ಕನ್ನಡಪ್ರಭ ವಾರ್ತೆ ಹುಕ್ಕೇರಿಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಚರಿತ್ರೆ, ಹೋರಾಟಗಳನ್ನು ಸ್ಮರಿಸಲು ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸಲು ಗುಡಸ ಗ್ರಾಮದಲ್ಲಿ ತಾಲೂಕು ಮಟ್ಟದ ಭೀಮೋತ್ಸವವನ್ನು ಮೇ.28 ಮತ್ತು 29 ರಂದು ಆಯೋಜಿಸಲಾಗಿದೆ ಎಂದು ರಾಜ್ಯ ವಾಯುಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ನಿರ್ದೇಶಕ ಸುರೇಶ ತಳವಾರ ಹೇಳಿದರು.

ಪಟ್ಟಣದಲ್ಲಿ ಬುಧವಾರ ನಡೆದ ಸುದ್ಧಿಗೋಷ್ಠಿಯಲ್ಲಿ ಭೀಮೋತ್ಸವದ ಪೋಸ್ಟರ್, ಬ್ಯಾನರ್, ಕರಪತ್ರ ಮತ್ತು ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬುದ್ಧ, ಬಸವೇಶ್ವರ ಮತ್ತು ಅಂಬೇಡ್ಕರ ಅವರ ವಿಚಾರಧಾರೆಗಳನ್ನು ಜನರಿಗೆ ತಲುಪಿಸಲು ಹಾಗೂ ಪರಿಶಿಷ್ಟ ಜಾತಿ ಕಾಲೋನಿಗಳ ಅಭಿವೃದ್ಧಿ ಮತ್ತು ಮಕ್ಕಳ ಪ್ರತಿಭೆ ಪ್ರೋತ್ಸಾಹಿಸುವ ದಿಸೆಯಲ್ಲಿ ಈ ಭೀಮೋತ್ಸವ ಆಯೋಜಿಸಲಾಗಿದೆ ಎಂದರು.ಮೇ.28 ರಂದು ಚೆಸ್, ಕೇರಂ, ನಿಬಂಧ, ರಂಗೋಲಿ, ಸಂಗೀತ ಕುರ್ಚಿ, ಭಾಷಣ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮೇ. 29 ರಂದು ಬೆಳಗ್ಗೆ 11ಕ್ಕೆ ನಡೆಯಲಿರುವ ಭೀಮೋತ್ಸವದ ಮುಖ್ಯ ವೇದಿಕೆ ಸಮಾರಂಭದ ಸಾನಿಧ್ಯವನ್ನು ಯಮಕನಮರಡಿ ಹುಣಸಿಕೊಳ್ಳಮಠದ ಗುರುಸಿದ್ಧ ಸ್ವಾಮೀಜಿ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸುವರು. ಶಾಸಕ ನಿಖಿಲ್ ಕತ್ತಿ ಅಧ್ಯಕ್ಷತೆ ವಹಿಸುವರು. ಮಾಜಿ ಸಂಸದ ರಮೇಶ ಕತ್ತಿ, ಮಾಜಿ ಸಚಿವ ಎ.ಬಿ.ಪಾಟೀಲ, ಶಾಸಕ ಮಹೇಂದ್ರ ತಮ್ಮಣ್ಣವರ, ತಹಸೀಲ್ದಾರ್‌ ಬಲರಾಮ ಕಟ್ಟಿಮನಿ, ತಾಪಂ ಇಒ ಟಿ.ಆರ್.ಮಲ್ಲಾಡದ ಸೇರಿದಂತೆ ಮತ್ತಿತರರು ಭಾಗವಹಿಸುವರು. ಅಂದು ರಾತ್ರಿ 9ಕ್ಕೆ ಮನರಂಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸುರೇಶ ತಳವಾರ ಮಾಹಿತಿ ನೀಡಿದರು.ಸುಲ್ತಾನಪೂರದ ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನಸೇವಾ ಸಂಸ್ಥೆ ಹಾಗೂ ಗುಡಸ ಅಂಬೇಡ್ಕರ ಯುವಕ ಸಂಘದ ಸಹಯೋಗದಲ್ಲಿ ನಡೆಯಲಿರುವ ಅಂಬೇಡ್ಕರ ಅವರ 135ನೇ ಜಯಂತಿ ಹಾಗೂ ಭೀಮೋತ್ಸವಕ್ಕೆ ಮತ್ತಷ್ಟು ಮೆರಗು ನೀಡುವ ದಿಸೆಯಲ್ಲಿ ಮನರಂಜನೆ, ಸಂಗೀತ ಪ್ರದರ್ಶನ ಸೇರಿದಂತೆ ವರ್ಣರಂಜಿತ ಕಾರ್ಯಕ್ರಮಗಳು ನಡೆಯಲಿವೆ. ಎರಡು ದಿನಗಳ ನಡೆಯಲಿರುವ ಈ ಬೃಹತ್ ಉತ್ಸವವನ್ನು ಅರ್ಥಪೂರ್ಣವಾಗಿ ಆಯೋಜಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.ಸಮುದಾಯವನ್ನು ಒಂದುಗೂಡಿಸಿ ಅರಿವು ಮೂಡಿಸುವ ನಿಟ್ಟಿನಲ್ಲಿ ವಿಚಾರವಾದಿಗಳಿಂದ ಉಪನ್ಯಾಸ, ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ಸುಲ್ತಾನಪೂರ, ಕೊಟಬಾಗಿಯಲ್ಲಿ ಯಶಸ್ವಿಯಾದಂತೆ ಗುಡಸ ಗ್ರಾಮದಲ್ಲಿ ಹಮ್ಮಿಕೊಂಡಿರುವ ಭೀಮೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.ಸುದ್ಧಿಗೋಷ್ಠಿಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಉದಯ ಹುಕ್ಕೇರಿ, ಗ್ರಾಪಂ ಮಾಜಿ ಅಧ್ಯಕ್ಷ ಅಪ್ಪಣ್ಣಾ ಖಾತೇದಾರ, ಮುಖಂಡರಾದ ಶ್ರೀಕಾಂತ ತಳವಾರ, ದೀಪಕ ವೀರಮುಖ, ಸದಾಶಿವ ಕಾಂಬಳೆ, ಕುಮಾರ ತಳವಾರ, ಸಂತೋಷ ಗಸ್ತಿ, ಮುತ್ತು ವಿಜಯನ್ನವರ, ಕಾಶಪ್ಪ ಹರಿಜನ, ಅಮರ ಶಿಂಗೆ, ಶಾಂತಾ ಹೆಳವಿ, ಶಂಕರ ಶಮರಂತ, ಮುತ್ತು ಕಾಂಬಳೆ, ಮಂಜು ಕಾಮತ, ವಿಠ್ಠಲ ಬಂಗಾರಿ, ವಿನೋದ ಮಾಳಗೆ, ಚಂದ್ರು ಕಾಂಬಳೆ, ಶಶಿ ಹೆಗ್ಗಪ್ಪಗೋಳ, ಬಾಳು ಕಾಂಬಳೆ, ವಿಶಾಲ ಕೆಂಪರಾಯಗೋಳ ಮತ್ತಿತರರು ಉಪಸ್ಥಿತರಿದ್ದರು.