ಸಾರಾಂಶ
ದೇವರ ಉತ್ಸವಗಳು ಮತ್ತು ಹಬ್ಬ ಹರಿದಿನಗಳು ಯುವ ಸಮುದಾಯದಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುತ್ತವೆ. ಧಾರ್ಮಿಕ ಉತ್ಸವಗಳ ಮೂಲಕ ಗ್ರಾಮೀಣ ಯುವಕರು ಸಂಘಟಿತರಾಗಿ ಗ್ರಾಮಭಿವೃದ್ಧಿ ಬಗ್ಗೆ ಚಿಂತಿಸಬೇಕು. ಯುವ ಸಮುದಾಯ ಧರ್ಮಮಾರ್ಗದಲ್ಲಿ ಸಾಗಬೇಕಾದರೆ ಅವರಲ್ಲಿ ದೈವ ಭಕ್ತಿ ಜೊತೆಗೆ ಸದಾ ಜಾಗೃತವಾಗಿರಬೇಕು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಶ್ರದ್ಧಾ ಭಕ್ತಿ ಕೇಂದ್ರಗಳಾಗಿರುವ ದೇಗುಲಗಳು ನಮ್ಮ ಸಂಸ್ಕೃತಿ ಪ್ರತಿಬಿಂಬಗಳಾಗಿವೆ. ಇವುಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದು ಕಾಂಗ್ರೆಸ್ ಮುಖಂಡ ವಿಜಯ್ ರಾಮೇಗೌಡ ಹೇಳಿದರು.ತಾಲೂಕಿನ ಬೂಕನಕೆರೆ ಗ್ರಾಮದ ಆಂಜನೇಯ ಸ್ವಾಮಿ ಜಯಂತ್ಯೋತ್ಸವದಲ್ಲಿ ಮಾತನಾಡಿ, ಯುವ ಸಮುದಾಯ ಧರ್ಮಮಾರ್ಗದಲ್ಲಿ ಸಾಗಬೇಕಾದರೆ ಅವರಲ್ಲಿ ದೈವ ಭಕ್ತಿ ಜೊತೆಗೆ ಸದಾ ಜಾಗೃತವಾಗಿರಬೇಕು ಎಂದರು.
ದೇವರ ಉತ್ಸವಗಳು ಮತ್ತು ಹಬ್ಬ ಹರಿದಿನಗಳು ಯುವ ಸಮುದಾಯದಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುತ್ತವೆ. ಧಾರ್ಮಿಕ ಉತ್ಸವಗಳ ಮೂಲಕ ಗ್ರಾಮೀಣ ಯುವಕರು ಸಂಘಟಿತರಾಗಿ ಗ್ರಾಮಭಿವೃದ್ಧಿ ಬಗ್ಗೆ ಚಿಂತಿಸಬೇಕು. ನೂರಾರು ವರ್ಷಗಳ ಇತಿಹಾಸ ಪ್ರಸಿದ್ಧ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಜಯಂತ್ಯೋತ್ಸವವನ್ನು ಗ್ರಾಮದ ಯಜಮಾನರು, ಆಂಜನೇಯ ಯುವಕರ ಬಳಗದವರು ಮತ್ತು ಅಕ್ಕಪಕ್ಕದ ಗ್ರಾಮಸ್ಥರು ಸೇರಿ ಉತ್ಸವವನ್ನು ಆಯೋಜಿಸಲಾಗುತ್ತಿದೆ ಎಂದರು.ಆಂಜನೇಯ ಸ್ವಾಮಿ ದರ್ಶನ ಪಡೆದಿದ್ದೇನೆ. ಗ್ರಾಮದೇವತೆ ಗೋಗಾಲಮ್ಮನ ಆಶೀರ್ವಾದ ತಾಲೂಕಿನ ಜನತೆ ಹಾಗೂ ವಿಶೇಷವಾಗಿ ನಮ್ಮ ಗ್ರಾಮ ಬೂಕನಕೆರೆ ಹಾಗೂ ಅಕ್ಕಪಕ್ಕದ ಜನರು ರೈತರಿಗೆ ಸಮೃದ್ಧಿ ಜೀವನ ನಡೆಸಲು ಭಗವಂತನ ಅನುಗ್ರಹ ಸಿಗಲಿ. ಕಾಲಕಾಲಕ್ಕೆ ಮಳೆ ಬೆಳೆ ಆಗಿ ಆರೋಗ್ಯ ಭಾಗ್ಯ ಕರುಣಿಸಲಿ ಎಂದು ಪ್ರಾರ್ಥಿಸಿದರು.
ಆಂಜನೇಯ ಸ್ವಾಮಿ ಜಯಂತ್ಯೋತ್ಸವದ ಅಂಗವಾಗಿ ಸ್ವಾಮಿಗೆ ಬಗೆಬಗೆಯ ಬಣ್ಣದ ಹೂವು ಹಾರಗಳಿಂದ ವಿಶೇಷ ಅಲಂಕಾರ ಮಾಡಿ, ಪೂಜೆ, ಪುರಸ್ಕಾರದ ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಈ ವೇಳೆ ಗ್ರಾಮದ ಹಿರಿಯ ಯಜಮಾನರು, ಯುವಕರು, ಅಕ್ಕಪಕ್ಕದ ಗ್ರಾಮಗಳ ಭಕ್ತಾದಿಗಳು ಭಾಗವಹಿಸಿದ್ದರು.