ಕನ್ನಡಪ್ರಭ ವಾರ್ತೆ ಧಾರವಾಡ

ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ಸಹಾಯ ಮಾಡುವುದಾಗಿ ಹೇಳಿ ಶಿಕ್ಷಕನೋರ್ವ ವಿದ್ಯಾರ್ಥಿಯಿಂದ ಬಂಗಾರದ ಆಭರಣ ಪಡೆದು ಮೋಸ ಮಾಡಿದ ಘಟನೆ ನಗರದಲ್ಲಿ ನಡೆದಿದೆ.

ಕೆ.ಇ. ಬೋರ್ಡ್‌ ಸಂಸ್ಥೆಯ ವಿದ್ಯಾರಣ್ಯ ಶಾಲೆಯ ಶಿಕ್ಷಕ ರಾಜಶೇಖರ್‌, ಅದೇ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯಿಂದ ಸುಮಾರು 80 ಗ್ರಾಂ ಚಿನ್ನದ ಆಭರಣ ಪಡೆದುಕೊಂಡಿರುವ ಆರೋಪ ಹೊತ್ತಿದ್ದಾರೆ.

ನನಗೆ ಹಣದ ತೊಂದರೆಯಾಗಿದ್ದು, ಹಣ ಅಥವಾ ಚಿನ್ನದ ಆಭರಣ ತಂದುಕೊಂಡು, ನಂತರ ವಾಪಸ್‌ ಕೊಡುತ್ತೇನೆಂದು ನಂಬಿಸಿ ಶಿಕ್ಷಕ ಆಭರಣ ಪಡೆದಿದ್ದಾನೆ. ವಿದ್ಯಾರ್ಥಿಯು ಮನೆಯಲ್ಲಿ ಯಾರೂ ಇಲ್ಲದ ವೇಳೆ 80 ಗ್ರಾಂ ಆಭರಣ ತಂದುಕೊಟ್ಟಿರುವುದು ವಿದ್ಯಾರ್ಥಿಯ ಪಾಲಕರಿಗೆ ಗೊತ್ತಾದ ಬಳಿಕ ಸಂಗತಿ ಬಹಿರಂಗವಾಗಿದೆ.

ಚಿನ್ನದ ಆಭರಣ ಶಿಕ್ಷಕನಿಗೆ ಕೊಟ್ಟಿರುವ ವಿದ್ಯಾರ್ಥಿ ತೀವ್ರ ಮಾನಸಿಕವಾಗಿ ಜರ್ಝರಿತವಾಗಿದ್ದು, ಪಾಲಕರು ವಿದ್ಯಾರ್ಥಿಯೊಂದಿಗೆ ಶಾಲೆಗೆ ಆಗಮಿಸಿ ಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆದರೆ, ಶಿಕ್ಷಕ ರಾಜಶೇಖರ ವಿದ್ಯಾರ್ಥಿ ಮತ್ತು ಆತನ ಪಾಲಕರ ಆರೋಪವನ್ನು ತಳ್ಳಿ ಹಾಕಿ, ವಿದ್ಯಾರ್ಥಿಯಿಂದ ಒಂದಿಷ್ಟು ಹಣ ಪಡೆದಿರುವುದು ಸತ್ಯ. ಆದರೆ, ಚಿನ್ನದ ಆಭರಣ ಪಡೆದಿಲ್ಲ ಎಂದು ಹೇಳಿದ್ದಾರೆ.


ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಪೋಷಕರು ಸದ್ಯ ಉಪ ನಗರ ಪೊಲೀಸರಿಗೆ ದೂರು ಸಲ್ಲಿಸಿದ್ದು, ತನಿಖೆ ನಂತರವೇ ಚಿನ್ನಾಭರಣ ಎಲ್ಲಿವೆ ಎಂಬುದು ಗೊತ್ತಾಗಬೇಕಿದೆ.