ಹರಪನಹಳ್ಳಿ: ತೆರಿಗೆ ವಸೂಲಾತಿಯಲ್ಲಿ ಉತ್ತಮ ಸಾಧನೆ ಮಾಡಿದ ತಾಲೂಕಿನ ಗ್ರಾಪಂ ಸಿಬ್ಬಂದಿ ಕಾರ್ಯ ಶ್ಲಾಘನೀಯ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಹೇಳಿದರು.
ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ ಪ್ರಯುಕ್ತ 2025-26ನೇ ಸಾಲಿನ ತೆರಿಗೆ ವಸೂಲಾತಿಯಲ್ಲಿ ಹರಪನಹಳ್ಳಿ ತಾಲೂಕು ಶೇ.100 ಸಾಧನೆ ಮಾಡಿದ್ದಕ್ಕೆ, ತಾಪಂ ವತಿಯಿಂದ ಗ್ರಾಪಂ ಅಧಿಕಾರಿ, ಸಿಬ್ಬಂದಿ ವರ್ಗದವರಿಗೆ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ತೆರಿಗೆ ವಸೂಲಾತಿಯಲ್ಲಿ ಹರಪನಹಳ್ಳಿ ತಾಲ್ಲೂಕು ಶೇ.100ರಷ್ಟು ಸಾಧನೆ ಮಾಡಿದಕ್ಕೆ ತಾಲೂಕಿನ ಎಲ್ಲ ಗ್ರಾಪಂಗಳ ಅಧಿಕಾರಿ, ಸಿಬ್ಬಂದಿಗೆ ಅಭಿನಂದನಾ ಸಮಾರಂಭ ಏರ್ಪಡಿಸಿರುವುದು ಸೇವೆಯನ್ನು ಪರಿಗಣಿಸುವುದು ಹಾಗೂ ಪ್ರೋತ್ಸಾಹಿಸುವ ಕೆಲಸ ಒಳ್ಳೆಯ ಬೆಳವಣಿಗೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ತಾಪಂ ಇಒ ಚಂದ್ರಶೇಖರ್ ವೈ.ಎಚ್. ಪ್ರಾಸ್ತಾವಿಕವಾಗಿ ಮಾತನಾಡಿ, 2022-23ನೇ ಸಾಲಿನಲ್ಲಿ ₹62,83,683 ಸಂಗ್ರಹಿಸಿ ಶೇ.36 ವಸೂಲಾತಿಯೊಂದಿಗೆ ಜಿಲ್ಲೆಯಲ್ಲಿ 3ನೇ ಸ್ಥಾನ ಪಡೆದಿತ್ತು. 2023-24ನೇ ಸಾಲಿನಲ್ಲಿ ₹97,15,072 ಸಂಗ್ರಹಿಸಿ ಶೇ.22ರಷ್ಟು ಸಾಧಿಸಿ ಜಿಲ್ಲೆಯಲ್ಲಿ 6ನೇ ಸ್ಥಾನ, 2024-25ನೇ ಸಾಲಿನಲ್ಲಿ ₹3,82,92,103 ಸಂಗ್ರಹಿಸಿ ಶೇ.90ರಷ್ಟು ವಸೂಲಾತಿಯೊಂದಿಗೆ ವಿಜಯನಗರ ಜಿಲ್ಲೆಯಲ್ಲಿ 1ನೇ ಸ್ಥಾನ ಪಡೆದಿದ್ದರೆ, ಪುನಃ 2025-26ನೇ ಸಾಲಿನಲ್ಲಿ ₹4,14,69,051 ಸಂಗ್ರಹಿಸಿ ಶೇ.102 ವಸೂಲಾತಿಯೊಂದಿಗೆ ವಿಜಯನಗರ ಜಿಲ್ಲೆಯಲ್ಲಿ 1ನೇ ಸ್ಥಾನ ಪಡೆದಿರುವುದು ನಮ್ಮ ಎಲ್ಲ ಗ್ರಾಪಂ ಸಿಬ್ಬಂದಿ ಶ್ರಮ ಸಾಕಷ್ಟು ಇದೆ. ಇದಕ್ಕೆ ಜಿಪಂನ ಮೇಲಾಧಿಕಾರಿಗಳ ಆದೇಶ ಹಾಗೂ ಸ್ಥಳೀಯ ಶಾಸಕರ ಮಾರ್ಗದರ್ಶನದಿಂದ ಇದೆಲ್ಲ ಸಾಧ್ಯವಾಗಿದೆ ಎಂದು ಹೇಳಿದರು.
2024-25ನೇ ಸಾಲಿನಲ್ಲಿ ತಾಲೂಕಿನ ತೆರಿಗೆ ವಸೂಲಾತಿಯಲ್ಲಿ ಶೇ.90 ಸಾಧನೆ ಮಾಡಿ ಜಿಲ್ಲೆಯಲ್ಲಿಯೇ ಮೊದಲ ಸ್ಥಾನ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ತಾಲೂಕಿನ ಎಲ್ಲ ಪಿಡಿಒ, ಸಿಬ್ಬಂದಿಗೆ ಕಳೆದ ವರ್ಷ ಸ್ವತಃ ತಾವೇ ವಿಶೇಷ ರೀತಿಯಲ್ಲಿ ಸನ್ಮಾನಿಸಿ ಗೌರವಿಸಿದ್ದು 2025-26ರ ಸಾಧನೆಗೆ ಕಾರಣಗಳಲ್ಲಿ ಪ್ರಮುಖವಾಗಿದೆ ಎಂದು ಸ್ಮರಿಸಿದರು.ಜಿಪಂ ಮುಖ್ಯ ಲೆಕ್ಕಾಧಿಕಾರಿ ಡಕಣಾನಾಯ್ಕ ಮಾತನಾಡಿದರು. ಜಿಲ್ಲಾ ದಿಶಾ ಸಮಿತಿ ಸದಸ್ಯ ರೆಡ್ಡಿ ಶಾಂತಕುಮಾರ್, ನರೇಗಾ ಸಹಾಯಕ ನಿರ್ದೇಶಕ ಸೋಮಶೇಖರ್ ಯು.ಎಚ್, ತಾಲೂಕು ಯೋಜನಾಧಿಕಾರಿ ನವೀನಕುಮಾರ್, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣವರ್, ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಪಂ ಸಿಬ್ಬಂದಿ ಇದ್ದರು.