2010ರಲ್ಲಿ ಸರ್ಕಾರ ಅಗಸ್ಟ್ 12ರಂದು ಜಾಗತಿಕ ಆನೆ ದಿನ ಎಂದು ಘೋಷಣೆ ಮಾಡಿದೆ. ಆನೆಗಳ ಸಂತತಿ ಈಗ ಅಳಿವಿನ ಅಂಚಿನಲ್ಲಿದೆ. ಅವುಗಳನ್ನು ಸಂರಕ್ಷಿಸಿ ನಮ್ಮ ಮುಂದಿನ ಪೀಳಿಗೆಗೆ ಉಳಿಸಬೇಕಿದೆ. ಕಾಡಿನ ಸಂರಕ್ಷಣೆ ಜೊತೆಗೆ ಕಾಡಿನ ಪ್ರಾಣಿಗಳ ರಕ್ಷಣೆ ಕೂಡ ನಮ್ಮ ಜವಾಬ್ದಾರಿಯಾಗಿದೆ. ದೇಶದಲ್ಲಿ ಅತ್ಯಂತ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ ಕರ್ನಾಟಕ ಎಂಬ ಹೆಮ್ಮೆ ನಮಗಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ಕಾಡಿನಿಂದ ನೀರು, ಆಹಾರ ಹುಡುಕಿ ಬರುವ ಕಾಡಾನೆಗಳನ್ನು ಕಂಡಾಗ ಸಾರ್ವಜನಿಕರು ಫೋಟೋ ಅಥವಾ ಸೆಲ್ಫಿ ತೆಗೆಯುವುದು ಅಪಾಯಕಾರಿ. ಆನೆಗಳನ್ನು ಕಂಡ ತಕ್ಷಣ ಅರಣ್ಯ ಇಲಾಖೆಗೆ ತಿಳಿಸುವಂತೆ ಮಳವಳ್ಳಿ ಪ್ರಾದೇಶಿಕ ವಲಯದ ಆರ್ ಎಫ್ ಒ ಬಿ.ಎಸ್.ಮುಬಾರಕ್ ತಿಳಿಸಿದರು.

ಕೆಪಿಎಸ್ ಪ್ರೌಢಶಾಲೆ ಆವರಣದಲ್ಲಿ ಆಗಸ್ಟ್ 12ರಂದು ವಿಶ್ವ ಆನೆ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಅರಣ್ಯದಲ್ಲಿ ವಾಸಿಸುವ ಪ್ರಾಣಿಗಳ ಬಗ್ಗೆ ತಿಳಿಸಿ, ಮನುಷ್ಯನ ದುರಾಸೆಯಿಂದ ಕಾಡುಗಳು ನಾಶವಾಗುವ ಜೊತೆಗೆ ಕಾಡಂಚಿನ ಪ್ರದೇಶಗಳು ಒತ್ತುವರಿಯಾಗಿ ನೀರು, ಆಹಾರಕ್ಕಾಗಿ ಆನೆಗಳು ಅಲೆಯುತ್ತಾ ಕಾಡಿನಿಂದ ನಾಡಿನತ್ತ ಬರುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾಡು ಪ್ರಾಣಿಗಳು, ಆನೆಗಳು ಬಂದಾಗ ವಿಡಿಯೋ ಮಾಡುವುದು, ಫೋಟೋ ತೆಗೆಯುವುದನ್ನು ಮಾಡದೇ ಅರಣ್ಯ ಇಲಾಖೆಗೆ ತಿಳಿಸಬೇಕು. ಜನರು ಗುಂಪು ಗುಂಪಾಗಿ ಸೇರಿ ಅವುಗಳನ್ನು ಗಾಬರಿಗೊಳಿಸಬಾರದು. ಕಾಡಿನತ್ತ ಮತ್ತೆ ಓಡಿಸಲು ಅರಣ್ಯ ಇಲಾಖೆಗೆ ಸಹಕರಿಸಬೇಕು ಎಂದು ತಿಳಿಸಿದರು.

ಕಾಡಿನಲ್ಲಿ ಆನೆಗಳು ಇರದಿದ್ದರೆ ಕಾಡಿನ ಸ್ಥಿತಿಗತಿ ಹೇಗೆ ಇರುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಆನೆ ಸ್ಥಾನವೇನು, ಮಕ್ಕಳು ಮೊದಲ ಬಾರಿ ಆನೆ ಕಂಡಾಗ ಅವರ ಅನಿಸಿಕೆ ಏನು ಎಂಬ ವಿಷಯಗಳ ಕುರಿತಂತೆ ಮಕ್ಕಳಿಗೆ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಕಾರ್ಯಕ್ರಮಗಳನ್ನು ಏರ್ಪಡಿಸಿ ವಿಜೇತರಾದವರಿಗೆ ಸ್ವಾತಂತ್ರ ದಿನಾಚರಣೆ ದಿನ ಅರಣ್ಯ ಇಲಾಖೆ ವತಿಯಿಂದ ಪ್ರಶಸ್ತಿ ಪತ್ರ ನೀಡಲಾಗುತ್ತದೆ ಎಂದು ಹೇಳಿದರು.

ಶಿಕ್ಷಕ ಎನ್.ಎಂ.ಪುಟ್ಟಸ್ವಾಮಿ ಮಾತನಾಡಿ, 2010ರಲ್ಲಿ ಸರ್ಕಾರ ಅಗಸ್ಟ್ 12ರಂದು ಜಾಗತಿಕ ಆನೆ ದಿನ ಎಂದು ಘೋಷಣೆ ಮಾಡಿದೆ. ಆನೆಗಳ ಸಂತತಿ ಈಗ ಅಳಿವಿನ ಅಂಚಿನಲ್ಲಿದೆ. ಅವುಗಳನ್ನು ಸಂರಕ್ಷಿಸಿ ನಮ್ಮ ಮುಂದಿನ ಪೀಳಿಗೆಗೆ ಉಳಿಸಬೇಕಿದೆ. ಕಾಡಿನ ಸಂರಕ್ಷಣೆ ಜೊತೆಗೆ ಕಾಡಿನ ಪ್ರಾಣಿಗಳ ರಕ್ಷಣೆ ಕೂಡ ನಮ್ಮ ಜವಾಬ್ದಾರಿಯಾಗಿದೆ. ದೇಶದಲ್ಲಿ ಅತ್ಯಂತ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ ಕರ್ನಾಟಕ ಎಂಬ ಹೆಮ್ಮೆ ನಮಗಿದೆ ಎಂದು ತಿಳಿಸಿದರು.

ಈ ವೇಳೆ ಅರಣ್ಯ ಇಲಾಖೆ ಉಪ ವಲಯ ಅರಣ್ಯಾಧಿಕಾರಿಗಳಾದ ಎಂ.ಅರ್ಜುನ್, ಕಾವ್ಯ, ಗಸ್ತು ಅರಣ್ಯಪಾಲಕಿ ವೈ.ಕೆ.ಸೌಮ್ಯ,

ಹಲಗೂರು ಬೀಟ್ ಫಾರೆಸ್ಟರ್ ಪಿ.ಎಂ. ಕೃಷ್ಣ, ಸಿಬ್ಬಂದಿ ಸೇರಿದಂತೆ ಪ್ರೌಢ ಶಾಲೆ ಶಿಕ್ಷಕ ಪುಟ್ಟಸ್ವಾಮಿ, ಕರಿಯಪ್ಪ, ಕಿರಣ, ತ್ಯಾಗರಾಜು, ಕೆಂಪು, ರೂಪ, ಪ್ರಾಥಮಿಕ ಶಾಲೆಯ ಎಸ್.ಕುಳ್ಳಯ್ಯ, ಎಂ.ಪಿ.ಪ್ರದೀಪ್ ಕುಮಾರ್, ಸುಮಲತಾ, ಆಶಾ, ಜ್ಯೋತಿ, ಸರ್ವಮಂಗಳ ಸೇರಿದಂತೆ ಇತರರು ಇದ್ದರು.

------------