ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ವಿದ್ಯಾರ್ಥಿಗಳ ಸಹಕಾರ ಪಡೆದು ತರಗತಿ ಸ್ವಚ್ಛಗೊಳಿಸಿದ್ದ ಶಿಕ್ಷಕಿಯನ್ನು ಅಮಾನತುಗೊಳಿಸಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ರಮದ ವಿರುದ್ಧ ಶಿಕ್ಷಕರು ಮಂಗಳವಾರ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ ಮತ್ತು ರಾಮೋಜಿಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಜಿಲ್ಲೆಯ ನೂರಾರು ಶಿಕ್ಷಕರು, ಸಿಇಒ ಅನ್ಮೋಲ್ ಜೈನ್ ಕ್ರಮದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಶಿಕ್ಷಕರು ತರಗತಿಯಲ್ಲಿ ಪಾಠ ಮಾಡುವುದಕ್ಕಿಂತ ಹೆಚ್ಚಿನ ಸಮಯ ಇತರ ಕೆಲಸಗಳಿಗೆ ಸಮಯ ವ್ಯಯಿಸುವಂತಾಗಿದೆ. ಡಿ ಗ್ರೂಪ್ ನೌಕರರ ಕೆಲಸವನ್ನು ಶಿಕ್ಷಕರೇ ನಿರ್ವಹಿಸುತ್ತಿದ್ದಾರೆ. ಶಿಕ್ಷಕರು ಶಾಲೆಗಳಲ್ಲಿ ಪಾಠ ಮಾಡಬೇಕಾ ಅಥವಾ ಸ್ವಚ್ಛತಾ ಕೆಲಸ ಮಾಡಬೇಕಾ ಎಂದು ಪ್ರಶ್ನಿಸಿದರು.ಶೌಚಾಲಯ ಸ್ವಚ್ಛಗೊಳಿಸುವ ಕೆಲಸ ಹೊರತುಪಡಿಸಿ, ತರಗತಿ, ಶಾಲಾವರಣವನ್ನು ಮಕ್ಕಳಿಂದ ಸ್ವಚ್ಛತೆ ಮಾಡಿಸುವುದಕ್ಕೆ ಯಾರದೇ ವಿರೋಧವಿಲ್ಲ, ನಾವೂ ಸಹ ಶಾಲೆಗೆ ಹೋಗುವ ಸಮಯದಲ್ಲಿ ಸ್ವಚ್ಛತೆ ಕೆಲಸ ಮಾಡಿದ್ದೇವೆ. ಆದರೆ, ಈಗ ಪರಿಸ್ಥಿತಿ ಹಿಂದಿನಂತಿಲ್ಲ, ಮಕ್ಕಳಿಂದ ಸ್ವಚ್ಛತೆ ಮಾಡಿಸಬೇಡಿ ಎನ್ನುತ್ತಾರೆ. ಇದರ ಪರಿಣಾಮ ಶಿಕ್ಷಕರ ಮೇಲೆ ಬೀರುತ್ತಿದೆ. ಶಿಕ್ಷಕರು ಪಾಠ ಮಾಡುವುದು ಬಿಟ್ಟು ಈ ಕೆಲಸಗಳನ್ನೆಲ್ಲ ಮಾಡಬೇಕಿದೆ. ಉತ್ತಮ ಫಲಿತಾಂಶ ತಂದು ಕೊಡಿ ಎಂದರೆ ಎಲ್ಲಿಂದ ಕೊಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.ಅಧಿಕಾರಿಗಳು ಶಿಕ್ಷಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಮಕ್ಕಳಿಗೆ ಯಾವ ಪ್ರಮಾಣದ ಊಟ ಕೊಡಬೇಕು, ಎಷ್ಟು ಗ್ರಾಂ ಮೊಟ್ಟೆ ಕೊಟ್ಟಿದ್ದೇವೆ, ಎಷ್ಟು ಪೌಷ್ಟಿಕಾಂಶ ಹೊಂದಿರುವ ಆಹಾರ ನೀಡಿದ್ದೇವೆ ಎನ್ನುವುದರ ವರದಿ, ಮಾಹಿತಿ ಕೇಳುತ್ತಾರೆ. ಇದನ್ನು ಸಿದ್ದಪಡಿಸುತ್ತಾ ದಿನವಿಡೀ ಕೂರಬೇಕು. ಅದು ಶಿಕ್ಷಕರ ಕೆಲಸವೇ ಎಂದು ಪ್ರಶ್ನಿಸಿದ ಪುಟ್ಟಣ್ಣ, ಅನ್ಯ ಕೆಲಸಗಳನ್ನು ನಿರ್ವಹಿಸಲು ಅಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡಬೇಕು. ಡಿ ಗ್ರೂಪ್ ನೌಕರರ ನೇಮಕ ಮಾಡಿ ಶಿಕ್ಷಕರಿಗೆ ಪಾಠ ಮಾಡಲು ಸಮಯ ಕೊಡಿ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ರಾಮೋಜಿಗೌಡ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕಾದ ಜವಾಬ್ದಾರಿ ಶಿಕ್ಷಕರ ಮೇಲಿದೆ. ಆ ಕೆಲಸವನ್ನು ನಿಭಾಯಿಸಲು ಅವರಿಗೆ ಅನುವು ಮಾಡಿಕೊಡಿ, ಅದನ್ನು ಬಿಟ್ಟು ಬೇರೆ ಕೆಲಸಗಳಿಗೆ ಅವರನ್ನು ಬಳಸಿಕೊಳ್ಳುವುದರಿಂದ ಮಕ್ಕಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ, ಶಾಲಾ ಸ್ವಚ್ಚತೆ ವಿಚಾರವಾಗಿ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಿ ಎಂದರು.ಪ್ರತಿಭಟನೆ ನಂತರ ನಡೆದ ಸಭೆಯಲ್ಲಿ ಸಿಇಒ ಅನ್ಮೋಲ್ ಜೈನ್ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿ, ನಾವೆಲ್ಲರೂ ಒಂದೇ ಕುಟುಂಬದವರು, ಒಟ್ಟಾಗಿ ಸಮಾಜದ ಸೇವೆ ಮಾಡೋಣ, ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುತ್ತೇನೆ ಹಾಗೂ ಸ್ವಚ್ಚತೆ ವಿಚಾರವಾಗಿ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್, ನಿರ್ದೇಶಕ ಶಿವಸ್ವಾಮಿ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಟಿ.ಸ್ವಾಮಿ, ಕಾರ್ಯದರ್ಶಿ ಎಲ್.ಸಿ. ಮಹದೇವಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಮೇಶ್, ಕಾರ್ಯದರ್ಶಿ ಗುಣಶೇಖರ, ತಾಲ್ಲೂಕು ಅಧ್ಯಕ್ಷ ನೆ.ರ. ಪ್ರಭಾಕರ್, ಪ್ರೌಢಶಾಲಾ ಶಿಕ್ಷಕರ ಸಂಘದ ಚನ್ನಪಟ್ಟಣ ತಾಲೂಕು ಅಧ್ಯಕ್ಷ ಬಿ.ಎಸ್. ರಾಮಣ್ಣ, ಮಾಗಡಿ ತಾಲೂಕು ಅಧ್ಯಕ್ಷ ವೆಂಕಟೇಶ್, ರಾಮನಗರ ತಾಲೂಕು ಅಧ್ಯಕ್ಷ ವಿಜಯಕುಮಾರ್, ಕನಕಪುರ ತಾಲೂಕು ಅಧ್ಯಕ್ಷ ಮಾಧವರಾವ್ ಮತ್ತಿತರರು ಭಾಗವಹಿಸಿದ್ದರು....ಕೋಟ್ ...ಶಾಲೆಗಳಿಗೆ ಡಿ ಗ್ರೂಪ್ ನೌಕರರನ್ನು ನೇಮಕ ಮಾಡದೆ ಶಿಕ್ಷಕರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಗ್ರೂಪ್ ಡಿ ನೌಕರರ ನೇಮಕದ ಕುರಿತು ಶಿಕ್ಷಣ ಸಚಿವರು ಹಾಗೂ ಇಲಾಖೆ ಉನ್ನತಾಕಾರಿಗಳ ಜೊತೆ ಚರ್ಚೆ ಮಾಡಿದ್ದೇವೆ. ಗ್ರೂಪ್ ಡಿ ನೇಮಕ ಸಾಧ್ಯವಾಗದಿದ್ದರೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿ ಕನಿಷ್ಠ ಕೂಲಿ ನೀಡುವ ಬಗ್ಗೆ ಚರ್ಚಿಸಲಾಗಿದೆ. ಶೀಘ್ರದಲ್ಲಿ ಪರಿಹಾರ ಕ್ರಮದ ಆದೇಶ ಹೊರ ಬೀಳಲಿದೆ.- ಪುಟ್ಟಣ್ಣ, ಸದಸ್ಯರು, ವಿಧಾನ ಪರಿಷತ್17ಕೆಆರ್ ಎಂಎನ್ 3.ಜೆಪಿಜಿ
ರಾಮನಗರ ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್ ವಿರುದ್ದ ಶಿಕ್ಷಕರು ಪ್ರತಿಭಟನೆ ನಡೆಸಿದರು.