ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಪೂರ್ಣಚಂದ್ರ ತೇಜಸ್ವಿ ಅವರು ಯಾವುದೇ ಒಂದು ವಿಷಯಕ್ಕೆ ಸೀಮಿತವಾಗಿರದೆ ಸಹಜವಾಗಿ ಬದುಕು ಸಾಗಿಸಿದವರು ಎಂದು ಕಣಿವೆಯ ಸಾಹಿತಿ ಭಾರದ್ವಾಜ ಕೆ. ಆನಂದತೀರ್ಥ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ಕುಶಾಲನಗರ ಸಮೀಪದ ಕೂಡ್ಲೂರು ಗ್ರಾಮದ ಟಿ ಆರ್ ಶರವಣಕುಮಾರ್ ಅವರ ನಿವಾಸದಲ್ಲಿ ಕುಶಾಲನಗರದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ಏರ್ಪಡಿಸಿದ್ದ ಪೂರ್ಣಚಂದ್ರ ತೇಜಸ್ವಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ನಿಷ್ಟುರವಾದಿಯಾಗಿದ್ದ ಸಾಹಿತಿ ತೇಜಸ್ವಿ ಅವರಲ್ಲಿ ಯಾವುದೇ ನಾಟಕೀಯತೆ ಇರಲಿಲ್ಲ ಎಂದು ಅವರು ಹೇಳಿದರು. ಸರಳ ಬೆಳವಣಿಗೆ, ವ್ಯಂಗ್ಯ, ತಮಾಷೆ ಗುಣ ತೇಜಸ್ವಿ ಅವರದಾಗಿತ್ತು ಎಂದು ನೆನಪಿಸಿದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ವಿ.ಪಿ.ಶಶಿಧರ್ ಈ ಸಂದರ್ಭ ಮಾತನಾಡಿ, ಕುವೆಂಪು ಕಾಲಘಟ್ಟದಲ್ಲಿ ಕನ್ನಡ ನಾಡು ಸಾಹಿತ್ಯಿಕವಾಗಿ ಹಾಗೂ ಸಾಂಸ್ಕ್ರತಿಕವಾಗಿ ಶ್ರೀಮಂತಗೊಳ್ಳುವಂತಾಗಿತ್ತು. ಅವರ ಪುತ್ರ ಪೂರ್ಣಚಂದ್ರ ತೇಜಸ್ವಿ ತಂದೆಯ ನೆರಳಿನಿಂದ ಹೊರಬಂದು ಸ್ವತಃ ತಾವೇ ಸಾಹಿತ್ಯ ರಚನೆಗಳಲ್ಲಿ ತೊಡಗಿಸಿಕೊಂಡು ಹೆಸರು ಗಳಿಸಿಕೊಂಡವರು ಎಂದರು.
ಸಾಹಿತ್ಯದಷ್ಟೇ ಪರಿಸರದ ಬಗ್ಗೆಯೂ ತೇಜಸ್ವಿ ಹೆಚ್ಚಿನ ಒಲವು ಹೊಂದಿದ್ದರು. ತೇಜಸ್ವಿ ಒಡನಾಡಿಗಳು ಹಳ್ಳಿಗಳನ್ನು ತೊರೆದು ನಗರಗಳಿಗೆ ಆಕರ್ಷಿತರಾದರೆ, ತೇಜಸ್ವಿ ನಗರ ತೊರೆದು ಹಳ್ಳಿಯ ಸುಂದರ ಪರಿಸರದತ್ತ ಒಲವು ಹೊಂದಿದ್ದರು ಎಂದರು.ಹೆಬ್ಬಾಲೆ ಪ್ರೌಢಶಾಲೆಯ ಕನ್ನಡ ಶಿಕ್ಷಕ ಮೆ.ನಾ.ವೆಂಕಟನಾಯಕ್ ಮಾತನಾಡಿ ಕುವೆಂಪು ಕಾಲಘಟ್ಟದ ಅವರ ಸಾಹಿತ್ಯ ಆಳುವ ಸರ್ಕಾರಗಳನ್ನು ನಡುಗಿಸುವಂತಿತ್ತು.
ಅಂತಹ ಸಾಹಿತಿಯ ಮಗನಾಗಿದ್ದ ತೇಜಸ್ವಿ ಯಾವತ್ತೂ ತಮ್ಮ ತಂದೆಯನ್ನು ಅನುಸರಿಸಲೂ ಇಲ್ಲ. ಅನುಕರಿಸಲೂ ಇಲ್ಲ.ತಂದೆಯ ನೆರಳಿನಿಂದ ಹೊರ ಬಂದು ತಮ್ಮ ಸ್ವಯಂ ಸಾಹಿತ್ಯಿಕ ಶಕ್ತಿಯನ್ನು ಸಾಹಿತ್ಯ ಕ್ಷೇತ್ರದಲ್ಲಿ ದಾಖಲಿಸಿದವರು ಎಂದರು.
ಪೂರ್ಣ ಚಂದ್ರ ಕುಟೀರದ ಮಾಲೀಕ ಟಿ.ಆರ್.ಶರವಣಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಇತ್ತೀಚಿನ ದಶಕಗಳಲ್ಲಿ ಯುವ ಜನಾಂಗ ಸಾಹಿತ್ಯವನ್ನು ಓದುವುದೇ ಮರೆಯಾಗಿದೆ.ಕುವೆಂಪು ಗಿಂತ ಅವರ ಪುತ್ರ ತೇಜಸ್ವಿಯವರ ಸಾಹಿತ್ಯ ಜನಸಾಮಾನ್ಯರಿಗೆ ಅರ್ಥವಾಗುವ ಸರಳ ಹಾಗೂ ಆಡು ಭಾಷೆಯಲ್ಲಿದೆ. ತೇಜಸ್ವಿ ಅವರ ಸಾಹಿತ್ಯ ನನ್ನಲ್ಲಿ ಬಹಳಷ್ಟು ಪ್ರಭಾವಿ ಬೀರಿದ್ದರಿಂದಲೇ ತನ್ನ ಮನೆಗೆ ಪೂರ್ಣ ಚಂದ್ರ ಎಂದು ಹೆಸರು ಇಟ್ಟಿದ್ದಾಗಿ ಶರವಣಕುಮಾರ್ ಹೇಳಿದರು.
ಕುಶಾಲನಗರದ ಸರ್ಕಾರಿ ಪಿಯು ಕಾಲೇಜಿನ ಇತಿಹಾಸ ಉಪನ್ಯಾಸಕಿ ಶಾಂತಿ, ಅಥ್ಲೆಟಿಕ್ ತರಬೇತುದಾರ ವಸಂತಕುಮಾರ್ ಮಾತನಾಡಿದರು.ಕುಶಾಲನಗರ ಗಣಪತಿ ದೇವಾಲಯ ಅಭಿವೃದ್ದಿ ಸಮಿತಿ ಅಧ್ಯಕ್ಷ ಎಂ.ಕೆ.ದಿನೇಶ್, ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್.ನಾಗೇಶ್, ಹಿತರಕ್ಷಣಾ ವೇದಿಕೆಯ ಸಂಚಾಲಕ ಕೆ.ಜಿ.ಮನು, ಪುರಸಭೆ ಸದಸ್ಯೆ ಜಯಲಕ್ಷ್ಮಿ ಮತ್ತಿತರರು ಇದ್ದರು.
ಕಾರ್ಯಕ್ರಮ ಆಯೋಜಕರಾದ ವೇದಿಕೆಯ ಪ್ರಮುಖರಾದ ಪತ್ರಕರ್ತ ಕೆಎಸ್ ಮೂರ್ತಿ ಸ್ವಾಗತಿಸಿ, ಉಪನ್ಯಾಸಕ ನಂಜುಂಡಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.