ಗದಗ: ರೈಲಿನ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆ ಸಮೀಪದ ಕಣಗಿನಹಾಳ ಬಳಿ 2 ಗಂಟೆಗಳ ಕಾಲ ಯಶವಂತಪುರ-ವಿಜಯಪುರ ರೈಲು ನಿಂತ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ಗುರುವಾರ ರಾತ್ರಿ ಯಶವಂತಪುರದಿಂದ ಹೊರಟು ಬೆಳಗ್ಗೆ 11ಕ್ಕೆ ವಿಜಯಪುರ ತಲುಪಬೇಕಿದ್ದ ರೈಲಿನ ಎಂಜಿನ್‌ನಲ್ಲಿ ತಾಂತ್ರಿಕ ದೋಷದಿಂದ 2 ಗಂಟೆಗಳ ಕಾಲ ನಿಂತಿದೆ. ಲೋಕೋ ಪೈಲೆಟ್‌ಗೆ ಕೊಪ್ಪಳದ ತಳಕಲ್ ಬಳಿಯೇ ರೈಲಿನ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ, ನಂತರ ಸ್ವಲ್ಪ ದೂರ ಕ್ರಮಿಸಿ ಕಣಗಿನಹಾಳ ಬಳಿ ರೈಲು ಬಂದು ನಿಂತಿದೆ. ಇದರಿಂದ ಹಿಂದೆ ಬರುತ್ತಿರುವ ಹಂಪಿ, ಅಮರಾವತಿ ಎಕ್ಸಪ್ರೆಸ್ ರೈಲುಗಳ ಚಲನೆಯಲ್ಲೂ ವಿಳಂಬವಾಗಿದೆ. ಎರಡು ಗಂಟೆಗೂ ಹೆಚ್ಚು ಕಾಲ ರೈಲು ನಿಂತಲ್ಲೇ ನಿಂತಿದ್ದರಿಂದ ರೈಲಿನಲ್ಲಿ ಇದ್ದ ಗದಗ, ಬಾಲಕೋಟೆ, ವಿಜಯಪುರ ತಲುಪಬೇಕಿರುವ ಪ್ರಯಾಣಿಕರು ಆತಂಕಗೊಂಡು ಏನೂ ಮಾಡಬೇಕು ಎಂದು ತೋಚದೇ ಪರದಾಡಿದರು. ನಂತರ ಗದಗನಿಂದ ಪ್ರತ್ಯೇಕ ಗೂಡ್ಸ್‌ ರೈಲೊಂದರ ಎಂಜಿನ್ ತಂದು ರೈಲನ್ನು ಗದಗ ನಿಲ್ದಾಣಕ್ಕೆ ತರಲಾಯಿತು ಎಂಬ ಮಾಹಿತಿ ತಿಳಿದುಬಂದಿದೆ.ಪ್ರಮಾಣಿತ ಬಿತ್ತನೆ ಬೀಜ ಬಳಕೆಗೆ ಮನವಿ

ನರಗುಂದ: ತಾಲೂಕಿನ ರೈತರು ಬಿತ್ತನೆ ಪೂರ್ವದಲ್ಲಿ ತಮ್ಮ ಜಮೀನು, ಮಳೆ ಪ್ರಮಾಣ, ಮಣ್ಣಿನ ಸ್ವಭಾವಕ್ಕೆ ಹೊಂದುವ ಬೀಜವನ್ನು ಆಯ್ಕೆ ಮಾಡಿಕೊಂಡರೆ ಉತ್ತಮ ಇಳುವರಿ ತೆಗೆಯಲು ಸಾಧ್ಯವಾಗುತ್ತದೆ ಎಂದು ಕೃಷಿ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ಎಂ.ಎಸ್. ಕುಲಕರ್ಣಿ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಉತ್ತಮ ಗುಣಮಟ್ಟದ ಪ್ರಮಾಣಿತ ಬೀಜ ಖರೀದಿಸಬೇಕು. ಸರ್ಕಾರ ಮಾನ್ಯತೆ ಪಡೆದ ಅಥವಾ ವಿಶ್ವಾಸಾರ್ಹ ಸಂಸ್ಥೆಗಳ ಪ್ರಮಾಣಿತ ಬೀಜಗಳನ್ನು ಬಿತ್ತನೆಗೆ ಬಳಸುವುದು ಉತ್ತಮ. ರೋಗ ಹಾಗೂ ಕೀಟ ನಿರೋಧಕ ಜಾತಿಗಳ ಬೀಜ ಬಿತ್ತನೆ ಮಾಡಬೇಕು. ಕಡಿಮೆ ರೋಗಬಾಧೆ ಮತ್ತು ಹೆಚ್ಚು ಉತ್ಪಾದನೆ ನೀಡುವ ಜಾತಿಗಳನ್ನು ಬೀಜಗಳನ್ನು ರೈತ ಸಮುದಾಯದವರು ಆಯ್ಕೆ ಮಾಡಬೇಕು.ಕಡಿಮೆ ಅವಧಿಯ/ ಹೆಚ್ಚು ಅವಧಿಯ ಜಾತಿ ಮಳೆ ಅವಧಿಯನ್ನು ಗಮನಿಸಿ ಬೆಳೆ ಅವಧಿ ಆಯ್ಕೆ ಮಾಡಬೇಕು. ಕಡಿಮೆ ಮಳೆ ಪ್ರದೇಶದಲ್ಲಿ ಕಡಿಮೆ ಅವಧಿಯ ಜಾತಿಗಳು ಉತ್ತಮ. ಬೀಜದ ಮೊಳಕೆ ಪ್ರಮಾಣ ಕನಿಷ್ಠ ಶೇ. 80ರಿಂದ 85 ಇರಬೇಕು. ಭತ್ತ, ಜೋಳ, ಮೆಕ್ಕೆಜೋಳ, ರಾಗಿ, ತೊಗರಿ, ಸೋಯಾಬಿನ್, ಹತ್ತಿ ಬೀಜ ಸಂಸ್ಕರಣೆವಾಗಿರಬೇಕು. ಬಿತ್ತನೆ ಮೊದಲು ಶಿಲೀಂಧ್ರನಾಶಕ ಅಥವಾ ಜೈವಿಕ ಸಂಸ್ಕರಣೆ ಮಾಡುವುದು ಉತ್ತಮ ಎಂದಿದ್ದಾರೆ.