ಕಾಮಗಾರಿಗೆ ಶೀಘ್ರವೇ ಟೆಂಡರ್: ಶಾಸಕ ದಿನಕರ ಶೆಟ್ಟಿ

ಕನ್ನಡಪ್ರಭ ವಾರ್ತೆ ಕುಮಟಾತಾಲೂಕಿನ ಅಳ್ಕೋಡದಲ್ಲಿ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಚಂಡಿಕಾ ನದಿಗೆ ಬ್ಯಾರೇಜ್ ನಿರ್ಮಿಸುವ ಉದ್ದೇಶದಿಂದ ಶಾಸಕ ದಿನಕರ ಶೆಟ್ಟಿ ಮಂಗಳವಾರ ಅಧಿಕಾರಿಗಳೊಂದಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಅಳ್ಕೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಶೇಷವಾಗಿ ಬಹಳಷ್ಟು ರೈತರಿದ್ದಾರೆ, ತೋಟ ಇದೆ. ಆದರೆ ಬೇಸಿಗೆಯಲ್ಲಿ ಚಂಡಿಕಾ ನದಿ ಪಕ್ಕದಲ್ಲೇ ಹರಿದರೂ ನೀರಿನ ಕೊರತೆಯಿತ್ತು. ಹೀಗಾಗಿ ಚಂಡಿಕಾ ನದಿ ನೀರನ್ನು ಬ್ಯಾರೇಜ್ ಮೂಲಕ ಸಂಗ್ರಹಿಸಿ ಬೇಸಿಗೆಯಲ್ಲಿ ಹೆಚ್ಚಿನ ಪ್ರಯೋಜನ ಪಡೆಯುವಂತಾಗಲು ಕ್ರಿಯಾಯೋಜನೆ ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿತ್ತು.ಪ್ರಸ್ತಾವನೆ ಕುರಿತು ಬೃಹತ್ ನೀರಾವರಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಳಿ ನಾನು ಚರ್ಚೆ ಮಾಡಿದ್ದು, ಈಗಾಗಲೇ ₹೫.೫ ಕೋಟಿ ಮಂಜೂರಿ ಪಡೆದು ಒಂದುವರೆ ವರ್ಷ ಕಳೆದಿದೆ. ಕೆಲವು ಅನಿವಾರ್ಯ ಕಾರಣಗಳಿಂದ ವಿಳಂಬವಾದರೂ ಯೋಜನೆಯು ಈಗ ಟೆಂಡರ್ ಹಂತಕ್ಕೆ ಬಂದಿದೆ. ಕಾಮಗಾರಿಯ ಟೆಂಡರ್ ಕರೆದು ಬ್ಯಾರೇಜ್ ನಿರ್ಮಿಸಿದ ನಂತರ ಈ ಭಾಗದ ಜನರಿಗೆ, ರೈತರಿಗೆ ಮತ್ತು ಕುಡಿಯುವ ನೀರಿಗೆ ಅನುಕೂಲವಾಗಲಿದೆ ಎಂಬ ಕಾರಣಕ್ಕೆ ನನ್ನಿಂದಾದ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಸ್ಥಳೀಯರಾದ ಗಜಾನನ ಪೈ, ಗ್ರಾಮ ಪಂಚಾಯಿತಿಯ ನಿಕಟಪೂರ್ವ ಅಧ್ಯಕ್ಷ ದೇವು ಗೌಡ ಇನ್ನಿತರರು ಸಾಂತೂರು ಸೇತುವೆಗೆ ಬ್ಯಾರೇಜ್ ನಿರ್ಮಿಸಿದರೆ ಅತ್ಯುತ್ತಮವಾಗುತ್ತದೆ ಎಂದು ತಿಳಿಸಿದ್ದರಿಂದ ಇಂದು ಬೃಹತ್ ನೀರಾವರಿ ಇಲಾಖೆಯ ಎಂಜಿನಿಯರ್ ಜಯರಾಮ್ ಶೆಟ್ಟಿ ಅವರೊಂದಿಗೆ ಖುದ್ದಾಗಿ ಬಂದು ಸ್ಥಳ ಪರಿಶೀಲನೆ ನಡೆಸಿದ್ದೇನೆ. ಕಾಮಗಾರಿಯ ಸಾಧ್ಯತೆಯನ್ನು ಸಮ್ಮತಿಸಿ ಶೀಘ್ರವೇ ಟೆಂಡರ್ ಕರೆಯಲಾಗುವುದು. ಅಧಿಕಾರಿಗಳು ಅತ್ಯಂತ ಗುಣಮಟ್ಟದ ಕಾಮಗಾರಿ ಮಾಡಬೇಕಿದೆ ಎಂದರು.ಬೃಹತ್ ನೀರಾವರಿ ಇಲಾಖೆಯ ಎಂಜಿನಿಯರ್ ಜಯರಾಮ್ ಶೆಟ್ಟಿ, ನಿಕಟಪೂರ್ವ ಜಿಪಂ ಸದಸ್ಯ ಗಜಾನನ ಪೈ, ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ದೇವು ಗೌಡ, ಸ್ಥಳೀಯರಾದ ನಿಲೇಶ ಇತರರು ಇದ್ದರು.