ಹೊಸಪೇಟೆ: ಮಹಾ ಶಿವರಾತ್ರಿ ಅಂಗವಾಗಿ ಜಿಲ್ಲೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಭಾನುವಾರ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಸಾವಿರಾರು ಭಕ್ತರು ಶಿವನ ದರ್ಶನ ಪಡೆದುಕೊಂಡು ಶಿವರಾತ್ರಿ ಹಬ್ಬವನ್ನು ಆಚರಿಸಿದರು.ಹೊಸಪೇಟೆ ನಗರದ ನೀಲಕಂಠೇಶ್ವರ ದೇವಸ್ಥಾನ, ಈಶ್ವರ ದೇವಸ್ಥಾನ, ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನ, ಓಂಕಾರೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.

ಭಾನುವಾರ ಬೆಳಿಗ್ಗೆಯಿಂದ ರಾತ್ರಿಯವರೆಗೂ ತಮ್ಮ ಕುಟುಂಬದ ಸದಸ್ಯರೊಂದಿಗೆ ದೇವಸ್ಥಾನಕ್ಕೆ ತೆರಳಿ ಶಿವನ ದರ್ಶನ ಪಡೆದುಕೊಂಡು ಶಿವರಾತ್ರಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ತಾಲೂಕಿನ ಬಹುತೇಕ ದೇವಸ್ಥಾನಗಳಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಭಕ್ತರು ಸಹ ಬೆಳಿಗ್ಗೆಯಿಂದ ರಾತ್ರಿಯವರೆಗೂ ದೇವಸ್ಥಾನಗಳಿಗೆ ತೆರಳಿಗೆ ಶಿವನ ದರ್ಶನ ಪಡೆದುಕೊಂಡರು. ಶಿವರಾತ್ರಿ ಅಂಗವಾಗಿ ಬಹುತೇಕ ಭಕ್ತರು ಒಪ್ಪತ್ತು ಉಪವಾಸ ವಿದ್ದು, ದೇವರ ಧ್ಯಾನದಲ್ಲಿ ತೊಡಗಿಕೊಂಡಿದ್ದರು. ಇಡೀ ರಾತ್ರಿ ಜಾಗರಣೆ ಮಾಡಲು ಅನೇಕ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು. ಭಕ್ತಿ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಕೆಲ ಸಂಘ-ಸಂಸ್ಥೆಗಳ ಪದಾ​ಧಿಕಾರಿಗಳು ನಾಟಕ, ನೃತ್ಯ, ಸಂಗೀತದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಕ್ತರಿಗೆ ಜಾಗರಣೆ ಮಾಡಲು ವ್ಯವಸ್ಥೆ ಕಲ್ಪಿಸಿದ್ದರು.

ಶಿವರಾತ್ರಿ ಅಂಗವಾಗಿ ತಾಲೂಕಿನ ಎಲ್ಲ ದೇವಸ್ಥಾನದಲ್ಲಿರುವ ದೇವರಿಗೆ ವಿಶೇಷ ಆಲಂಕಾರ ಮಾಡಲಾಗಿತ್ತು. ದೇವಸ್ಥಾನಗಳಿಗೆ ಬಣ್ಣ ಬಣ್ಣದ ವಿದ್ಯುತ್‌ ದೀಪ ಅಲಂಕಾರ ಹಾಕಿ, ತೆಂಗಿನ ಗೆರಿಗಳನ್ನು ಹಾಗೂ ಬಾಳೆ ಕಂಬಗಳನ್ನು ಕಟ್ಟಿಮತ್ತು ವಿವಿಧ ಹೂವುಗಳಿಂದ ಸಿಂಗರಿಸಲಾಗಿತ್ತು.

ನಗರದ ನೀಲಕಂಠೇಶ್ವರ ದೇವಸ್ಥಾನದಲ್ಲಿ ಭಕ್ತರ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಬ್ಯಾರಿಕೇಡ್‌ ನಿರ್ಮಿಸುವ ಮೂಲಕ ಭಕ್ತರು ಸಾಲಾಗಿ ನಿಂತು ಶಿವನ ದರ್ಶನ ಪಡೆದುಕೊಂಡರು. ಕೆಲ ಭಕ್ತರು ಪ್ರಸಾದದ ವ್ಯವಸ್ಥೆ ನಡೆಸಿದರು.


ಇದೇ ರೀತಿಯಲ್ಲಿ ಮರಿಯಮ್ಮನಹಳ್ಳಿಯಲ್ಲಿಯೂ ಶಿವರಾತ್ರಿ ಆಚರಣೆಯ ಅಂಗವಾಗಿ ಸಾವಿರಾರು ಭಕ್ತರು ನೀಲಕಂಠೇಶ್ವರ ದೇವಸ್ಥಾನಕ್ಕೆ, ಈಶ್ವರ ದೇವಸ್ಥಾನಕ್ಕೆ, ಶ್ರೀಲಕ್ಷ್ಮೀನಾರಾಯಣಸ್ವಾಮಿ ಹಾಗೂ ಶ್ರೀಆಂಜಿನೇಯಸ್ವಾಮಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದುಕೊಂಡರು.

ಇದೇ ರೀತಿಯಲ್ಲಿ ತಾಲೂಕಿನ ಕಮಲಾಪುರ, ಗಾದಿಗನೂರು, ಪಾಪಿನಾಯಕನಹಳ್ಳಿ, ದೇವಲಾಪುರ, ಜಿ. ನಾಗಲಾಪುರ, ಚಿಲಕನಹಟ್ಟಿ, ಡಣಾಪುರ, ಹನುಮನಹಳ್ಳಿ, ನಂದಿಬಂಡಿ ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಶಿವರಾತ್ರಿ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಶಿವರಾತ್ರಿಯ ಅಂಗವಾಗಿ ಅನೇಕ ಭಕ್ತರು ಒಪ್ಪತ್ತು ಮಾಡುತ್ತಿರುವುದರಿಂದ ಕೇವಲ ಹಣ್ಣುಗಳ ಸೇವನೆ ಮಾತ್ರ ಮಾಡುತ್ತಿರುವುದಿರಂದ ಹಣ್ಣಿನ ಅಂಗಡಿಗಳ ಮುಂದೆ ಜನರು ಮುಗಿ ಬಿದ್ದು ಹಣ್ಣುಗಳ ಖರೀದಿ ಜೋರಾಗಿ ನಡೆದಿತ್ತು.