ಸಾರಾಂಶ
ಎಲ್ಲ ನಾಯಕರು ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕುಚಬಾಳ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಪಕ್ಷದ ಕಾರ್ಯಕರ್ತ ಬಂಧುಗಳ ಆಶೀರ್ವಾದ, ಹಿರಿಯ ಮುಖಂಡರ ಅನುಗ್ರಹದ ಫಲವಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನದ ಜವಾಬ್ದಾರಿ ಮತ್ತೊಮ್ಮೆ ನನ್ನ ಸಿಕ್ಕಿದ್ದು, ಎಲ್ಲ ನಾಯಕರು ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕುಚಬಾಳ ಹೇಳಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮ ಮಂದಿರ ಲೋಕಾರ್ಪಣೆಯಾಗುತ್ತಿರುವ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷನಾಗಿ ಪುನರಾಯ್ಕೆಯಾಗಿರುವುದು ನನ್ನ ಸುದೈವ. ಅತ್ಯಂತ ಜವಾಬ್ದಾರಿಯಿಂದ 2ನೇ ಅವಧಿಯಲ್ಲಿ ಕಾರ್ಯಮಾಡುತ್ತೇನೆ. ಎಲ್ಲ ಕಾರ್ಯಕರ್ತರ, ಮುಖಂಡರ ಮಾರ್ಗದರ್ಶನ, ಸಲಹೆ ಸೂಚನೆ ಪಡೆದುಕೊಂಡು ಪಕ್ಷ ಸಂಘಟನೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳುವೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗಾದಿಗೆ ಭಾರಿ ರೇಸ್ ಏರ್ಪಟ್ಟಿತ್ತು. ಅನೇಕ ಘಟಾನುಘಟಿ ಮುಖಂಡರು ಜಿಲ್ಲಾಧ್ಯಕ್ಷ ಗಾದಿ ಮೇಲೆ ಕಣ್ಣಿರಿಸಿ ಪ್ರಬಲ ಲಾಬಿ ನಡೆಸಿದ್ದರು. ನಾನು ಬಣ ರಾಜಕಾರಣ ಬಿಜೆಪಿಯಲ್ಲಿದ್ದರೂ ಸಹ ಯಾವ ಬಣದೊಂದಿಗೂ ಆಪ್ತವಾಗಿ ಗುರುತಿಸಿಕೊಳ್ಳದೇ, ಇನ್ನೊಂದು ಬಣದ ಜೊತೆಗೆ ಮುನಿಸಿಕೊಳ್ಳದೇ ಸಮಾನವಾಗಿ ಜವಾಬ್ದರಿ ನಿಭಾಯಿಸಿದ ಪರಿಣಾಮದಿಂದ ಮತ್ತೊಮ್ಮೆ ಜಿಲ್ಲಾಧ್ಯಕ್ಷ ಗಾದಿ ಒಲಿದಿದೆ ಎಂದರು.ಎಲ್ಲ ನಾಯಕರು ನನ್ನ ಆಯ್ಕೆಗೆ ಸಹಕರಿಸಿ ಈ ಜವಾಬ್ದಾರಿ ಹೊರೆಸಿದ್ದಾರೆ. ಅವರ ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದು ಭರವಸೆ ನೀಡಿದರು. ಲೋಕಸಭೆ ಚುನಾವಣೆಗೆ ದಿನ ಸಮೀಪಿಸುತ್ತಿವೆ. ಅನೇಕ ಅಭಿವೃದ್ಧಿ ಕಾರ್ಯಗಳ ಮೂಲಕ ಮನೆಮಾತಾಗಿರುವ ನರೇಂದ್ರ ಮೋದಿ ಅವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಧ್ಯೇಯವೆಲ್ಲವೂ ಈ ನಿಟ್ಟಿನತ್ತ ಸಾಗಿದೆ. ಖಂಡಿತವಾಗಿಯೂ ಈ ಬಾರಿಯೂ ಜನತೆ ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಮಾಜಿ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ, ಬಸವರಾಜ ಬಿರಾದಾರ, ವಿಜಯ ಜೋಶಿ ಮುಂತಾದವರು ಇದ್ದರು.