ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ಸಮಾಜಕ್ಕೆ ಮಾದರಿ

| Published : Nov 08 2025, 03:00 AM IST

ಸಾರಾಂಶ

ಬ.ಬಾಗೇವಾಡಿಯ ಕೊಟ್ರಶೆಟ್ಟಿ ಬಾಂಧವರು ಬುತ್ತಿ ಬಸವೇಶ್ವರ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಸಮಾಜದಲ್ಲಿ ಸಂಪತ್ತು ಉಳ್ಳವರು ಸಾಕಷ್ಟು ಜನರಿದ್ದಾರೆ. ಆದರೆ ಸೇವಾ ಮನೋಭಾವನೆ ಎಲ್ಲರಲ್ಲೂ ಇರುವುದಿಲ್ಲ. ಬ.ಬಾಗೇವಾಡಿಯ ಕೊಟ್ರಶೆಟ್ಟಿ ಬಾಂಧವರು ಬುತ್ತಿ ಬಸವೇಶ್ವರ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಪಟ್ಟಣ ಸಮೀಪದ ಬಸವನಹಟ್ಟಿ ಕ್ರಾಸ್ ಹತ್ತಿರವಿರುವ ಬುತ್ತಿ ಬಸವೇಶ್ವರ ದೇವಸ್ಥಾನದ ನೂತನ ಕಟ್ಟಡ ಲೋಕಾರ್ಪಣೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾನೊಬ್ಬ ದಲಿತ ವರ್ಗದಿಂದ ಬಂದಿದ್ದರೂ ಇಂತಹ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ಸ್ಥಾನವನ್ನು ಕೊಟ್ರಶೆಟ್ಟಿ ಬಾಂಧವರು ನೀಡಿದ್ದು ಸಂತಸ ತಂದಿದೆ. ಇಂತಹ ಧಾರ್ಮಿಕ ಕಾರ್ಯಕ್ರಮ ಆಯೋಜನೆ ಮಾಡಿರುವುದು ನಿಜವಾಗಲೂ ಅರ್ಥಗರ್ಭಿತ. ಮುಂಬರುವ ದಿನಗಳಲ್ಲಿ ಬುತ್ತಿ ಬಸವೇಶ್ವರ ದೇವಸ್ಥಾನದ ಅಭಿವೃದ್ಧಿಗಾಗಿ ಸಂಸದರ ಅನುದಾನದಲ್ಲಿ ₹10 ಲಕ್ಷ ನೀಡುವುದಾಗಿ ಭರವಸೆ ನೀಡಿದರು.

ನಂದಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಸತ್ಯಜೀತ ಪಾಟೀಲ ಮಾತನಾಡಿ, ಬಸವ ತತ್ವವನ್ನು ಎತ್ತಿ ಹಿಡಿದು ನಮ್ಮ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಮಾಡಿರುವ ಕೊಟ್ರಶೆಟ್ಟಿ ಬಾಂಧವರ ಕಾರ್ಯ ಶ್ಲಾಘನೀಯವಾಗಿದೆ. ಒಳ್ಳೆಯ ನೀತಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಸವಾದಿ ಶರಣರ ಆಚಾರ ವಿಚಾರಗಳನ್ನು ಅರಿತು ನಡೆದರೆ ಜೀವನ ಸುಂದರವಾಗುತ್ತದೆ ಎಂದರು.

ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಸಾಹಿತಿ ಲ.ರು.ಗೊಳಸಂಗಿ, ಮುಖಂಡ ಅಪ್ಪುಗೌಡ ಪಾಟೀಲ,ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ ಮಾತನಾಡಿದರು. ವೇದಿಕೆಯಲ್ಲಿ ಶಿವಾನಂದ ಈರಕಾರ ಮುತ್ಯಾ, ಪಂಚಾಕ್ಷರಿ ಕಾಳಹಸ್ತೇಶ್ವರಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಪುರಸಭೆ ಮಾಜಿ ಅಧ್ಯಕ್ಷ ಬಸಣ್ಣ ದೇಸಾಯಿ, ಬಸವೇಶ್ವರ ಸೇವಾ ಸಮಿತಿಯ ಉಪಾಧ್ಯಕ್ಷ ಬಸವರಾಜ ಹಾರಿವಾಳ, ಬಸವೇಶ್ವರ ಕೋ-ಆಪ್ ಬ್ಯಾಂಕಿನ ಅಧ್ಯಕ್ಷ ಲೋಕನಾಥ ಅಗರವಾಲ, ಹಿರಿಯ ನ್ಯಾಯವಾದಿ ಬಿ.ಕೆ.ಕಲ್ಲೂರ, ಸಮಾಜ ಸೇವಕ ಗಂಗಾಧರ ಕುಂಟೋಜಿ, ಭೂದಾನಿ ಸಿದ್ದಪ್ಪ ಹಿರೇಕುರಬರ, ಸಂಗಣ್ಣ ಕೊಟ್ರಶೆಟ್ಟಿ ಇತರರು ಇದ್ದರು.ಬುತ್ತಿ ಬಸವೇಶ್ವರ ಸೇವಾ ಸಮಿತಿಯ ಜಗದೀಶ ಕೊಟ್ರಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಕೊಟ್ರೇಶ ಹೆಗ್ಡಾಳ ನಿರೂಪಿಸಿದರು. ಸಂಗಯ್ಯ ಕಾಳಹಸ್ತೇಶ್ವರಮಠ ವಂದಿಸಿದರು.