ಸಾರಾಂಶ
ಶಾಲೆಗಳು ಪ್ರತಿಭಾವಂತರ ಸೃಜಿಸುವ ಕಾರ್ಖಾನೆಗಳಾದರೆ, ಪ್ರತಿಭಾವಂತ ಮಕ್ಕಳು ಶಾಲೆಯ, ಕುಟುಂಬದ, ಸಮಾಜದ ಮತ್ತು ದೇಶದ ಬೌದ್ಧಿಕ ಆಸ್ತಿ ಎಂದು ಜ್ಞಾನೋದಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಚಂದ್ರಕಾಂತ ತೆಳಗಿನಮನಿ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಶಿಕ್ಷಕರು ದೇಶದ ಭವಿತವ್ಯದ ಪ್ರಜೆಗಳನ್ನು ನಿರ್ಮಿಸುತ್ತಾರೆ. ಶಾಲೆಗಳು ಪ್ರತಿಭಾವಂತರ ಸೃಜಿಸುವ ಕಾರ್ಖಾನೆಗಳಾದರೆ, ಪ್ರತಿಭಾವಂತ ಮಕ್ಕಳು ಶಾಲೆಯ, ಕುಟುಂಬದ, ಸಮಾಜದ ಮತ್ತು ದೇಶದ ಬೌದ್ಧಿಕ ಆಸ್ತಿಗಳಾಗಿದ್ದಾರೆಂದು ಜ್ಞಾನೋದಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಚಂದ್ರಕಾಂತ ತೆಳಗಿನಮನಿ ಅಭಿಪ್ರಾಯಪಟ್ಟರು.ರಾಮಪುರದ ಜ್ಞಾನೋದಯ ಶಿಕ್ಷಣ ಸಂಸ್ಥೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದ ರಿತೇಶ ಮುನ್ನೋಳ್ಳಿ, ದ್ವಿತೀಯ ರ್ಯಾಂಕ್ ಪಡೆದ ರೋಹಿತ ಭೀಮಪ್ಪ ಮಡ್ಡೆಗೋಳ ಮತ್ತು ತೃತೀಯ ರ್ಯಾಂಕ್ ಪಡೆದ ವಿವೇಕ ಈರಣ್ಣ ಮಿರ್ಜಿಯನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಿ ಮಾತನಾಡಿ, ಸಂಸ್ಥೆಯ ಆಸ್ತಿ ಮಕ್ಕಳಾದರೆ, ಬೆನ್ನೆಲಬು ಬೋಧಕರಾಗಿರುತ್ತಾರೆ. ಮಕ್ಕಳಲ್ಲಿನ ಪ್ರತಿಭೆ ಹೊರಹೊಮ್ಮಿಸಲು ಶ್ರಮಿಸುವ ಬೋಧಕ ವರ್ಗಕ್ಕೆ ಬೋಧನೆಗೆ ಪೂರಕ ಸೌಲಭ್ಯಗಳನ್ನು ಕಲ್ಪಿಸುವುದು ಸಂಸ್ಥೆಗಳ ಆದ್ಯತಾ ಕೆಲಸವಾದಲ್ಲಿ ದಾಖಲೆಯ ಫಲಿತಾಂಶ ಪಡೆಯಲು ಸಾಧ್ಯವೆಂದರು.
ಚೇರ್ಮನ್ ಬಾಲಚಂದ್ರ ಹೊಸಕೋಟಿ, ಉಪಾಧ್ಯಕ್ಷ ಶಂಕರೆಪ್ಪ ಅಮ್ಮಲಜೇರಿ, ನಿರ್ದೇಶಕರಾದ ಪ್ರಭು ಬಿಳ್ಳೂರ, ಎಂ.ಬಿ.ಬಾವಲತ್ತಿ, ಎಸ್.ಕೆ.ಲೋನಾರಿ, ವಿವೇಕಾನಂದ ಭಸ್ಮೆ, ಸುರೇಶ ಗೊಲಭಾಂವಿ, ಬಿ.ಎಂ. ಬರಗಿ, ಜಿ.ಟಿ. ಕೊಡತೆ ಮತ್ತು ಆಡಳಿತಾಧಿಕಾರಿ ಏಕನಾಥ ಗಂಥಡೆ, ಪ್ರಾಚಾರ್ಯ ಕೃಷ್ಣಾ ತಳವಾರ, ಮಲ್ಲಿಕಾರ್ಜುನ ಮನ್ಮಿ ಸೇರಿದಂತೆ ಪ್ರಮುಖರಿದ್ದರು.