ಕನ್ನಡಪ್ರಭ ವಾರ್ತೆ ಇಂಡಿ

2023 ರಿಂದ 2016 ವರೆಗೆ ಬೇಸಿಗೆಯಲ್ಲಿ ಟ್ಯಾಂಕ್ ಮೂಲಕ ಗ್ರಾಮಗಳಿಗೆ ನೀರು ಕೊಡುವ ಪರಿಸ್ಥಿತಿ ಇತ್ತು. ಸದ್ಯ 19 ಕೆರೆಗಳು ತುಂಬಿವೆ. ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳ ಮೂಲಕ ಪ್ರತಿ ಗ್ರಾಮಕ್ಕೆ ಕುಡಿಯುವ ನೀರು ಒದಗಿಸಲಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೆರೆ ತುಂಬುವ ಯೋಜನೆ, ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಮೂಲಕ ಜನ, ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಿ ಇಂಡಿ ತಾಲೂಕು ಟ್ಯಾಂಕರ್‌ ಮುಕ್ತ ತಾಲೂಕನ್ನಾಗಿಸಿದೆ. ಇಂಡಿ ನಗರಕ್ಕೆ ಭೀಮಾನದಿಯಿಂದ 24*7 ನೀರು ಬರುತ್ತಿದೆ. ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ಬೇಸಿಗೆಯಲ್ಲಿ 2 ಬಾರಿ ನೀರು ಹರಿಸಲು ಪ್ರಯತ್ನಿಸಲಾಗಿದೆ. ಮಹಾರಾಷ್ಟ್ರದ ಸರ್ಕಾರದ ಜನಪ್ರತಿನಿಧಿ, ಅಧಿಕಾರಿಗಳ ಜೊತೆ ನಾನು ಹಾಗೂ ಕರ್ನಾಟಕ ಸರ್ಕಾರ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗಿತ್ತು. ವಿಜಯಪುರ ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳು ಸಮನ್ವಯತೆಯಿಂದ ಭೀಮಾನದಿಗೆ ನೀರು ಬಿಡಲು ಪ್ರಯತ್ನಿಸಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿಗಳಿಗೂ ಹಾಗೂ ತಾಲೂಕು ಆಡಳಿತಕ್ಕೂ ಭೀಮಾನದಿ ಪಾತ್ರದ ಗ್ರಾಮಗಳ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಈ ಹಿಂದೆ ಮಾರ್ಚ, ಏಪ್ರಿಲ್‌, ಮೇ ತಿಂಗಳ ಬೇಸಿಗೆಯಲ್ಲಿ ಭೀಮಾನದಿಯಲ್ಲಿ ಒಂದು ಹನಿ ನೀರು ಇರಲಿಲ್ಲ. ನಾನು ಶಾಸಕನಾದ ಮಹಾರಾಷ್ಟ್ರ ಹಾಗೂ ಕರ್ನಾಟಕ ಸರ್ಕಾರ, ಅಧಿಕಾರಿಗಳ ಸಮನ್ವಯತೆಯಿಂದ ನೀರು ಬಿಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಜಲಧಾರೆ ಯೋಜನೆ ಪೂರ್ಣಗೊಂಡರೆ ಕೃಷ್ಣಾ, ಭೀಮಾನದಿ ಎರಡರಿಂದಲೂ ನೀರು ಬರುತ್ತದೆ. ನಗರ ಸೇರಿದಂತೆ ತಾಲೂಕಿನ ಯಾವುದೇ ಗ್ರಾಮಕ್ಕೂ ಕುಡಿಯುವ ನೀರಿನ ಸಮಸ್ಯೆ ಆಗುವುದಿಲ್ಲ. ಶಾಶ್ವತ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಆಗಲಿದೆ ಎಂದರು.

ಇಂಡಿ ಮತಕ್ಷೇತ್ರದ ಹಡಲಸಂಗ, ಶಿರಶ್ಯಾಡ, ಬಸನಾಳ ಗ್ರಾಮಕ್ಕೆ ಒಂದೇ ದಿನದಲ್ಲಿ ಮೂರು ಕಾಲೇಜುಗಳು ಸರ್ಕಾರ ಮಂಜೂರು ಮಾಡಿದೆ. ಹೀಗಾಗಿ ಕ್ಷೇತ್ರದ ಜನತೆಯ ಪರವಾಗಿ ರಾಜ್ಯ ಸರ್ಕಾರಕ್ಕೆ ಅಭಿನಂದಿಸುವುದಾಗಿ ಹೇಳಿದರು.


ಶೈಕ್ಷಣಿಕ ಕ್ರಾಂತಿಯ ಜೊತೆಗೆ ತಾಲೂಕು ಮಾದರಿ ಮತಕ್ಷೇತ್ರವನ್ನಾಗಿ ಮಾಡುವ ಕೆಲಸ ಮಾಡಲಾಗುತ್ತದೆ. ಹೊರ್ತಿ ರೇವಣಸಿದ್ದೇಶ್ವರ ಏತನೀರಾವರಿ ಯೋಜನೆ ಪೂರ್ಣಗೊಂಡರೆ ತಾಲೂಕಿನ ಶೇ.80ರಷ್ಟು ಪ್ರದೇಶ ನೀರಾವರಿಗೆ ಒಳಪಡುತ್ತದೆ ಎಂದರು.

ತಾಪಂ ಇಒ ಮಹಾದೇವಪ್ಪ ಏವೂರ ಸೇರಿದಂತೆ ತಾಲೂಕು ಮಟ್ಟದ ಇತರೆ ಅಧಿಕಾರಿಗಳು ಇದ್ದರು.