ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಪೂರ್ಣ ಚಂದ್ರ ತೇಜಸ್ವಿ ಅವರ ಬಹುತೇಕ ಕಥೆಗಳಲ್ಲಿ ಮಲೆನಾಡಿನ ವರ್ಣನೆ ಕಟ್ಟಿಕೊಟ್ಟ ಅದ್ಬುತ ಬರಹಗಾರರಾಗಿದ್ದರು ಎಂದು ನಿವೃತ್ತ ಪ್ರಾಂಶುಪಾಲ, 10ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಬಿ.ಪಿ.ದಯಾನಂದ್ ತಿಳಿಸಿದರು.

ತಾಲೂಕಿನ ಸಹರಾ ಕನ್ವನ್ಸೆನ್ ಹಾಲ್‌ನಲ್ಲಿ ಭಾನುವಾರ ರಾತ್ರಿ ರೋಟರಿ ಕ್ಲಬ್ ನೇತೃತ್ವದಲ್ಲಿ ತಾಲೂಕು ಒಕ್ಕಲಿಗರ ಸಂಘ, ಜ್ವಾಲಾ ಮಾಲಿನಿ ಜೇಸಿ ಸಂಸ್ಥೆ, ಲಯನ್ಸ್ ಕ್ಲಬ್, ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್, ತಾಲೂಕು ಹಿರಿಯ ನಾಗರಿಕ ಸಮಿತಿ, ಮುತ್ತಿನಕೊಪ್ಪ ಜನ ಜಾಗೃತಿ ವೇದಿಕೆ, ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಸಹಯೋಗದಲ್ಲಿ ನಡೆದ ರಾಜೇಶ್ವರಿ ತೇಜಸ್ವಿ ಬರೆದ ‘ನನ್ನ ತೇಜಸ್ವಿ’ ಎಂಬ ಪುಸ್ತಕದ ರೂಪಾಂತರ ನಾಟಕ ಉದ್ಘಾಟಿಸಿ ಮಾತನಾಡಿದರು.

ಭಾರತ ದೇಶದ ಸಾಹಿತ್ಯ ಲೋಕದಲ್ಲಿ ತೇಜಸ್ವಿ 6ನೆಯವರಾಗಿ ನಿಲ್ಲುತ್ತಾರೆ. ತೇಜಸ್ವಿ ಅವರ ಲೇಖನ, ಕಥೆ, ಕಾದಂಬರಿಗಳನ್ನು ಓದುವಾಗ ನಾವೇ ಆ ಪಾತ್ರಗಳಲ್ಲಿ ಲೀನರಾಗುತ್ತೇವೆ. ಈ ನಾಟಕ 18 ಪ್ರಯೋಗ ಮುಗಿಸಿದ್ದು ಇದು 19ನೇ ಪ್ರಯೋಗವಾಗಿದೆ. ಮುಂದೆ 100ರ ಪ್ರಯೋಗ ಮುಗಿಸಲಿ ಎಂದು ಹಾರೈಸಿದರು.

ರೋಟರಿ ಕ್ಲಬ್ ಅಧ್ಯಕ್ಷ ಕಣಿವೆ ವಿನಯ್‌, ನಾಟಕದ ನಿರ್ದೇಶಕ ಬಿ.ಎಂ.ಗಿರಿರಾಜ್, ರೋಟರಿ ಕ್ಲಬ್ ಕಾರ್ಯದರ್ಶಿ ಕಟಗಳಲೆ ಲೋಕೇಶ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್.ಎಂ.ಸತೀಶ್, ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಜೆ.ಆಂಟೋನಿ,ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಆದರ್ಶ ಬಿ ಗೌಡ, ಸೀನಿಯರ್ ಛೇಂಬರ್ ಅಧ್ಯಕ್ಷ ಎಸ್.ಎಸ್.ಜಗದೀಶ್, ತಾಲೂಕು ಹಿರಿಯ ನಾಗರೀಕ ವೇದಿಕೆ ಅಧ್ಯಕ್ಷ ದಿನೇಶ್, ಮುತ್ತಿನಕೊಪ್ಪ ಜನ ಜಾಗ್ರತಿ ವೇದಿಕೆ ಅಧ್ಯಕ್ಷ ಮನೋಹರ್, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಭವ್ಯ ಸಂತೋಷ್ ಇದ್ದರು.


ಪ್ರೇಕ್ಷಕರ ಮನಗೆದ್ದ ‘ನನ್ನ ತೇಜಸ್ವಿ’ ಪ್ರಯೋಗ

‘ನನ್ನ ತೇಜಸ್ವಿ’ ಎಂಬ 1.30 ಗಂಟೆಯ ರಂಗ ಪ್ರಯೋಗ ಯಶಸ್ಸು ಕಂಡಿದ್ದು ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿತು. ಕಲಾ ಮಾದ್ಯಮದ ಮುಖ್ಯಸ್ಥ ಪರಮೇಶ್ವರ್ ತೇಜಸ್ವಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ತೇಜಸ್ವಿ ಪತ್ನಿ ರಾಜೇಶ್ವರಿ ಪಾತ್ರದಲ್ಲಿ ವಾಸಂತಿ, ಕಡಿದಾಳ್ ಶ್ಯಾಮಣ್ಣ ಪಾತ್ರದಲ್ಲಿ ರವಿಶಂಕರ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಬೆಳಕು ಕತ್ತಲಿನ ಆಟಕ್ಕೆ ಸಂಗೀತವು ಪೂರಕವಾಗಿತ್ತು. ತೇಜಸ್ವಿ-ರಾಜೇಶ್ವರಿ ಅವರ ಕಾಲೇಜಿನ ದಿನಗಳು, ಪ್ರೇಮ ಪ್ರಸಂಗಗಳು, ತೇಜಸ್ವಿ ಅವರ ನೇರ ಒರಟಾದ ಭಾಷೆ,ಅವರ ಬದುಕಿನ ಸಾಹಸ, ಸಾಹಿತ್ಯ ರಚನೆಗಳು, ಮೂಡಿಗೆರೆ ತೋಟದ ಕಥೆ, ಸಂತೆಯಲ್ಲಿ ತಮ್ಮ ಪತ್ನಿಯನ್ನು ಬಿಟ್ಟು ಬಂದ ಹಾಸ್ಯ ಪ್ರಸಂಗಗಳು ಪೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ಸು ಕಂಡಿತು. ನಾಟಕದ ನಿರ್ದೇಶಕ ಬಿ.ಎಂ.ಗಿರಿರಾಜ್ ಕಲಾತ್ಮಕ ನಾಟಕವನ್ನು ಅಚ್ಚುಕಟ್ಟಾಗಿ ಪ್ರೇಕ್ಷಕರಿಗೆ ಕಟ್ಟಿಕಟ್ಟಿದ್ದಾರೆ.