ಕನ್ನಡಪ್ರಭ ವಾರ್ತೆ ಹೊನ್ನಾವರ
ಸದ್ಯದಲ್ಲೇ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯುವ ಸಂಭವವಿದ್ದು, ಕಾಂಗ್ರೆಸ್ ಕಾರ್ಯಕರ್ತರು ಒಮ್ಮನಸ್ಸಿನಿಂದ ಹೋರಾಡಿ ಪಕ್ಷವನ್ನು ಗೆಲುವಿನತ್ತ ಕೊಂಡೊಯ್ಯುವಂತೆ ಪಕ್ಷದ ಹಿರಿಯ ನಾಯಕ, ಮಾಜಿ ಸಚಿವ ಆರ್.ವಿ. ದೇಶಪಾಂಡೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.ಶಿರಾಲಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮವನ್ನು ಮುಗಿಸಿ, ಸ್ವಕ್ಷೇತ್ರ ಹಳಿಯಾಳಕ್ಕೆ ತೆರಳುವ ಮಾರ್ಗದ ಮಧ್ಯದಲ್ಲಿ ಪಟ್ಟಣದ ಲೋಕೋಪಯೋಗಿ ಇಲಾಖೆಯ ಪರಿವೀಕ್ಷಣಾ ಮಂದಿರದಲ್ಲಿ ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರ ಅಹವಾಲು ಸ್ವೀಕರಿಸಿದ ನಂತರ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಕೇವಲ ದೇಶಪಾಂಡೆ ಅಥವಾ ಪಕ್ಷದ ಪ್ರಮುಖ ನಾಯಕರು ಬಂದಾಗ ಮಾತ್ರ ಪಕ್ಷದ ನೂರಾರು ಕಾರ್ಯಕರ್ತರು ಸೇರುವುದರಿಂದ ಪಕ್ಷ ಸಂಘಟನೆ ಅಸಾಧ್ಯ. ಇಂದು ಪಕ್ಷವನ್ನು ತೀರಾ ಕೆಳಹಂತದಿಂದ ಸುಭದ್ರಗೊಳಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಮರೆತು ಪಕ್ಷಕ್ಕಾಗಿ ಹೋರಾಡಬೇಕಾಗಿದೆ ಎಂದರು.ಸಿದ್ದರಾಮಯ್ಯ ಸರಕಾರ ಜಾರಿಗೆ ತಂದ ಜನಪ್ರಿಯ ಪಂಚ ಗ್ಯಾರಂಟಿ ಯೋಜನೆಗಳನ್ನು ಪ್ರತಿ ಬೂತ್ ಮಟ್ಟದಲ್ಲಿ ಪ್ರಚಾರ ಮಾಡಿ, ಪಂಚ ಗ್ಯಾರಂಟಿ ಯೋಜನೆಗಳ ಉಪಯೋಗಗಳನ್ನು ಮನೆಮನೆಗೆ ತಿಳಿಸಿ ಹೇಳುವುದರಿಂದ ಮಾತ್ರ ಪಕ್ಷವನ್ನು ತಳಹಂತದಲ್ಲಿ ಬಲಪಡಿಸಲು ಸಾಧ್ಯ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿನಾಥ ಗಾಂವಕರ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಗದೀಪ ಎನ್. ತೆಂಗೇರಿ, ಕೆಪಿಸಿಸಿ ಸದಸ್ಯ ಎಂ.ಎನ್. ಸುಬ್ರಮಣ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ ನಾಯ್ಕ, ಉಪಾಧ್ಯಕ್ಷ ಕೇಶವ ಮೇಸ್ತ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಮೇಸ್ತ, ಯುವ ನ್ಯಾಯವಾದಿ ವಿಕ್ರಂ ನಾಯ್ಕ, ವನಿತಾ ನಾಯ್ಕ, ಆರ್.ಜಿ.ಪಿ.ಆರ್.ಎಸ್. ಜಿಲ್ಲಾ ಅಧ್ಯಕ್ಷ ವಿನೋದ ನಾಯ್ಕ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ರವೀಂದ್ರ ನಾಯ್ಕ, ಕೆ.ಡಿ.ಪಿ. ಸದಸ್ಯರಾದ ಸುರೇಶ ಮೇಸ್ತ, ಜ್ಯೋತಿ ಮಹಾಲೆ, ಪಪಂ ಮಾಜಿ ಸದಸ್ಯ ಸುರೇಶ ಮೇಸ್ತ, ಗ್ಯಾರಂಟಿ ಸದಸ್ಯರಾದ ಅಭಿಷೇಕ ತಾಂಡೆಲ್, ಕೃಷ್ಣ ಮಾರಿಮನೆ, ಪಕ್ಷದ ಮುಖಂಡರಾದ ಮೋಹನ ಮೇಸ್ತ, ಮಾದೇವ ನಾಯ್ಕ, ವಾಸುದೇವ ಪುಲ್ಕರ, ಜಕ್ರಿಯ್ಯಾ ಶೇಖ್, ಹನೀಫ ಶೇಖ್, ಆಗ್ನೇಲ್ ಡಯಾಸ್, ನೆಲ್ಸನ್ ರೊಡ್ರಗಿಸ್, ಶೇಖರ ಚಾರೋಡಿ, ಹಸನ್ ಅಣ್ಣಿಗೇರಿ, ಲಂಭೋಧರ ನಾಯ್ಕ,ಲಕ್ಷ್ಮೀ ಗೊಂಡಾ, ಮಂಜುಳಾ ನಾಯ್ಕ, ಕಲ್ಪನಾ ಪ್ಲೋರಾ, ಮಂಜು ಮುಕ್ರಿ, ಗೊಯ್ದು ಮುಕ್ರಿ, ನಾಗೇಶ ನಾಯ್ಕ, ಜೋಸಿಪ್ ಡಿಸೋಜಾ, ಪಾತ್ರೊನ್ ಫರ್ನಸ್ಡಿಸ್ ಇನ್ನೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.