ಸಾರಾಂಶ
ಮಳೆಗಾಲದಲ್ಲಿ ನಿಂತ ನೀರಿನಲ್ಲಿ ಹುಟ್ಟುವ ಸೊಳ್ಳೆಗಳಿಂದ ಅನೇಕ ರೀತಿಯ ಕಾಯಿಲೆಗಳು ಹರಡುತ್ತವೆ. ಆದಕಾರಣ ಮುಂಜಾಗೃತಾ ಕ್ರಮವಾಗಿ ನೀರಿನ ಶೇಖರಣೆ ವೇಳೆ ಮುಂಜಾಗ್ರತೆ ವಹಿಸಬೇಕು.
ಕನ್ನಡಪ್ರಭ ವಾರ್ತೆ ಉಡುಪಿ
ಮಳೆಗಾಲದಲ್ಲಿ ಸಾಮಾನ್ಯವಾಗಿ ಡೆಂಘೀ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿರುವುದರಿಂದ ತಮ್ಮ ಮನೆಯ ಸುತ್ತಮುತ್ತ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ನಗರಸಭೆ ಪೌರಾಯುಕ್ತರು ನಾಗರಿಕರಿಗೆ ಸೂಚನೆ ನೀಡಿದ್ದಾರೆ.ನಗರದಲ್ಲಿ ಗೂಡಂಗಡಿ ಮಾಲೀಕರು ಎಳನೀರು (ಬೊಂಡ) ಸಿಪ್ಪೆಗಳನ್ನು ಸಂಗ್ರಹಿಸಿಟ್ಟುಕೊಳ್ಳದೇ ಅದೇ ದಿನ ವಿಲೇವಾರಿ ಮಾಡಬೇಕು. ಚರಂಡಿಗೆ ಕಸ-ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಇತರೆ ಯಾವುದೇ ರೀತಿಯ ತ್ಯಾಜ್ಯಗಳನ್ನು ಎಸೆಯಬಾರದು. ಹೂ ಕುಂಡಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರು ಶೇಖರಣೆ ಮಾಡುವಂತಹ ಪಾತ್ರೆಗಳಲ್ಲಿ ನಿತ್ಯ ನೀರು ಬದಲಾವಣೆ ಮಾಡಬೇಕು ಹಾಗೂ ಸುತ್ತಮುತ್ತ ನಿಂತ ನೀರು ಕಂಡು ಬಂದರೆ ಅವುಗಳನ್ನು ಸರಾಗವಾಗಿ ಹರಿಯಲು ಅನುವು ಮಾಡಿಕೊಡಬೇಕು ಎಂದವರು ಹೇಳಿದ್ದಾರೆ.
ಮಳೆಗಾಲದಲ್ಲಿ ನಿಂತ ನೀರಿನಲ್ಲಿ ಹುಟ್ಟುವ ಸೊಳ್ಳೆಗಳಿಂದ ಅನೇಕ ರೀತಿಯ ಕಾಯಿಲೆಗಳು ಹರಡುತ್ತವೆ. ಆದಕಾರಣ ಮುಂಜಾಗೃತಾ ಕ್ರಮವಾಗಿ ಆರೋಗ್ಯ ಹಿತದೃಷ್ಟಿಯಿಂದ ಗೃಹೋಪಯೋಗಕ್ಕೆಂದು ನೀರನ್ನು ಶೇಖರಿಸಿಡುವ ಸಿಮೆಂಟ್ ತೊಟ್ಟಿ, ಕಲ್ಲು ಚಪ್ಪಡಿಯಿಂದ ನಿರ್ಮಿಸಿದ ತೊಟ್ಟಿಗಳು, ಡ್ರಂಗಳು, ಬ್ಯಾರಲ್, ಮಡಕೆ ಮುಂತಾದ ಮೂಲಗಳಲ್ಲಿ ನೀರಿನ ಶೇಖರಣೆ ವೇಳೆ ಮುಂಜಾಗ್ರತೆ ವಹಿಸಬೇಕು.ನೀರು ಸಂಗ್ರಹಿಸುವ ಓವರ್ ಹೆಡ್ ಟ್ಯಾಂಕ್ಗಳನ್ನು ವಾರಕ್ಕೊಮ್ಮೆ ಪೂರ್ತಿ ನೀರು ಖಾಲಿ ಮಾಡಿ ಸ್ವಚ್ಛಗೊಳಿಸಬೇಕು. ಮನೆ ಸುತ್ತಮುತ್ತ, ಅಂಗಡಿ ಮುಂಗಟ್ಟು, ಮನೆ ಪರಿಸರದಲ್ಲಿ ಇರುವ ಅನುಪಯುಕ್ತ ಟಯರ್, ಎಳನೀರು ಚಿಪ್ಪು, ಒಡೆದ ಬಾಟಲಿ ಮುಂತಾದವುಗಳಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಬೇಕು.
ಸ್ವಯಂ ರಕ್ಷಣಾ ವಿಧಾನಗಳಿಂದ ಸೊಳ್ಳೆ ನಿರೋಧಕ ಮತ್ತು ಸೊಳ್ಳೆ ಪರದೆಗಳನ್ನು ಉಪಯೋಗಿಸಬೇಕು. ಜ್ವರ ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದಲ್ಲಿ ಕೂಡಲೇ ಸ್ಥಳೀಯ ವೈದ್ಯರನ್ನು ಭೇಟಿ ಮಾಡಿ, ಸೂಕ್ತ ಚಿಕಿತ್ಸೆ ಪಡೆಯಬೇಕು. ಕುಡಿಯಲು ಕಾಯಿಸಿ ಆರಿಸಿದ ನೀರನ್ನೇ ಬಳಸುವುದರೊಂದಿಗೆ ಮಳೆಗಾಲದಲ್ಲಿ ಯಾವುದೇ ಹಾನಿಯಾಗದಂತೆ ಮುಂಜಾಗ್ರತೆ ವಹಿಸುವಲ್ಲಿ ನಗರಸಭೆಯೊಂದಿಗೆ ಕೈಜೋಡಿಸುವಂತೆ ನಗರಸಭೆ ಪೌರಾಯುಕ್ತರು ಕಚೇರಿ ಪ್ರಕಟಣೆ ತಿಳಿಸಿದೆ.