ಸೇವಾ ಹಿಂಬಡ್ತಿ ವಿರೋಧಿಸಿ ಶಿಕ್ಷಕರ ಪ್ರತಿಭಟನೆ

| Published : Jul 25 2024, 01:21 AM IST

ಸಾರಾಂಶ

ಚಿಕ್ಕಮಗಳೂರು, ತಮಗೆ ಸೇವೆಯಲ್ಲಿ ಹಿಂಬಡ್ತಿ ನೀಡಿರುವುದನ್ನು ವಿರೋಧಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ನಗರದ ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿಯಲ್ಲಿ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ನಡೆಯುವ ವೇಳೆ ದಿಢೀರ್‌ ಹೊರಾಟ

- ಆರು ಮತ್ತು ಎಂಟನೇ ತರಗತಿ ಬೋಧನೆಗೆ ಹೊಸ ವೃಂದ ಸೃಜಿಸಿ ಶಿಕ್ಷಕರ ನೇಮಕಾತಿ

- ರಾಜ್ಯದ ಇತಿಹಾಸದಲ್ಲೇ ಮೊದಲು

- ಸಂವಿಧಾನದ ಆಶಯ ಉಲ್ಲಂಘನೆಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ತಮಗೆ ಸೇವೆಯಲ್ಲಿ ಹಿಂಬಡ್ತಿ ನೀಡಿರುವುದನ್ನು ವಿರೋಧಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ನಗರದ ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿಯಲ್ಲಿ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ನಡೆಯುವ ವೇಳೆ ದಿಢೀರ್‌ ಪ್ರತಿಭಟನೆ ನಡೆಸಿದ ಪ್ರಾಥಮಿಕ ಶಾಲಾ ಶಿಕ್ಷಕರು ಹಿಂಬಡ್ತಿಯನ್ನು ಹಿಂಪಡೆಯಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.ಈ ವೇಳೆ ಮಾತನಾಡಿದ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಸುಂದರೇಶ್, 2016 ಕ್ಕಿಂತ ಮೊದಲು ನೇಮಕಾತಿ ಹೊಂದಿದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಿಂಬಡ್ತಿ ನೀಡಿ ಆರು ಮತ್ತು ಎಂಟನೇ ತರಗತಿ ಬೋಧನೆಗೆ ಎಂದು ಜಿಪಿಟಿ ಎಂಬ ಹೊಸ ವೃಂದವನ್ನು ಸೃಜಿಸಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗಿದೆ. ಇದು ರಾಜ್ಯದ ಇತಿಹಾಸದಲ್ಲೇ ಹಿಂದೆಂದೂ ನಡೆದಿಲ್ಲ. ಇಂತಹ ಕ್ರಮದ ಮೂಲಕ ಸಂವಿಧಾನದ ಆಶಯಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು.ರಾಜ್ಯ ಸರ್ಕಾರ ಹಿಂದಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ರೂಪಿಸಿರುವ ಹೊಸ ಪದ್ಧತಿಯಿಂದಾಗಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸೇವಾ ಜೇಷ್ಠತೆ, ಕಾಲಮಿತಿ ಬಡ್ತಿ, ಸ್ವಯಂ ಚಾಲಿತ ಬಡ್ತಿ, ಮುಖ್ಯ ಶಿಕ್ಷಕರ ಬಡ್ತಿ, ಪ್ರೌಢಶಾಲಾ ಶಿಕ್ಷಕರ ಬಡ್ತಿಯ ವರ್ಗಾವಣೆಗಳಲ್ಲಿ ಅನ್ಯಾಯವಾಗುತ್ತದೆ ಎಂದು ಹೇಳಿದರು.2016 ಕ್ಕಿಂತ ಮೊದಲು ನೇಮಕ ಹೊಂದಿದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಜಿಪಿಟಿ ವೃಂದದಲ್ಲಿ ವಿಲೀನಗೊಳಿಸಿ ಪ್ರೌಢಶಾಲೆಗೆ ಬಡ್ತಿ ನೀಡಬೇಕು. ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.ಶಿಕ್ಷಕರ ಹುದ್ದೆಗೆ ವಿದ್ಯಾರ್ಹತೆಯನ್ನೂ ಪರಿಗಣಿಸದೇ ಸೇವಾ ಹಿರಿತನದ ಆಧಾರದ ಮೇಲೆ ಬಡ್ತಿ ನೀಡಬೇಕು. 2016 ರ ಮೊದಲು ನಿಯಮಾವಳಿಯನ್ವಯ ಆರ್ಥಿಕ ಹಾಗೂ ಇನ್ನಿತರ ಸೌಲಭ್ಯಗಳನ್ನು ಒದಗಿಸಬೇಕು. 20-25 ವರ್ಷಗಳಿಂದ ಆರನೇ ಮತ್ತು ಎಂಟನೇ ತರಗತಿಗಳಿಗೆ ಜಿಪಿಟಿ, ಟಿವಿಟಿಗಳಿಗೆ ಸರಿಸಮನಾಗಿ ದುಡಿಯುತ್ತಿರುವ ಪದವೀಧರ ಶಿಕ್ಷಕರಿಗೆ ವಿಶೇಷ ವೇತನ ಬಡ್ತಿಯನ್ನು ನೀಡಬೇಕು ಎಂದು ಆಗ್ರಹಿಸಿದರು,ಪ್ರತಿಭಟನೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯ ಯೋಗಪ್ಪ, ತಾರೀಕ್ ಆಲಿ, ಜಿ.ಎಚ್‌. ಚಂದ್ರೇಗೌಡ, ಪುಷ್ಪಾ, ಗೀತಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

24 ಕೆಸಿಕೆಎಂ 3ತಮಗೆ ಸೇವೆಯಲ್ಲಿ ಹಿಂಬಡ್ತಿ ನೀಡಿರುವುದನ್ನು ವಿರೋಧಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ಚಿಕ್ಕಮಗಳೂರಿನ ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.