ಸಾರಾಂಶ
ಬೆಂಗಳೂರು : ಏನು ಕೊಟ್ಟರೂ ಸಾಲುವುದಿಲ್ಲ ಎನ್ನುವ ಜನರ ಸಂಖ್ಯೆ ವರ್ತಮಾನದಲ್ಲಿ ಪ್ರಬಲವಾಗಿದೆ. ಆದರೆ, ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರು ಕೃಷಿ, ಪರಿಸರ, ಅರಣ್ಯ, ಸಾಹಿತ್ಯ ಪ್ರೇಮದೊಂದಿಗೆ ನಡೆಸಿದ ಸರಳ ಜೀವನ ಮಾದರಿಯಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಮೂನಿಸ್ವಾಮಿ ಆ್ಯಂಡ್ ಸನ್ಸ್, ಎಂ. ಚಂದ್ರಶೇಖರ ಪ್ರತಿಷ್ಠಾನ ಮತ್ತು ಪೂರ್ಣಚಂದ್ರ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ತೇಜಸ್ವಿ ಎಂಬ ವಿಸ್ಮಯ’ ಸಾಕ್ಷ್ಯಚಿತ್ರ ಸರಣಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಆಸೆ, ಸ್ವಾರ್ಥಕ್ಕೆ ಕೊನೆಯಿಲ್ಲ. ಮೇರು ಪ್ರತಿಭೆಯ, ವಿಶೇಷ ವ್ಯಕ್ತಿತ್ವವನ್ನು ಹೊಂದಿದವರು ಎಂದರೇ ಅದು ತೇಜಸ್ವಿಯವರು. ಅವರ ಸಂದೇಶ, ವಿಚಾರಗಳನ್ನು ಸಮಾಜಕ್ಕೆ ತಿಳಿಸಬೇಕು ಮತ್ತು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಹೊರ ತಂದಿರುವ ಸಾಕ್ಷ್ಯಚಿತ್ರ ಹೆಚ್ಚು ಜನರನ್ನು ತಲುಪಲಿ ಎಂದು ಹೇಳಿದರು.
ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ಕನ್ನಡ ಓದುಗರನ್ನು ಹೆಚ್ಚು ಸೃಷ್ಟಿಸಿದ್ದು ಎಂದರೆ ಅದು ಅನಕೃ ಮತ್ತು ತ್ರಿವೇಣಿಯವರು. ಅದಾದ ಬಳಿಕ ಪ್ರಜ್ಞಾವಂತ ಬರಹಗಾರ ಎಂದರೆ ಅದು ತೇಜಸ್ವಿಯವರು ಮತ್ತು ಕನ್ನಡ ಬದುಕು ಕಟ್ಟಿಕೊಟ್ಟ ಸಾಹಿತಿ ಎಂದರೆ ಅದು ಕುವೆಂಪು. ಇವರು ವೈಜ್ಞಾನಿಕ ದೃಷ್ಟಿಕೋನದಲ್ಲಿ ವಿಸ್ಮಯ ಜಗತ್ತನ್ನು ಬರೆದಿದ್ದಾರೆ. ಅದರ ಜೊತೆಗೆ ಸಮಾಜಕ್ಕೆ ಸೌಹಾರ್ದತೆಯ ವಾತಾವರಣವನ್ನು ಇವರ ಕೃತಿಗಳು ನೀಡುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ. ಬಿ.ಎನ್. ಶ್ರೀರಾಮ್, ಎಂ.ಚಂದ್ರಶೇಖರ್ ಪ್ರತಿಷ್ಠಾನದ ಸದಸ್ಯೆ ಸರೋಜ ಎಂ. ಚಂದ್ರಶೇಖರ್, ಕವಿ ಡಾ. ಕೆ.ಚಿದಾನಂದಗೌಡ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಹಾಗೂ ನಾಡೋಜ ಡಾ. ವೂಡೇ ಪಿ.ಕೃಷ್ಣ ಉಪಸ್ಥಿತರಿದ್ದರು.