ಬಿಜೆಪಿಗೆ ದ್ರೋಹ ಎಸಗಿದವರಿಗೆ ತಕ್ಕ ಪಾಠ ಕಲಿಸಿ: ವೈ.ಎ.ನಾರಾಯಣಸ್ವಾಮಿ

| Published : May 16 2024, 12:48 AM IST

ಬಿಜೆಪಿಗೆ ದ್ರೋಹ ಎಸಗಿದವರಿಗೆ ತಕ್ಕ ಪಾಠ ಕಲಿಸಿ: ವೈ.ಎ.ನಾರಾಯಣಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗ ಬಿಜೆಪಿ ಕಚೇರಿಯಲ್ಲಿ ವಿಪ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ರಾಜಕೀಯ ಅಸ್ತಿತ್ವದ ಕಾರಣಕ್ಕೆ ಪಕ್ಷ ತೊರೆದು ಹೋದವರಿಗೆ ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವಂತೆ ವಿ.ಪ. ಸದಸ್ಯ ಹಾಗೂ ಆಗ್ನೇಯ ಪದವೀಧರ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಹೇಳಿದರು.

ಪಕ್ಷದ ಜಿಲ್ಲಾ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಂದಿನ ತಿಂಗಳು ನಡೆಯಲಿ ರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸುವುದು ಮೊದಲ ಅಜೆಂಡಾ, ಪಕ್ಷಕ್ಕೆ ದ್ರೋಹ ಮಾಡಿದವರ ಸೋಲಿಸುವುದು ಎರಡನೇ ಅಜೆಂಡವಾಗಿ ಸ್ವೀಕರಿಸಬೇಕು. ವಿಧಾನಪರಿಷತ್‍ನಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದಲೂ ಬಿಜೆಪಿ ಬಹುಮತ ಕಾಪಾಡಿಕೊಂಡು ಬರುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ನನ್ನ ಗೆಲುವು ನಿಶ್ಚಿತ. ಸೂಕ್ಷ್ಮಮತಿಗಳಾಗಿರುವ ಪದವೀಧರ ಶಿಕ್ಷಕರುಗಳ ಬಳಿ ನವಿರಾಗಿ ಮಾತನಾಡಿ, ನನ್ನ ಪರ ಮತ ಯಾಚಿಸಿ ಗೆಲುವಿಗೆ ಶ್ರಮಿಸಬೇಕೆಂದರು.

ರಾಜ್ಯ, ರಾಷ್ಟ್ರೀಯ ನಾಯಕರುಗಳು ಸೇರಿ ಈ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿಕೊಳ್ಳಲು ಹೊರಟಿದ್ದಾರೆ. ವಿಧಾನಪರಿಷತ್‍ನಲ್ಲಿ ನಮ್ಮ ಬಲ ಜಾಸ್ತಿಯಿದ್ದರೆ ಕಾಂಗ್ರೆಸ್ ತರುವ ಕಾಯಿದೆಗಳನ್ನು ಪ್ರಶ್ನಿಸಬಹುದು. ಹಾಗಾಗಿ ಗೆಲ್ಲುವ ಅನಿವಾರ್ಯತೆ ವಿಧಾನಪರಿಷತ್ ಚುನಾವಣೆಗಿದೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಶಿಕ್ಷಣ ಕ್ಷೇತ್ರದಲ್ಲಿ ಅವಾಂತರವಾಗಿದೆ. ಶಿಕ್ಷಣ ಮಂತ್ರಿ ಮಧು ಬಂಗಾರಪ್ಪನವರಿಗೆ ಕನ್ನಡ ಓದಲು ಸರಿಯಾಗಿ ಬರಲ್ಲ. ವರ್ಷಕ್ಕೆ ಮೂರು ಪರೀಕ್ಷೆ ನಡೆಸಲು ಹೊರಟು ಸುಮ್ಮನಾದರು. ಹತ್ತನೆ ತರಗತಿ ಪರೀಕ್ಷೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಭಯೋತ್ಪಾದಕರಂತೆ ಮಕ್ಕಳನ್ನು ಹೆದರಿಸಿ ಪರೀಕ್ಷೆ ಬರೆಸಿ 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌ ನೀಡಿ ಕಾಂಗ್ರೆಸ್ ಸರ್ಕಾರ ಮಾನ ಉಳಿಸಿಕೊಂಡಿದೆ ಎಂದರು.

ಶಿಕ್ಷಕರುಗಳು ಮಕ್ಕಳಿಗೆ ಪಾಠ ಮಾಡುವುದರ ಜೊತೆ ಗಣತಿ ಕೆಲಸವನ್ನು ಮಾಡಬೇಕು. ಕಡಿಮೆ ಫಲಿತಾಂಶ ಬಂದಿರುವ ಶಿಕ್ಷಕರುಗಳಿಗೆ ರಾಜ್ಯ ಸರ್ಕಾರ ನೋಟಿಸ್ ಕೊಡುತ್ತಿದೆ. ಪಿಯು, ಐಟಿಐ, ಕಾಲೇಜುಗಳನ್ನು ಮುಚ್ಚಲು ಹೊರಟಿದೆ. ರಾಜ್ಯದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆದ ಎಂಟುವರೆ ಲಕ್ಷ ಮಕ್ಕಳಲ್ಲಿ ಆರು ಲಕ್ಷ ಮಕ್ಕಳು ಪಾಸ್ ಆಗಿದ್ದಾರೆ. ಉಳಿದ ಎರಡುವರೆ ಲಕ್ಷ ಮಕ್ಕಳ ಗತಿ ಏನು? ಶಿಕ್ಷಕರುಗಳ ರಜೆಯನ್ನು ಕಡಿತಗೊಳಿಸಿದೆ. ಶಿಕ್ಷಕರು, ನೌಕರರು, ಅಧಿಕಾರಿಗಳನ್ನು ಕಂಡರೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಆಗಲ್ಲ. ಏಳನೆ ವೇತನ ಆಯೋಗ ಜಾರಿಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿ ಇದುವರೆವಿಗೂ ಈಡೇರಿಸಿಲ್ಲ. ಸದನದ ಒಳಗೆ ಹೊರಗೆ ಶಿಕ್ಷಕರುಗಳ ಸಮಸ್ಯೆಗಳ ಬಗ್ಗೆ ಕಳೆದ ಇಪ್ಪತ್ತು ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದೇನೆಂದರು.

ಚಿತ್ರದುರ್ಗದಲ್ಲಿ 1437, ಹಿರಿಯೂರು-830, ಚಳ್ಳಕೆರೆ-927, ಮೊಳಕಾಲ್ಮುರು-351, ಹೊಸದುರ್ಗ-630, ಹೊಳಲ್ಕೆರೆ-420 ಮತದಾರರಿದ್ದಾರೆ. ಒಟ್ಟು 23514 ಮತದಾರರ ಪೈಕಿ 8894 ಮಹಿಳೆಯರು, 1423 ಪುರುಷ ಮತದಾರರಿದ್ದಾರೆ. ತುಮಕೂರಿನಲ್ಲಿ 7180, ಕೋಲಾರ-4126, ದಾವಣಗೆರೆ-3890, ಚಿಕ್ಕಬಳ್ಳಾಪುರ ದಲ್ಲಿ 3700 ಮತಗಳಿವೆ. 34 ಎಂಎಲ್ಎ. ಐದು ಎಂಪಿಗಳನ್ನು ಒಳಗೊಂಡಿರುವ ವಿಧಾನ ಪರಿಷತ್ ಕ್ಷೇತ್ರದಲ್ಲಿ 20 ವರ್ಷದಿಂದ 20 ಲಕ್ಷ ಕಿ.ಮೀ. ಸುತ್ತಾಡಿದ್ದೇನೆ. ಎಲ್ಲಾ ಶಿಕ್ಷಕರುಗಳ ಕಷ್ಟ-ಸುಖಕ್ಕೆ ಸ್ಪಂದಿಸುತ್ತಿದ್ದೇನೆ. ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ಪಕ್ಷಕ್ಕೆ ದ್ರೋಹವೆಸಗಿ ಕಾಂಗ್ರೆಸ್‍ಗೆ ಹೋಗಿರುವ ವರಿಗೆ ತಕ್ಕ ಪಾಠ ಕಲಿಸಿ ಎಂದು ವಿನಂತಿಸಿದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಶಿಕ್ಷಣ ಕ್ಷೇತ್ರ, ಪದವೀಧರ ಕ್ಷೇತ್ರ ಹಿಂದಿನಿಂದಲೂ ಬಿಜೆಪಿಯನ್ನು ಬೆಂಬಲಿಸಿಕೊಂಡು ಬರುತ್ತಿದೆ. ಆರು ಸ್ಥಾನಗಳನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ರಾಷ್ಟ್ರೀಯ ರಾಜ್ಯ ನಾಯಕರುಗಳು ಸೂಚಿಸಿರುವುದರಿಂದ ಕಾರ್ಯಕರ್ತರು ಈಗಿನಿಂದಲೇ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಪರ ಪ್ರಚಾರ ಆರಂಭಿಸುವಂತೆ ಹೇಳಿದರು.

ಹಠಕ್ಕೆ ಬಿದ್ದು ಕಾಂಗ್ರೆಸ್‍ನಿಂದ ಟಿಕೆಟ್ ತೆಗೆದುಕೊಂಡಿರುವವರನ್ನು ಈ ಚುನಾವಣೆಯಲ್ಲಿ ಸೋಲಿಸಬೇಕಿದೆ. ಜಿಲ್ಲೆಯಲ್ಲಿ 4610 ಮತಗಳಿದ್ದು, ಹತ್ತು ಮತಗಳಿಗೆ ಒಬ್ಬರು ಪ್ರಮುಖರನ್ನು ನೇಮಿಸಿ ಪ್ರಧಾನ ಮಂತ್ರಿ ಮೋದಿರವರ ಶಿಕ್ಷಣ ನೀತಿಯನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರಧಾನ ಕಾರ್ಯದರ್ಶಿ ಸಂಪತ್, ಮಾಜಿ ಶಾಸಕ ತಿಪ್ಪೇಸ್ವಾಮಿ, ಬಿಜೆಪಿ. ಎಸ್ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್‍ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಜ್ಜಪ್ಪ ವೇದಿಕೆಯಲ್ಲಿದ್ದರು.ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಆರ್.ಲಕ್ಷ್ಮಿಕಾಂತರೆಡ್ಡಿ, ಬಿಜೆಪಿ ಮಹಿಳಾ ಅಧ್ಯಕ್ಷೆ ಶೈಲಜಾರೆಡ್ಡಿ, ರಜನಿ, ಬಸಮ್ಮ, ಶ್ಯಾಮಲ ಶಿವಪ್ರಕಾಶ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕಲ್ಲಂ ಸೀತಾರಾಮರೆಡ್ಡಿ, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ವಕ್ತಾರ ನಾಗರಾಜ್‍ಬೇದ್ರೆ, ಶಂಭು ಸಭೆಯಲ್ಲಿ ಹಾಜರಿದ್ದರು.