ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ದೇವರು ಕೇವಲ ದೇವಾಲಯ ಅಥವಾ ವಿಗ್ರಹದಲ್ಲಿ ಮಾತ್ರ ಸೀಮಿತನಾಗಿಲ್ಲ. ಭೂಮಿ, ನೀರು, ಗಾಳಿ, ಅಗ್ನಿ ಸೇರಿದಂತೆ ಸಕಲ ಚರಾಚರಗಳಲ್ಲೂ ಭಗವಂತನನ್ನು ಕಾಣುವ ದೃಷ್ಟಿಯನ್ನು ಭಾರತೀಯ ಸಂಸ್ಕೃತಿ ಬೆಳೆಸಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ.ರವಿ ಹೇಳಿದರು.ಚಿಕ್ಕಮಗಳೂರು ತಾಲೂಕಿನ ತಡಬೇನಹಳ್ಳಿಯಲ್ಲಿ ಶ್ರೀ ಶಕುನ ರಂಗನಾಥ ಸ್ವಾಮಿ ಹಾಗೂ ಶ್ರೀ ಕೆಂಚರಾಯಸ್ವಾಮಿಯ ವಿಗ್ರಹ ಮತ್ತು ದೇವಾಲಯದ ವಿಮಾನ ಗೋಪುರ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಮಾತನಾಡಿ ದೇವರು ಎಲ್ಲೆಡೆ ಇದ್ದಾನೆಂದು ನಂಬುತ್ತೇವೆ. ಹಾಗಿದ್ದರೂ ದೇವಾಲಯ ನಿರ್ಮಿಸುವುದು ಯಾಕೆ ಎಂದರೆ, ಮನುಷ್ಯ ತನ್ನನ್ನು ತಾನು ನೋಡಿ ಕೊಳ್ಳಲು ಕನ್ನಡಿ ಮುಂದೆ ನಿಲ್ಲುವಂತೆ, ದೇವಾಲಯಗಳು ನಮ್ಮ ಅಂತರಂಗ ನೋಡಿಕೊಳ್ಳಲು ನೆರವಾಗುವ ಆಧ್ಯಾತ್ಮಿಕ ಕನ್ನಡಿಗಳಾಗಿವೆ ಎಂದು ಪ್ರತಿಪಾಧಿಸಿದರು.ದೇವರ ದರ್ಶನಕ್ಕೆ ಹೋದಾಗ ಕೈ ಮುಗಿದು ಕಣ್ಣು ಮುಚ್ಚಿಕೊಳ್ಳುತ್ತೇವೆ. ದೇವರನ್ನು ನೋಡಲು ಹೋದ ನಾವು ಕಣ್ಣು ಮುಚ್ಚಿ ಕೊಳ್ಳುವುದೇ ನಮ್ಮ ಅಂತರಂಗದ ಜೊತೆ ಸಂವಾದ ನಡೆಸಿ, ನಮ್ಮ ಮನಸ್ಸಿನ ಮಾತುಗಳನ್ನು ಭಗವಂತನ ಮುಂದೆ ಒಪ್ಪಿಸಿ ಕೊಳ್ಳಲು ದೇವಾಲಯ ಕೇಂದ್ರಬಿಂದುವಾಗಿವೆ ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಆಮ್ಲಜನಕದ ಮಹತ್ವ ಜಗತ್ತಿಗೆ ತಿಳಿಯಿತು. ಆದರೆ ಪ್ರಕೃತಿ ಈ ಅಮೂಲ್ಯ ಸಂಪತ್ತನ್ನು ಭಗವಂತ ಯಾವುದೇ ಭೇದಭಾವವಿಲ್ಲದೆ ಎಲ್ಲರಿಗೂ ನೀಡಿದ್ದಾನೆ. ಭಗವಂತ ಯಾರಿಗೂ ಜಾತಿ, ವರ್ಗ ಅಥವಾ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಭೇದ ಮಾಡಿಲ್ಲ. ಆದ್ದರಿಂದ ದೇವಾಲಯಗಳಲ್ಲಿಯೂ ಭೇದಭಾವಕ್ಕೆ ಅವಕಾಶ ಇರಬಾರದು. ಶಕುನ ರಂಗನಾಥಸ್ವಾಮಿ ದೇವಾಲಯ ತಡಬೇನಹಳ್ಳಿ ಗ್ರಾಮಸ್ಥರಿಗೆ ಮಾತ್ರವಲ್ಲ, ಭಕ್ತಿಯಿಂದ ಬರುವ ಎಲ್ಲರಿಗೂ ಮುಕ್ತ ವಾಗಿರಬೇಕು ಎಂದು ಹೇಳಿದರು.ತಡಬೇನಹಳ್ಳಿ ದೇವಾಲಯದ ಅಭಿವೃದ್ಧಿಗೆ ವಿವಿಧ ಯೋಜನೆಗಳಡಿ ಸುಮಾರು ₹ 52ಲಕ್ಷ ಅನುದಾನ ನೀಡಲಾಗಿದೆ. ಇದೇ ವೇಳೆ 2018 ರಿಂದ 2023ರ ಅವಧಿಯಲ್ಲಿ ಈ ಗ್ರಾಪಂ ವ್ಯಾಪ್ತಿಯಲ್ಲಿ ಜಲಜೀವನ ಮಿಷನ್, ರಸ್ತೆ, ಚೆಕ್ಡ್ಯಾಂ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸುಮಾರು ₹18 ಕೋಟಿ ಅನುದಾನ ಒದಗಿಸಲಾಗಿದೆ. ಗ್ರಾಮದ ಕುಡಿಯುವ ನೀರಿನ ಸಮಸ್ಯೆಪರಿಹಾರಕ್ಕಾಗಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮತ್ತು ಇತರೆ ನೀರಾವರಿ ಯೋಜನೆ ಗಳನ್ನು ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಶ್ರೀ ಕಾಗಿನೆಲೆ ಕನಕ ಗುರು ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಶೃಂಗೇರಿ ಶ್ರೀ ಆದಿ ಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ಹೊಸದುರ್ಗ ಕನಕ ಗುರು ಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಸೋನಲ್ ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕುರುವಂಗಿ ವೆಂಕಟೇಶ್, ಪಿಸಿಎಲ್ಡಿ ಬ್ಯಾಂಕಿನ ನಿರ್ದೇಶಕ ಆನಂದ್ ನಾಯಕ್, ಗ್ರಾಮದ ಮುಖಂಡರಾದ ಸಿದ್ದೇಗೌಡರು, ತಡಬೇನಹಳ್ಳಿ ಮಂಜುನಾಥ್ ಉಪಸ್ಥಿತರಿದ್ದರು.