ವಿಶ್ವ ಕಂಡ ಸರ್ವಶ್ರೇಷ್ಠ ಸರೋದ ವಾದಕ ತಾರಾನಾಥರು

| Published : Oct 20 2025, 01:02 AM IST

ಸಾರಾಂಶ

ಪ್ರೊ. ರಾಜೀವ್ ತಾರಾನಾಥರು ಜಾತಿ, ಧರ್ಮ, ಗಡಿ, ಮೀರಿ ಬೆಳೆದವರಾಗಿದ್ದರು. ಭಾರತದ ಮಹಾನ್ ದಾರ್ಶನಿಕರು, ಸೂಫಿ ಪಂಥದ ಪ್ರತಿಪಾದರು. ಬೋಧಿಸಿದ ಬಹುತ್ವದ ಕಲ್ಪನೆಯಂತೆ ನಾನು ಎನ್ನದೇ ನಾವು ಎಂಬ ಭಾವನೆಯ ಸಾಮರಸ್ಯದ ಸಹಬಾಳ್ವೆಯ ಚಿಂತನೆ ಒಳಗೊಂಡ ಬಹುತ್ವ ಗುಣ ಇಷ್ಟಪಟ್ಟವರಾಗಿದ್ದರು.

ಧಾರವಾಡ:

ಪಂಡಿತ ರಾಜೀವ್ ತಾರಾನಾಥ್ ವಿಶ್ವ ಕಂಡ ಒಬ್ಬ ಸರ್ವಶ್ರೇಷ್ಠ ಸರೋದ್ ವಾದಕರು ಮಾತ್ರವಲ್ಲ, ಸಂಗೀತ ಲೋಕದ ಮಾಂತ್ರಿಕರಾಗಿದ್ದರು. ಅವರು ಬಹುತ್ವ ಭಾರತದ ಭವ್ಯ ಕನಸುಗಾರರಾಗಿದ್ದರು ಎಂದು ಚಿಂತಕ ಡಾ. ರಹಮತ್ ತರೀಕೆರೆ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಪಂ. ರಾಜೀವ್ ತಾರಾನಾಥ ಅವರ 93ನೇ ಜನ್ಮದಿನದ ಸ್ಮರಣೆಯಲ್ಲಿ ಮಾತನಾಡಿದ ಅವರು, ಪ್ರೊ. ರಾಜೀವ್ ತಾರಾನಾಥರು ಜಾತಿ, ಧರ್ಮ, ಗಡಿ, ಮೀರಿ ಬೆಳೆದವರಾಗಿದ್ದರು. ಭಾರತದ ಮಹಾನ್ ದಾರ್ಶನಿಕರು, ಸೂಫಿ ಪಂಥದ ಪ್ರತಿಪಾದರು. ಬೋಧಿಸಿದ ಬಹುತ್ವದ ಕಲ್ಪನೆಯಂತೆ ನಾನು ಎನ್ನದೇ ನಾವು ಎಂಬ ಭಾವನೆಯ ಸಾಮರಸ್ಯದ ಸಹಬಾಳ್ವೆಯ ಚಿಂತನೆ ಒಳಗೊಂಡ ಬಹುತ್ವ ಗುಣ ಇಷ್ಟಪಟ್ಟವರಾಗಿದ್ದರು. ಮನುಷ್ಯ ಇನ್ನೊಬ್ಬ ಮನುಷ್ಯನನ್ನು ವಿಭಿನ್ನವಾಗಿ ಕಾಣುವ ಪರಿ ಖಂಡಿಸಿದವರಾಗಿದ್ದರು. ಅವರಲ್ಲಿ ಅಪಾರ ಪ್ರಯೋಗಶೀಲ ಗುಣವಿತ್ತು ಎಂದರು.

ಆಂಗ್ಲ ಭಾಷಾ ಪಂಡಿತರಾದ ಅವರು ಪ್ರಾಧ್ಯಾಪಕ ಹುದ್ದೆ ತೊರೆದು ಸಂಗೀತದ ಬಗ್ಗೆ ಆಸಕ್ತಿ ಹೊಂದಿದರು. ಖ್ಯಾತ ಸಂಗೀತಗಾರರಾದ ಅಲಿ ಅಕ್ಬರ್‌ಖಾನರಿಂದ ಪ್ರಭಾವಿತರಾದ ರಾಜೀವ ತಾರಾನಾಥ ಅವರೇ ನನ್ನ ಗುರು ಎಂದು ಒಪ್ಪಿಕೊಂಡು ಸಂಗೀತ ಪರಂಪರೆ ಮುಂದುವರಿಸಿದರು. ಹಲವಾರು ಭಾಷೆ ಬಲ್ಲ ಪ್ರಖಾಂಡ ಪಂಡಿತರಾಗಿದ್ದು. ಭಾರತದ ಇಂದಿನ ಸ್ಥಿತಿಗತಿಯ ಬಗ್ಗೆ ವಿಷಾದಿಸಿದ್ದರು ಎಂದು ತಿಳಿಸಿದರು.ಧಾರವಾಡ ನಿರಂಜನ ವಿಚಾರ ವೇದಿಕೆ ಸಂಚಾಲಕ ಎಚ್.ಜಿ. ದೇಸಾಯಿ ಮಾತನಾಡಿ, ಪಂ. ತಾರಾನಾಥರು ಅಪರೂಪದ ಸಂಗೀತ ವಿದ್ವಾಂಸರು. ಅವರಿಗೆ ಸಂಗೀತದ ಬಳುವಳಿ ತಮ್ಮ ಮನೆಯಿಂದಲೇ ಎರವಲು ಪಡೆದಿದ್ದರು ಎಂದರು. ಖ್ಯಾತ ತಬಲಾ ವಾದಕ ಭೀಮಾಶಂಕರ್ ಬಿದನೂರ, ಪಂ. ರಾಜೀವ ತಾರಾನಾಥ ನನ್ನಂತಹ ಅನೇಕ ಸಂಗೀತ ಕಲಾವಿದರನ್ನು ಮಕ್ಕಳಂತೆ ಬೆಳೆಸಿ ಪ್ರೋತ್ಸಾಹಿಸಿದರು. ಅವರದು ಮೇರು ವ್ಯಕ್ತಿತ್ವ, ನಿಷ್ಠುರ ಗುಣವುಳ್ಳ ಉದಾರಿಗಳಾಗಿದ್ದರು. ನಾವು ಇಂದು ಗುರುಭಕ್ತಿ ಹೇಗೆಂಬುದನ್ನು ಅವರಿಂದಲೇ ಕಲಿಯಬೇಕೆಂದರು.

ಧಾರವಾಡ ಆಕಾಶವಾಣಿಯ ವಿಶ್ರಾಂತ ನಿರ್ದೇಶಕ ಸಿ.ಯು. ಬೆಳ್ಳಕ್ಕಿ ಅಧ್ಯಕ್ಷತೆ ವಹಿಸಿದ್ದರು. ವೀರಣ್ಣ ಒಡ್ಡೀನ ಸ್ವಾಗತಿಸಿದರು. ಪ್ರಾಚಾರ್ಯ ಶಶಿಧರ ತೋಡಕರ ಪ್ರಾಸ್ತಾವಿಕ ಮಾತನಾಡಿದರು. ಶಂಕರ ಹಲಗತ್ತಿ ಪರಿಚಯಿಸಿದರು. ಕೆ. ರಾಮರಡ್ಡಿ ನಿರ್ವಹಿಸಿದರು. ಡಾ. ಸಿ.ಬಿ. ಐನಳ್ಳಿ ವಂದಿಸಿದರು.