ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಸರ್ಕಾರಿ ಶಾಲೆಗಳೆಂದರೆ ಬಹುತೇಕರಿಗೆ ಅಷ್ಟಕ್ಕಷ್ಟೇ. ಇಲ್ಲಿ ಶಿಕ್ಷಕರಿಗೆ ಬೋಧನೆಗಿಂತ ಇತರೆ ಕೆಲಸವೇ ಹೆಚ್ಚು. ಇನ್ನು ಶಾಲಾ ಆವರಣ ಬಗ್ಗೆ ಗಮನ ಕೊಡಲು ಹೇಗೆ ಸಾಧ್ಯ. ಆದರೆ ಇದಕ್ಕೆ ವಿಭಿನ್ನವಾಗಿದ್ದಾರೆ ನಗರದ ಕಾಳನಕೊಪ್ಪಲು ಬಡಾವಣೆಯಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಮುಖ್ಯ ಶಿಕ್ಷಕ ಬಸವರಾಜ್. ಈ ಶಿಕ್ಷಕನಿಗೆ ಶಾಲಾ ಮಕ್ಕಳ ಬಗ್ಗೆ ವಿಶೇಷ ಕಾಳಜಿ.ಈ ಹಿಂದೆ ಹಳೆ ಕಲ್ಲನಾಯಕನಹಳ್ಳಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆಯೂ ಇವರು ಪೋಷಕರ ಮೆಚ್ಚುಗೆ ಗಳಿಸಿದ್ದರು. ದಾನಿಗಳನ್ನು ಶಾಲೆಯತ್ತ ಸೆಳೆದಿದ್ದರು. ಕಾಳನಕೊಪ್ಪಲು ಶಾಲೆಗೆ ವರ್ಗಾವಣೆಗೊಂಡು ಬಂದ ನಂತರ ಶಾಲಾ ಆವರಣದಲ್ಲಿ ಮಕ್ಕಳ ಕ್ರೀಡಾ ಚಟುವಟಿಕೆಗೆ ಮೈದಾನವನ್ನು ಹೊರತುಪಡಿಸಿ ಬದಿಯಲ್ಲಿ ಕೃಷಿ ಭೂಮಿಯಂತೆ ನಿರ್ಮಾಣ ಮಾಡಿದ್ದಾರೆ. ಕೃಷಿಗೆ ಯೋಗ್ಯವಲ್ಲದ ಭೂಮಿಯಾದರೂ ಸಹ ಬೇರೆ ಕಡೆಯಿಂದ ಮಣ್ಣನ್ನು ಸಂಗ್ರಹಿಸಿ ತರಕಾರಿ ಬೆಳೆಯಲು ಸಜ್ಜು ಮಾಡಿಕೊಂಡಿದ್ದಾರೆ. ಶಾಲೆಗೆ ಇಲಾಖೆ ನಿಗದಿತ ವೇಳೆಗಿಂತ ಮೊದಲು ಮತ್ತು ನಂತರ ತೆರಳುವ ಇವರು ಮಕ್ಕಳಿಗೆ ಕೃಷಿ ಎಂದರೇನು, ರೈತರು ತರಕಾರಿಯನ್ನು ಹೇಗೆ ಬೆಳೆಯುತ್ತಾರೆ, ಅವುಗಳ ಪೋಷಣೆ ಮಣ್ಣಿನಲ್ಲಿ ಇರುವ ಪೋಷಕಾಂಶಗಳೇನು, ಮತ್ತು ಗಿಡಗಳ ನಿರ್ವಹಣೆ ಮತ್ತು ಸಂರಕ್ಷಣೆ ಹೇಗೆ, ಎಂಬ ಬಗ್ಗೆ ಮಕ್ಕಳಲ್ಲಿ ಜ್ಞಾನವನ್ನು ತುಂಬುವ ಪ್ರಯತ್ನವನ್ನು ಬಸವರಾಜ್ ಮಾಡಿದ್ದಾರೆ. ಮಕ್ಕಳು ಟಮೋಟೊ, ಬದನೆ, ಸೊಪ್ಪು ಸಂಬಾರ ಸೊಪ್ಪು, ಮೂಲಂಗಿ, ಬೆಂಡೆಕಾಯಿ, ಬೀನ್ಸ್, ಗೋರಿಕಾಯಿ, ಕರಿಬೇವು ಹೀಗೆ ವಿವಿಧ ತರಕಾರಿಗಳನ್ನು ಸೊಪ್ಪುಗಳನ್ನು ಬೆಳೆದಿದ್ದಾರೆ. ಇದಕ್ಕೆಲ್ಲಾ ನೀರು ಒದಗಿಸಲು ಅಗತ್ಯವಾದ ಪೈಪ್ಗಳನ್ನು ಮೋಟರ್ ಅನ್ನು ದಾನಿಗಳಿಂದ ಸಂಗ್ರಹಿಸಿದ್ದಾರೆ. ಸಮುದಾಯವನ್ನು ಶಾಲೆಯತ್ತ ಸೆಳೆಯುವಲ್ಲಿ ಮುಖ್ಯ ಶಿಕ್ಷಕರು ಯಶಸ್ವಿಯಾಗಿದ್ದಾರೆ. ಶಾಲಾ ಶಿಕ್ಷಕರ ನಡುವೆ ಒಳ್ಳೆಯ ಹೊಂದಾಣಿಕೆ ಇದೆ, ಇದು ಶಾಲೆಯ ಅಭಿವೃದ್ಧಿಗೆ ಪ್ಲಸ್ ಪಾಯಿಂಟ್ ಸಮಾನ ಮನಸ್ಕ ಶಿಕ್ಷಕರು ಇರುವುದರಿಂದ ಮಕ್ಕಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಕಾಣಬಹುದಾಗಿದೆ. ಈ ಹಿಂದೆ ಕಾಳನಕೊಪ್ಪಲಿನಲ್ಲಿ ಶಾಲೆಗೆ ಸೂಕ್ತವಾದ ಕಟ್ಟಡವಿರಲಿಲ್ಲ ಎರಡು ಸಣ್ಣ ಕಟ್ಟಡಗಳಲ್ಲಿ ನಡೆಯುತ್ತಿತ್ತು. ಸರ್ಕಾರ ಶಾಲಾ ಕಟ್ಟಡ ನಿರ್ಮಿಸಲು ಹಣ ಒದಗಿಸಿದರು ಸಹ ನಿವೇಶನದ ಕೊರತೆಯಿಂದ ಕೆಲ ವರ್ಷ ಹಣ ಹಾಗೆ ಇತ್ತು. ಮಲ್ಲೇಶ್ ಮುಖ್ಯ ಶಿಕ್ಷಕರಾಗಿ ಬಂದಮೇಲೆ ಗ್ರಾಮದ ಪಕ್ಕದಲ್ಲಿಯೇ ಎರಡು ಎಕರೆ ಕಂದಾಯ ಭೂಮಿಯನ್ನು ಶಿಕ್ಷಣ ಇಲಾಖೆಗೆ ಪಡೆಯುವಲ್ಲಿ ಶಾಸಕರ ನೆರವಿನೊಂದಿಗೆ ಯಶಸ್ವಿಯಾಗಿದ್ದರು. ಅವರು ಉತ್ತಮ ಕಟ್ಟಡ ಮತ್ತು ಶಾಲಾವರಣಕ್ಕೆ ಭದ್ರತೆ ಮಾಡಿ ತೆರಳಿದ್ದರು. ಅದನ್ನು ಮುಖ್ಯ ಶಿಕ್ಷಕ ಬಸವರಾಜ್ ಸ್ಮರಿಸುತ್ತಾರೆ. ಪತ್ರಿಕೆಯೊಂದಿಗೆ ಮಾತನಾಡಿದ ಬಸವರಾಜ್ ನಮ್ಮ ಶಾಲೆಗೆ ಬರುವ ಬಹುತೇಕ ಮಕ್ಕಳು ಗ್ರಾಮೀಣ ಪ್ರದೇಶದವರೇ ಆಗಿದ್ದಾರೆ. ಕೆಲವರಿಗೆ ಕೃಷಿ ಭೂಮಿಯು ಇದೆ ಕೃಷಿ ಬಗ್ಗೆ ತಿಳಿದರೆ ಇನ್ನೂ ಸಹಕಾರಿಯಾಗುತ್ತದೆ ಮಕ್ಕಳಲ್ಲಿ ಬಾಲ್ಯದಲ್ಲಿ ನಾವು ಇರುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕು, ಇದು ಅವರ ಮುಂದಿನ ಜೀವನದಲ್ಲಿ ಸಹಕಾರಿಯೆನ್ನುತ್ತಾರೆ. ಯೋಗ ಸಂಪನ್ಮೂಲ ವ್ಯಕ್ತಿಯು ಆಗಿರುವ ಬಸವರಾಜ್ ಮಕ್ಕಳಿಗೆ ಯೋಗ ಶಿಕ್ಷಣವನ್ನು ಸಹ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಕಾಳನ ಕೊಪ್ಪಲು ಶಾಲೆ ಒಂದು ಮಾದರಿ ಶಾಲೆಯಾಗಿದೆ.