ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಕೊಡಗು ಜಿಲ್ಲಾ ಕ್ರೈಸ್ತ ಸೇವಾ ಸಂಘ ಕುಶಾಲನಗರ ಘಟಕದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ನಡೆಯಿತು.ಮುಳ್ಳುಸೋಗೆ ತಪೋವನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಸಂತ ಸೆಬಾಸ್ಟಿಯನ್ ದೇವಾಲಯ ಧರ್ಮಗುರು ಫಾ.ಮಾರ್ಟಿನ್ ಆಶೀರ್ವಚನ ನೀಡಿದರು. ಶಿಕ್ಷಣ ಎಂದಿಗೂ ಅಳಿಸಲಾಗದಂತಹ ಶಕ್ತಿ. ಮಕ್ಕಳನ್ನು ಉತ್ತೇಜಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ. ಸನ್ಮಾನ ಸ್ವೀಕರಿಸಿದ ಮಕ್ಕಳು ಭವಿಷ್ಯದಲ್ಲಿ ಇತರರಿಗೆ ಮಾದರಿ ಹಾಗೂ ಮಾರ್ಗದರ್ಶಕರಾಗ ಬೇಕಾಗಿದೆ ಎಂದು ಅವರು ಕರೆ ನೀಡಿದರು.
ತಪೋವನದ ಫಾ.ವಿಲ್ಫ್ರೆಡ್ ಫ್ರಾಂಕ್ ಮಾತನಾಡಿ, ಪ್ರತಿಯೊಬ್ಬರು ಅಗತ್ಯ ಉಳ್ಳವರಿಗೆ ಹಾಗೂ ದುರ್ಬಲರಿಗೆ ಸಹಾಯ ಹಸ್ತ ಚಾಚಬೇಕಿದೆ. ಜಗತ್ತಿನಲ್ಲಿ ಅವಶ್ಯಕತೆಗಳು ಹೆಚ್ಚಾಗಿರುವ ಕಾರಣ ಕೈಚಾಚಿ ಮನಸ್ಸು ಪೂರ್ತಿಯಾಗಿ ನೆರವು ನೀಡಬೇಕಿದೆ ಎಂದರು.ಅತಿಥಿಗಳಾಗಿ ಪಾಲ್ಗೊಂಡಿದ್ದ ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಇಂದಿನ ಕಾಲದಲ್ಲಿ ಇತರರ ಬಗ್ಗೆ ಕಾಳಜಿ ವಹಿಸುವ ಮನೋಭಾವ ಕ್ಷೀಣಿಸುತ್ತಿದೆ. ನೆರೆಹೊರೆಯವರಿಗೆ ನೆರವಾಗುವ ಮನಸ್ಥಿತಿ ಎಲ್ಲರೂ ಬೆಳೆಸಿಕೊಳ್ಳಬೇಕಿದೆ. ಇತರ ಧರ್ಮ, ಸಮುದಾಯಗಳನ್ನು ಕೀಳಾಗಿ ಕಾಣದೆ ತಮ್ಮ ಸಮುದಾಯದ ಉನ್ನತಿಗೆ, ಪ್ರತಿಭಾವಂತರು, ಸಾಧಕರನ್ನು ಪ್ರೋತ್ಸಾಹಿಸುವ ಕಾರ್ಯಕ್ಕೆ ಎಲ್ಲರೂ ಒಗ್ಗೂಡಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಶಾಲನಗರ ಕ್ರೈಸ್ತ ಸೇವಾ ಸಂಘದ ಅಧ್ಯಕ್ಷ ಎನ್.ಟಿ.ಜೋಸೆಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮುದಾಯದ ಪ್ರತಿಭಾನ್ವಿತರನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮ ಆದ್ಯ ಕರ್ತವ್ಯ ಹಾಗೂ ಜವಬ್ದಾರಿ ಎಂದರು.ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಗರಿಷ್ಠ ಅಂಕ ಪಡೆದ ಸಮುದಾಯದ 16 ಮಂದಿ ವಿದ್ಯಾರ್ಥಿಗಳು ಸೇರಿದಂತೆ ಸಾಧಕರು, ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಫಾತಿಮಾ ಕಾನ್ವೆಂಟ್ ನ ಸಿ ಅಗ್ನಿಸ್ ಸುಪೀರಿಯರ್, ಸಿ.ಪ್ಲೋರೆಟ್, ತಪೋವನದ ಫಾ.ಲಾರೆನ್ಸ್, ಕುಶಾಲನಗರ ಯೋಜನಾ ಪ್ರಾಧಿಕಾರದ ಸದಸ್ಯ ಸಜಿ ವಿ.ಎಸ್, ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ, ಕುಶಾಲನಗರ ಕ್ರೈಸ್ತ ಸೇವಾ ಸಂಘದ ಉಪಾಧ್ಯಕ್ಷ ಟಿ.ಎಸ್.ಪ್ಯಾಟ್ರಿಕ್, ಕಾರ್ಯದರ್ಶಿ ಸೆಲೀನಾ ಡಿ ಕುನ್ನ, ಸಹ ಕಾರ್ಯದರ್ಶಿ ಜೇಮ್ಸ್ ಡಿಸೋಜ, ಖಜಾಂಚಿ ಆಲ್ಬರ್ಟ್ ಗೋನ್ಸಲ್ವೇಸ್ ಸೇರಿದಂತೆ ಸದಸ್ಯರು ಇದ್ದರು.ಇದೇ ಸಂದರ್ಭ ಆರ್ಯ ಅವರು ನಡೆಸಿಕೊಟ್ಟ ಸಾಂಸ್ಕೃತಿಕ ನೃತ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.