ರೋಗಿಗಳಿಗೆ ಉಚಿತ ಔಷಧಿ ವಿತರಿಸುತ್ತಿರುವ ಟಕ್ಕೇದ ದರ್ಗಾದ ಕಾರ್ಯ ಅನುಕರಣೀಯ

| Published : Jun 10 2025, 12:10 AM IST

ರೋಗಿಗಳಿಗೆ ಉಚಿತ ಔಷಧಿ ವಿತರಿಸುತ್ತಿರುವ ಟಕ್ಕೇದ ದರ್ಗಾದ ಕಾರ್ಯ ಅನುಕರಣೀಯ
Share this Article
  • FB
  • TW
  • Linkdin
  • Email

ಸಾರಾಂಶ

ದೂರದ ಊರುಗಳಿಗೆ ತೆರಳಿ ಅಸ್ತಮಾ, ದಮ್ಮು ಹಾಗೂ ಕೆಮ್ಮಿಗೆ ಔಷಧಿ ಪಡೆಯುತ್ತಿದ್ದ ಜನರಿಗೆ ಟಕ್ಕೇದ ದರ್ಗಾ ಪಟ್ಟಣದಲ್ಲಿ ಉಚಿತ ಔಷಧಿ ನೀಡುವ ಮೂಲಕ ಈ ಭಾಗದ ಜನರಿಗೆ ನೆರವಾಗುತ್ತಿರುವುದು ಅನುಕರಣೀಯ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಗಜೇಂದ್ರಗಡ: ದೂರದ ಊರುಗಳಿಗೆ ತೆರಳಿ ಅಸ್ತಮಾ, ದಮ್ಮು ಹಾಗೂ ಕೆಮ್ಮಿಗೆ ಔಷಧಿ ಪಡೆಯುತ್ತಿದ್ದ ಜನರಿಗೆ ಟಕ್ಕೇದ ದರ್ಗಾ ಪಟ್ಟಣದಲ್ಲಿ ಉಚಿತ ಔಷಧಿ ನೀಡುವ ಮೂಲಕ ಈ ಭಾಗದ ಜನರಿಗೆ ನೆರವಾಗುತ್ತಿರುವುದು ಅನುಕರಣೀಯ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಪಟ್ಟಣದ ಟಕ್ಕೇದ ದರ್ಗಾದಿಂದ ಇಲ್ಲಿನ ಕಟ್ಟಿಬಸವೇಶ್ವರ ರಂಗ ಮಂದಿರದಲ್ಲಿ ಮೃಗಶಿರ ಮಳೆ ಪ್ರವೇಶ ಹಿನ್ನೆಲೆಯಲ್ಲಿ ಭಾನುವಾರ ಅಸ್ತಮಾ ರೋಗಿಗಳಿಗೆ ದರ್ಗಾದ ಪೀಠಾಧಿಪತಿ ಹಜರತ್ ಸೈಯದ್ ನಿಜಾಮುದ್ದೀನ ಶಾ ಅಶ್ರಫಿ ಹಮ್ಮಿಕೊಂಡಿದ್ದ ಉಚಿತ ಔಷಧಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಮಾಜಸೇವಾ ಮನೋಭಾವ ಎಲ್ಲರಲ್ಲೂ ಬರಲು ಸಾಧ್ಯವಿಲ್ಲ. ಕಳೆದ ಹಲವು ದಶಕಗಳಿಂದ ಎಲ್ಲರನ್ನು ಒಗ್ಗೂಡಿಸಿಕೊಂಡು ಸಮುದಾಯಗಳ ನಡುವೆ ಭ್ರಾತೃತ್ವ ಹಾಗೂ ಸಮಾನತೆಯನ್ನು ಸಾಧಿಸುವಲ್ಲಿ ಟಕ್ಕೇದ ದರ್ಗಾ ಶ್ರಮಿಸುತ್ತಾ ಬಂದಿದೆ. ಪ್ರಸ್ತುತ ಕಳೆದ ೪೫ ವರ್ಷಗಳಿಂದ ಹಜರತ್ ಸೈಯದ್ ನಿಜಾಮುದ್ದೀನ ಶಾ ಅಶ್ರಫಿ ಅವರು ಸೇವಾ ಮನೋಭಾವನೆಯಿಂದ ಅಸ್ತಮಾ ರೋಗಕ್ಕೆ ಔಷಧಿಯನ್ನು ಯಾವುದೇ ಫಲಾಪೇಕ್ಷೆಯಿಲ್ಲದೆ ನೀಡುತ್ತಾ ಬಂದಿರುವುದು ನಿಜಕ್ಕೂ ಪ್ರಶಂಸನೀಯ. ಇಲ್ಲಿ ಸೇರಿರುವ ಜನತೆ ನೋಡಿ ಔಷಧಿಯ ಮಹತ್ವ ತಿಳಿಯುತ್ತದೆ ಎಂದರು. ಪುರಸಭೆ ಸದಸ್ಯರಾದ ರಾಜು ಸಾಂಗ್ಲೀಕರ, ಶಿವರಾಜ ಘೋರ್ಪಡೆ ಮಾತನಾಡಿ, ಕಳೆದ ಕೆಲ ಶತಮಾನಗಳಿಂದ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಮಾಜವನ್ನು ಬೆಸೆಯುವ ಕೆಲಸವನ್ನು ದರ್ಗಾ ಮಾಡುತ್ತಿದೆ ಎಂದರು.ಟಕ್ಕೇದ ದರ್ಗಾದ ಸೈಯದ್ ನಿಜಾಮುದ್ದೀನಶಾ ಆಶ್ರಫಿ ಮಾತನಾಡಿ, ಸರ್ವಧರ್ಮದ ಕೊಂಡಿಯಾಗಿರುವ ಹಾಗೂ ಭವ್ಯ ಇತಿಹಾಸ ಪರಂಪರೆಯನ್ನು ಹೊಂದಿರುವ ಟಕ್ಕೆದ ದರ್ಗಾದ ಅಭಿವೃದ್ಧಿಗೆ ಶಾಸಕರು ಸಹಕಾರ ನೀಡಬೇಕು ಎಂದು ಮನವಿ ನೀಡಿದರು.ಸಾನಿಧ್ಯ ವಹಿಸಿದ್ದ ಮೈಸೂರ ಮಠದ ವಿಜಯಮಹಾಂತ ಸ್ವಾಮೀಜಿ ಮಾತನಾಡಿ, ಪ್ರತಿವರ್ಷದಂತೆ ಟಕ್ಕೇದ ದರ್ಗಾವು ಅಸ್ತಮಾ, ದಮ್ಮು ಹಾಗೂ ಕೆಮ್ಮಿಗೆ ಉಚಿತ ಔಷಧಿ ವಿತರಿಸುವುದು ಖುಷಿಯ ವಿಷಯ. ಮಳೆಯಲ್ಲಿ ೨೭ ಮಳೆಗಳಿವೆ. ಮೃಗಶಿರ ಮಳೆಯು ಕೆಲ ತೊಂದರೆಗಳನ್ನು ನೀಡುತ್ತದೆ. ಹೀಗಾಗಿ ಕಷ್ಟ ಬಂದಾಗ ಮಾತ್ರ ದೇವ ನಾಮಸ್ಮರಣೆ ಮಾಡಿ, ಸುಖ, ಸಂತೋಷದ ಸಂದರ್ಭದಲ್ಲಿ ದೇವರನ್ನು ಮರೆಯುವ ಮನಸ್ಥಿತಿಯಲ್ಲಿದ್ದೇವೆ. ಅದು ಬದಲಾಗಬೇಕಿದೆ. ಟಕ್ಕೇದ ದರ್ಗಾದ ಅಭಿವೃದ್ಧಿಗೆ ನೀಡಿದ ಮನವಿಗೆ ಶಾಸಕರು ಸಕಾರಾತ್ಮಕವಾಗಿ ಸ್ಪಂದಿಸಲಿ ಎಂದರು.ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಣ್ಣ ಬಂಡಿ, ಪುರಸಭೆ ಸದಸ್ಯ ಮುರ್ತುಜಾ ಡಾಲಾಯತ, ಚಂಬಣ್ಣ ಚವಡಿ, ಬಸವರಾಜ ಕೊಟಗಿ, ರಫೀಕ ತೋರಗಲ್, ಪ್ರಭು ಚವಡಿ, ಶ್ರೀಧರ ಬಿದರಳ್ಳಿ, ಎಚ್.ಎಸ್. ಸೋಂಪುರ, ಹಸನ ತಟಗಾರ, ಎ.ಡಿ. ಕೋಲಕಾರ, ಬಸವರಾಜ ಹೂಗಾರ, ಶರಣಪ್ಪ ಚಳಗೇರಿ, ಎಂ.ಎಸ್. ಮಕಾನದಾರ, ಮಾಸುಮಅಲಿ ಮದಾಗಾರ, ರಾಜು ನಿಶಾನದಾರ ಸೇರಿ ಇತರರು ಇದ್ದರು.