ಶಿಕ್ಷಕಿಯರಿಂದ ಶಾಲೆಗೆ ಬೋರ್‌ವೆಲ್ : ಸರ್ವ ಧರ್ಮ ಸಂಘ ಅಭಿನಂದನೆ

| Published : Apr 12 2025, 12:49 AM IST

ಸಾರಾಂಶ

ಚಿಕ್ಕಮಗಳೂರು, ತಾಲೂಕಿನ ಮಾಚಗೊಂಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಶಾಶ್ವತ ಕುಡಿಯುವ ನೀರಿಗಾಗಿ ₹೨.೫೦ ಲಕ್ಷ ವೆಚ್ಚದಲ್ಲಿ ಬೋರ್‌ವೆಲ್ ಕೊರೆಸಿ ಆಸರೆಯಾದ ಶಿಕ್ಷಕಿ ಹಿನತಬಸ್ಸಂ ಮತ್ತು ರಜಿಯಾ ಸುಲ್ತಾನಾ ಅವರಿಗೆ ಸರ್ವ ಧರ್ಮ ಸೇವಾ ಸಂಘದಿಂದ ಆತ್ಮೀಯವಾಗಿ ಗೌರವಿಸಲಾಯಿತು.

ಶಿಕ್ಷಕಿ ಹಿನತಬಸ್ಸಂ, ರಜಿಯಾ ಸುಲ್ತಾನಾಗೆ ಗೌರವಾರ್ಪಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ತಾಲೂಕಿನ ಮಾಚಗೊಂಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಶಾಶ್ವತ ಕುಡಿಯುವ ನೀರಿಗಾಗಿ ₹೨.೫೦ ಲಕ್ಷ ವೆಚ್ಚದಲ್ಲಿ ಬೋರ್‌ವೆಲ್ ಕೊರೆಸಿ ಆಸರೆಯಾದ ಶಿಕ್ಷಕಿ ಹಿನತಬಸ್ಸಂ ಮತ್ತು ರಜಿಯಾ ಸುಲ್ತಾನಾ ಅವರಿಗೆ ಸರ್ವ ಧರ್ಮ ಸೇವಾ ಸಂಘದಿಂದ ಆತ್ಮೀಯವಾಗಿ ಗೌರವಿಸಲಾಯಿತು.ಈ ವೇಳೆ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಉಪ್ಪಳ್ಳಿ ಕೆ.ಭರತ್ ಸಮಾಜದಲ್ಲಿ ಆಸ್ತಿ, ಅಂತಸ್ತು ಗಳಿಸುವುದು ಮುಖ್ಯವಲ್ಲ. ಮರಳಿ ಸಮಾಜಕ್ಕೆ ಕೊಡುಗೆ ನೀಡುವುದನ್ನು ಕಲಿತುಕೊಂಡರೆ ಬದುಕು ಸಾರ್ಥಕ ಎಂಬುದಕ್ಕೆ ಈ ಶಾಲೆ ಶಿಕ್ಷಕಿಯ ಸೇವೆಯೇ ನೇರ ಉದಾಹರಣೆ ಎಂದು ತಿಳಿಸಿದರು.ಶಾಲೆ ಹಲವಾರು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿತ್ತು. ಈ ಬಗ್ಗೆ ಶಾಲಾ ಆಡಳಿತ ಮಂಡಳಿ ಗ್ರಾಪಂ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ಕಂಡುಬಂದಿಲ್ಲ. ಈ ಬಗ್ಗೆ ಶಾಲೆಯ ಇಬ್ಬರು ಶಿಕ್ಷಕಿಯರು ಕುಟುಂಬಸ್ಥರ ಒಪ್ಪಿಗೆ ಪಡೆದು ಸ್ವಂತ ಖರ್ಚಿನಲ್ಲಿ ಬೋರೆವೆಲ್ ಕೊರೆಸಿರುವುದು ಸಮಾಜಕ್ಕೆ ಮಾದರಿ ಎಂದು ಹೇಳಿದರು.ಇತ್ತೀಚಿಗೆ ಸರ್ಕಾರಿ ಶಾಲೆಗಳು ಮೂಲಭೂತ ಸೌಕರ್ಯಗಳಿಲ್ಲದೇ ಪರಿತಪಿಸುತ್ತಿವೆ. ಹೀಗಾಗಿ ಶಾಲಾ ಸಿಬ್ಬಂದಿ ದುಡಿಮೆಯ ಶೇ.೪ ರಷ್ಟು ಹಣವನ್ನು ಪ್ರತಿ ತಿಂಗಳು ಸಂಗ್ರಹಿಸಿ ವಾರ್ಷಿಕ ಬಳಿಕ ಶಾಲಾಭಿವೃದ್ಧಿ ಗೆ ಬಳಸಬಹುದು. ಆಗ ಯಾವುದೇ ಗ್ರಾಪಂ ಅಥವಾ ಚುನಾಯಿತ ಪ್ರತಿನಿಧಿಗಳ ಸಮೀಪ ಮನವಿಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಿದರು.ಅಲ್ಲದೇ ಶಾಲೆ ಹಳೇ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಸದಸ್ಯರು, ಸುತ್ತಮುತ್ತಲಿನ ದಾನಿಗಳ ಕೋರಿದರೆ ಕೈಲಾದಷ್ಟು ಸಹಾಯ ಧನ ಸಿಗಲಿದೆ. ಇದರಿಂದ ಸಣ್ಣಪುಟ್ಟ ಲೋಪದೊಷ ಸರಿಪಡಿಸಬಹುದು. ಕೆಲವು ಶಾಲೆಗಳಲ್ಲಿ ಶಿಕ್ಷಕರು ವೃತ್ತಿಧರ್ಮ ಮರೆತು ಇನ್ನಿತರೆ ಕೆಲಸಗಳಲ್ಲಿ ತೊಡಗುತ್ತಿದ್ದು ಈ ಕಾರ್ಯ ಕೈಬಿಟ್ಟು ಭವಿಷ್ಯದ ಮಕ್ಕಳನ್ನು ಅಣಿಗೊಳಿಸಬೇಕು ಎಂದರು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಲೋಕೇಶ್ ಮಾತನಾಡಿ ಅನೇಕ ವರ್ಷಗಳಿಂದ ಕುಡಿಯುವ ನೀರಿಗಾಗಿ ಪರದಾಡು ತ್ತಿದ್ದ ಶಾಲಾ ಮಕ್ಕಳಿಗೆ ಬೋರ್‌ವೆಲ್ ಕೊರೆಸಿರುವುದು ಹೆಮ್ಮೆಯ ಸಂಗತಿ. ಪ್ರತಿ ಶಾಲೆಗಳಲ್ಲಿ ಶಿಕ್ಷಕರು ಮುಂದಾದರೆ ಮೂಲಸೌಕರ್ಯದಿಂದ ವಂಚಿತವಾಗುವುದಿಲ್ಲ ಎಂದು ತಿಳಿಸಿದರು.ಇದೇ ವೇಳೆ ಶಾಲಾ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಸಿಬ್ಬಂದಿಗೆ ಗೌರವ ಸಲ್ಲಿಲಾಯಿತು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಸದಸ್ಯರಾದ ಅಣ್ಣಪ್ಪ, ಇಮ್ರಾನ್ ಆಲಿ, ಶಾಲಾ ಮುಖ್ಯಶಿಕ್ಷಕಿ ಸವಿತಾ, ಶಿಕ್ಷಕಿ ರಾದ ಮೆಂಜ್ಯಾ ನಾಯ್ಕ್, ಭುವನೇಶ್ವರಿ, ಶೀಲಾ, ಎಸ್.ಎನ್.ರೂಪ, ಬಿ.ಸಿ.ನಯನಾ, ಸ್ಥಳೀಯರಾದ ಸುರೇಶ್, ಅತಿಶಯ, ನಾಜೀರ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.