ಸಾರಾಂಶ
ಡಂಬಳ: ಡಂಬಳ ಹೋಬಳಿಯಲ್ಲಿ ಇದ್ದಕ್ಕಿದ್ದಂತೆ ಮಳೆ ಮಾಯವಾಗಿದೆ. ಜತೆಗೆ ಹುಲಿಗುಡ್ಡ ಏತ ನೀರಾವರಿ ಕಾಲುವೆ ನೀರೂ ಮರೀಚಿಕೆಯಾಗಿದೆ. ಹೀಗಾಗಿ ಬೆಳೆ ಉಳಿಸಿಕೊಳ್ಳಲು ರೈತರು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ.
ಮಳೆ ಬರುತ್ತದೆ ಎನ್ನುವ ವಿಶ್ವಾಸದಲ್ಲಿ ರೈತರು ಈರುಳ್ಳಿ, ಗೋವಿನಜೋಳ, ಹತ್ತಿ, ಸೂರ್ಯಕಾಂತಿ, ಹೆಸರು ಬಿತ್ತನೆ ಮಾಡಿದ್ದಾರೆ. ಮಳೆ ಬರುತ್ತಿಲ್ಲ. ಇತ್ತ ಹುಲಿಗುಡ್ಡ ಏತ ನೀರಾವರಿ ಕಾಲುವೆ ಮೂಲಕ ನೀರು ಹರಿಸದ ಕಾರಣ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರು ಹಾಯಿಸುತ್ತಿದ್ದಾರೆ.ಇದು ಅತ್ಯಂತ ವೆಚ್ಚದಾಯಕವಾಗಿದ್ದು, ಆರ್ಥಿಕ ತೊಂದರೆಗೆ ಕಾರಣವಾಗಿದೆ. ಆದ್ದರಿಂದ ಸರಕಾರದವರು ಕಾಲುವೆಗಳಿಗೆ ನೀರನ್ನು ಬಿಡಬೇಕು ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ ರೈತರು.
ಡಂಬಳ ಹೋಬಳಿಯ ಮೇವುಂಡಿ ಗ್ರಾಮದ ರೈತರಾದ ಮುದ್ಲಿಂಗಪ್ಪ ಕೊರ್ಲಹಳ್ಳಿ ಮಳೆಯಾಗದೆ ಇರುವ ಹಿನ್ನೆಲೆಯಲ್ಲಿ ಟ್ಯಾಂಕರ್ ಮೂಲಕ ಈರುಳ್ಳಿಗೆ ನೀರು ಬಳಕೆಗೆ ಮುಂದಾಗಿದ್ದಾರೆ.ಬೆಳೆ ಉಳಿಸಿಕೊಳ್ಳಲು ಅನಿವಾರ್ಯವಾಗಿ ರೈತರು ಟ್ಯಾಂಕರ್ ಮತ್ತು ಬೋರ್ವೆಲ್ ನೀರು ಬಳಸಬೇಕಾಗಿದೆ. ಟ್ಯಾಂಕರ್ ಮಾಲೀಕರು ಈ ಪರಿಸ್ಥಿತಿಯನ್ನೇ ದುರ್ಬಳಕೆ ಮಾಡಿಕೊಂಡು ಹೆಚ್ಚಿನ ದರ ನಿಗದಿ ಮಾಡುತ್ತಿದ್ದಾರೆ. ಟ್ರ್ಯಾಕ್ಟರ್ ಮತ್ತು ಟ್ಯಾಂಕರ್ ಸೇರಿ ಒಂದು ದಿನಕ್ಕೆ ಬೋರ್ವೆಲ್ ಮಾಲೀಕರು ಒಂದು ಟ್ಯಾಂಕರ್ ನೀರಿಗೆ ₹300 ಪಡೆಯುತ್ತಿದ್ದಾರೆ.
ರೈತರು ಬಿತ್ತಿದ ಬೆಳೆ ಉಳಿಸಲು ಮತ್ತು ಆರ್ಥಿಕ ತೊಂದರೆಗೆ ಒಳಗಾಗುತ್ತಿರುವುದನ್ನು ತಪ್ಪಿಸಲು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ, ಶಾಸಕರಾದ ಸಿ.ಸಿ. ಪಾಟೀಲ್, ಜಿ.ಎಸ್. ಪಾಟೀಲ್, ಡಾ. ಚಂದ್ರು ಲಮಾಣಿ, ಗದಗ ಜಿಲ್ಲಾಧಿಕಾರಿ ಶೀಘ್ರವಾಗಿ ಹುಲಿಗುಡ್ಡ ಏತನೀರಾವರಿ ಮೂಲಕ ಕೆರೆಗಳಿಗೆ, ಕಾಲುವೆಗಳಿಗೆ, ನೀರು ಹರಿಸಲು ಮುಂದಾಗಬೇಕು ಎನ್ನುವುದು ರೈತರ ಒತ್ತಾಸೆಯಾಗಿದೆ.10 ಎಕರೆಯಲ್ಲಿ ಬಿತ್ತನೆ ಮಾಡಿರುವ ಈರುಳ್ಳಿಗೆ ಮಳೆಯಾಗದೆ ಇರುವ ಕಾರಣ ಇದರಲ್ಲಿ 4ಎಕರೆ ಈರುಳ್ಳಿಯಾದರೂ ಉಳಿಸಿಕೊಳ್ಳಲು ಟ್ಯಾಂಕರ್ ನೀರು ಬಳಕೆ ಮಾಡುತ್ತಿದ್ದೇವೆ. ಸರ್ಕಾರದವರು ಕೆರೆ, ಕಾಲುವೆಗಳಿಗೆ ಏತ ನೀರಾವರಿ ಮೂಲಕ ಶೀಘ್ರವಾಗಿ ನೀರು ಹರಿಸಲು ಮುಂದಾಗಬೇಕು ಎಂದು ಮೇವುಂಡಿ ಗ್ರಾಮದ ಮುದ್ಲಿಂಗಪ್ಪ ಕೊರ್ಲಹಳ್ಳಿ ಹೇಳಿದರು.