ಟುಹೋದರೂ ತಕ್ಷಣವೇ ಹೊಸ ಟಿಸಿ ಅವಳವಡಿಸಬೇಕು. ಅಕ್ರಮವಾಗಿರುವ ಮೋಟರ್ ಗಳ ಸಂಪರ್ಕವನ್ನು ರೈತರಿಗೆ ಮನವರಿಕೆ ಮಾಡಿ ಟಿಸಿ ಅಳವಡಿಸಿಕೊಳ್ಳಲು ಕ್ರಮವಹಿಸಬೇಕು ಎಂದು ಸೂಚಿಸಿದರು.

ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್ ಮಾತನಾಡಿ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತಿಂಗಳಿಗೆ 11 ಸಾವಿರಕ್ಕೂ ಅಧಿಕ ಹೊರ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ, ಎಲ್ಲಾ ವಿಭಾಗದ ವೈದ್ಯರಿದ್ದಾರೆ. ಹೆರಿಗೆ ವಿಭಾಗ ಚೆನ್ನಾಗಿ ನಡೆಯುತ್ತಿದೆ. ವಿವಿಧ ಗ್ರಾಮಗಳಲ್ಲಿ ಹೀಗಾಗಲೆ ನೀರು ಪರೀಕ್ಷೆ ನಡೆಸಲಾಗಿದೆ ಎಂದರು.


ತಾಲೂಕಿನಲ್ಲಿ 6 ಗ್ರಾಪಂಗಳನ್ನು ಕ್ಷಯ ಮುಕ್ತ ಗ್ರಾಪಂ ಗುರುತಿಸಿ ಅಲ್ಲಿ ಎಲ್ಲಾ ಪರೀಕ್ಷೆ ನಡೆಸಲಾಗಿದೆ. ತಾಲೂಕಿನಲ್ಲೂ ಇನ್ನೂ 49 ಕ್ಷಯ ರೋಗಿಗಳಿದ್ದಾರೆ. ಕಳೆದ ಸಭೆಯಲ್ಲಿ ಕೇಳಿದಂತೆ ತಾಲೂಕಿನಲ್ಲಿ 37 ಖಾಸಗಿ ಕ್ಲಿನಿಕ್ ಇವೆ, 3 ನಸಿಂಗ್ ಹೂಂಗಳಿವೆ. ಎಲ್ಲವು ನೋಂದಣಿಯಾಗಿವೆ. ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಪರಿಶೀಲನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಪ್ರತಿಕ್ರಿಯಿಸಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಇಷ್ಟು ಸಂಖ್ಯೆಯಲ್ಲಿ ರೋಗಿಗಳು ಆಸ್ಪತ್ರೆಗೆ ಬಂದರೆ ಗುಣಮಟ್ಟದ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಹಾಗಾಗಿ ರೋಗಿಗಳು ಪಟ್ಟಣದ ಆಸ್ಪತ್ರೆಗೆ ಬರುವುದಕ್ಕಿಂತ ಸ್ಥಳೀಯವಾಗಿ ಇರುವ ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೋಗುವಂತೆ ನೋಡಿಕೊಂಡು ಗುಣಮಟ್ಟದ ಚಿಕಿತ್ಸೆ ನೀಡಬೇಕು. ಜತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯ ನಿಯೋಜನೆ ಮಾಡಬೇಕು ಎಂದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು, ಯಾವ ಶಾಲೆಗಳಲ್ಲಿ ಶೌಚಾಲಯಗಳ ಇಲ್ಲ ಎಂಬ ಮಾಹಿತಿ ನೀಡಬೇಕು ಎಂದು ಬಿಇಒಗೆ ಸೂಚಿಸಿದರು.

ಭತ್ತ, ರಾಗಿ ಖರೀದಿ ಕೇಂದ್ರಗಳಲ್ಲಿ ರೈತರಿಂದ ಗುಣಮಟ್ಟದ ರಾಗಿ ಖರೀದಿಸಿ, ಆಹಾರ ಪದಾರ್ಥವನ್ನು ನೇರವಾಗಿ ಜನರಿಗೆ ನೀಡಬೇಕು ಎಂದು ಅಧಿಕಾರಿಗೆ ಸೂಚಿಸಿದರು. ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಅಂಬೇಡ್ಕರ್ ಭವನಗಳು ಎಷ್ಟು ಪ್ರಗತಿಯಲ್ಲಿ, ಎಷ್ಟು ಪೂರ್ಣಗೊಂಡಿವೆ ಎನ್ನುವ ಮಾಹತಿ ನೀಡುವಂತೆ ಅಧಿಕಾರಿಗೆ ತಾಕೀತು ಮಾಡಿದರು.

ಮುಂದಿನ ಕೆಡಿಪಿ ಸಭೆಗಳಲ್ಲಿ ಅಧಿಕಾರಿಗಳು ಇಲಾಖೆಗಳ ಪ್ರಗತಿ ವರದಿಯ ಮಾಹಿತಿಯನ್ನು ಪುಟಗಟ್ಟಲೆ ನೀಡುವ ಬದಲು ಚಿಕ್ಕದಾಗಿ ತಮ್ಮ ಇಲಾಖೆಯಲ್ಲಿ ಯಾವ ಅಭಿವೃದ್ದಿ ಕಾರ್ಯಕ್ರಮಗಳಿವೆ. ಯೋಜನೆಯಿಂದ ಎಷ್ಟು ಮಂದಿ ರೈತರಿಗೆ ಅನುಕೂಲವಾಗಿದೆ. ರೈತರಿಗೆ ಆದಾಯ ತರುವ ಹೊಸ ತಳಿಗಳನ್ನು ಪರಿಚಯಿಸಲಾಗಿದೆ. ಇಳುವರಿ ಎಷ್ಟು ಬರುತ್ತಿದೆ ಎನ್ನುವ ಬಗ್ಗೆ ಮಾಹಿತಿ ನೀಡಿದರೆ ಸಾಕು ಎಂದು ತಾಕೀತು ಮಾಡಿದರು.

ಸಭೆಯಲ್ಲಿ ಆಡಳಿತಾಧಿಕಾರಿ ರೂಪಶ್ರೀ, ಉಪ ತಹಸೀಲ್ದಾರ್ ಸಂತೋಷ್, ತಾಪಂ ಇಒ ವೀಣಾ, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಎಚ್.ಕೃಷ್ಣೇಗೌಡ ಇದ್ದರು.