ಹೊಳೆನರಸೀಪುರ: ತಾಲೂಕಿನ ಕಂದಾಯ ಇಲಾಖೆ ವತಿಯಿಂದ ಇ-ಪೌತಿ ಖಾತೆಯನ್ನು ಗ್ರಾಮೀಣ ಪ್ರದೇಶಗಳಲ್ಲಿ ನಿರಂತರವಾಗಿ ನಡೆಸಲು ನಿರ್ಧರಿಸಿ ಮನೆ ಮನೆಗೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪೌತಿ ಖಾತೆ ಮಾಡಿಸಲು ಮುಂದಾಗಲಿದ್ದಾರೆ ಎಂದು ತಹಸೀಲ್ದಾರ್ ವೈ.ಎಂ. ರೇಣುಕುಮಾರ್‌ ಮಾಹಿತಿ ನೀಡಿದರು.ಪಟ್ಟಣದ ತಾಲೂಕು ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿನ ರೈತರು ಮತ್ತು ಸಾರ್ವಜನಿಕರು ಪೌತಿ ಖಾತೆ ಮಾಡಿಸಿಲ್ಲದ ಕಾರಣ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ ಮತ್ತು ಕುಟುಂಬ ವರ್ಗದವರು ಬ್ಯಾಂಕುಗಳಲ್ಲಿ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ಬಹಳವಾಗಿ ಬಂದಿದೆ. ಆದಕಾರಣ ಕಂದಾಯ ಇಲಾಖೆ ರೈತರಿಗೆ ಸಮಸ್ಯೆ ಉಂಟು ಮಾಡುತ್ತಿರುವ ಪೌತಿ ಖಾತೆಯನ್ನು ಮನೆ ಮನೆಗೆ ತೆರಳಿ ಇ-ಪೌತಿ ಖಾತೆ ಮಾಡಿಸಲು ಮುಂದಾಗಿದೆ ಎಂದು ಮಾಹಿತಿ ನೀಡಿದರು.ತಾಲೂಕಿನಲ್ಲಿ ಕನಿಷ್ಟ ೨೩ ಸಾವಿರದಷ್ಟು ಪೌತಿ ಖಾತೆಗಳು ಸರಿಯಾಗಿಲ್ಲದ ಕಾರಣ ಎಲ್ಲಾ ಪೌತಿ ಖಾತೆಗಳನ್ನು ಸರಿಪಡಿಸಲು ಕಂದಾಯ ಇಲಾಖೆ ಮುಂದಾಗಿದೆ. ವಾರಸುದಾರರು ಇ-ಪೌತಿ ಖಾತೆಗೆ ಅರ್ಜಿ ಸಲ್ಲಿಸಲು ಕಂದಾಯ ಇಲಾಖೆ ದಾಖಲೆಗಳನ್ನು ಸಲ್ಲಿಸಲು ಮನವಿ ಮಾಡಿದ್ದು, ಅದರಂತೆ ವಾರಸುದಾರರು ಅರ್ಜಿಯನ್ನು ನಮೂನ ೧ರಲ್ಲಿ ನೀಡಬೇಕಿದೆ ಹಾಗೂ ಅರ್ಜಿ ಜತೆಯಲ್ಲಿ ಮರಣ ಪ್ರಮಾಣಪತ್ರ, ವಂಶವೃಕ್ಷ, ಚಾಲ್ತಿಯಲ್ಲಿರುವ ಆರ್‌ಟಿಸಿ ಮತ್ತು ಎಂಆರ್‌, ಎಲ್ಲಾ ಪೌತಿ ವಾರಸುದಾರರ ಆಧಾರ್ ಕಾರ್ಡ ಹಾಗೂ ಆಧಾರ್‌ ಕಾರ್ಡ್‌ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಮತ್ತು ಒಟಿಪಿಯನ್ನು ಕಡ್ಡಾಯವಾಗಿ ನೀಡಬೇಕೆಂದು ಮನವಿ ಮಾಡಿದರು. ಇ-ಪೌತಿ ಖಾತೆ ಆಂದೋಲನಕ್ಕೆ ಕಾಲ ನಿಗದಿ ಮಾಡಿಲ್ಲ. ಈ ಆಂಧೋಲನ ತಾಲೂಕಿನಲ್ಲಿ ಇರುವ ೨೩ ಸಾವಿರ ಪೌತಿಗಳು ಸರಿಪಡಿಸುವ ತನಕ ನಮ್ಮ ಸಿಬ್ಬಂದಿ ನಿರಂತರವಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.ಇ- ಪೌತಿಖಾತೆಯನ್ನು ಮಾಡುವ ಸಲುವಾಗಿ ನಿನ್ನೆ ತಾಲೂಕಿನ ನಗರನಹಳ್ಳಿ ಗ್ರಾಮದಲ್ಲಿ ತಾವು ನಮ್ಮ ಸಿಬ್ಬಂದಿಯೊಂದಿಗೆ ತೆರಳಿ ಗ್ರಾಮದ ಮುಖಂಡರು ಹಾಗೂ ಹಿರಿಯರನ್ನು ಖುದ್ದಾಗಿ ಭೇಟಿ ಮಾಡಿ ಇ ಪೌತಿ ಖಾತೆ ಮಾಡಲು ಸಹಕರಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.