ಮೊಳಕಾಲ್ಮೂರು ತಾಲೂಕಿನ ಬೈರಾಪುರ ಬಳಿಯ ರಾಷ್ಟೀಯ ಹೆದ್ದಾರಿಯಲ್ಲಿ ಪಿಕಪ್ ವಾಹನ ಮತ್ತು ಲಾರಿಯ ನಡುವೆ ನಡೆದ ಬೀಕರ ಅಪಘಾತದಲ್ಲಿ ನುಜ್ಜುಗುಜ್ಜದ ಮಹೇಂದ್ರ ಗೂಡ್ಸ್ ವಾಹನ.

ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು

ಬದುಕಿನ ಬಂಡಿ ಸಾಗಿಸಲು ಕೂದಲು ವ್ಯಾಪಾರ ಮಾಡಿಕೊಂಡು ಬಾಳು ಕಟ್ಟಿಕೊಂಡಿದ್ದ ಗಂಡ ಹೆಂಡತಿ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಮಹೇಂದ್ರ ಗೂಡ್ಸ್ ವಾಹನ ಮತ್ತು ಲಾರಿಯ ನಡುವೆ ನಡೆದ ಭೀಕರ ಅಫಘಾತದಲ್ಲಿ ದುರಂತ ಅಂತ್ಯ ಕಂಡಿರುವ ಘಟನೆ ತಾಲೂಕಿನ ಬೈರಾಪುರ ರಾಷ್ಟ್ರೀಯ ಹೆದ್ದಾರಿ 150ಎ ನಲ್ಲಿ ಬುಧವಾರ ಸಂಜೆ ನಡೆದಿದೆ.

ಮೃತರೆಲ್ಲರೂ ಬಳ್ಳಾರಿ ನಗರದ ಗೂಡ ನಗರದ ನಿವಾಸಿಗಳಾಗಿದ್ದಾರೆ. ಇವರು ದಾವಣಗೆರೆ ಸೇರಿದಂತೆ ವಿವಿಧ ಕಡೆಯಲ್ಲಿ ಕೂದಲು ವ್ಯಾಪಾರ ಮಾಡುತ್ತಾ ಊರೂರು ಅಲೆದು ಜೀವನ ನಡೆಸುತ್ತಿದ್ದರು. ಇವರು ವ್ಯಾಪಾರ ಮುಗಿಸಿಕೊಂಡು ಬಳ್ಳಾರಿಗೆ ವಾಪಸ್ ಮರಳುತ್ತಿರುವಾಗ ಮಹೇಂದ್ರ ಗೂಡ್ಸ್ ವಾಹನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ತುಂಬು ಗರ್ಬಿಣಿ ಮೂವರು ಮಕ್ಕಳು ಸ್ಥಳದಲಿಯೇ ಮೃತ ಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡ ಮತ್ತೊಬ್ಬನನ್ನು ಹೆಚ್ಚಿನ ಚಿಕಿತ್ಸೆಗೆಂದು ಬಳ್ಳಾರಿಯ ವಿಮ್ಸ್‌ಗೆ ಸಾಗಿಸುತ್ತಿರುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಕ್ರೂರ ವಿಧಿ ರಸ್ತೆ ಅಪಘಾತದ ರೂಪದಲ್ಲಿ ಇಡೀ ಕುಟುಂಬವನ್ನೇ ನುಂಗಿ ಹಾಕಿದೆ.

ಮೃತಪಟ್ಟವರು ಬಳ್ಳಾರಿ ನಗರದ ಗುಡಾರ ನಗರ ನಿವಾಸಿಗಳಾದ ಶಿವಮ್ಮ(25), ಮೀನಾಕ್ಷಿ (16), ಪೂಜಾ (4),

ಪರುಶುರಾಮ(1/15) ವೆಂಕಟೇಶ್ (28) ಎಂದು ಗುರುತಿಸಲಾಗಿದೆ.

ಆಸ್ಪತ್ರೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆಯ ವಿಷಯ ತಿಳಿಯುತ್ತಿದ್ದಂತೆ ಮೃತರ ಸಂಬಂಧಿಕರು ಅರಚಾಡುತ್ತಾ ಆಸ್ಪತ್ರೆಯ ಆವರಣಕ್ಕೆ ಧಾವಿಸಿದರು. ಇಡೀ ಕುಟುಂಬವೇ ಹೆಣವಾಗಿ ಬಿದ್ದಿರುವುದನ್ನು ಕಂಡು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಒಬ್ಬರನ್ನಾದರೂ ಉಳಿಸಬಾರದಿತ್ತು ದೇವರೇ ಎಂದು ವಿಧಿಯ ಅಟ್ಟಹಾಸಕ್ಕೆ ಶಾಪ ಹಾಕುತ್ತಾ ಎದೆಬಡಿದುಕೊಂಡು ರೋದಿಸುತ್ತಿದ್ದ ದೃಶ್ಯ ನೆರೆದಿದ್ದವರ ಕಣ್ಣಾಲಿಗಳನ್ನು ಒದ್ದೆಯಾಗಿಸಿತು. ಗರ್ಭಿಣಿ ಹೆಣ್ಣುಮಗಳು ಹಾಗೂ ಮೂವರು ಚಿಕ್ಕ ಮಕ್ಕಳು ಸೇರಿ ಇಡೀ ವಂಶವೇ ಕಣ್ಣೆದುರೇ ಇಲ್ಲದಂತಾದಾಗ ಹೆತ್ತವರು, ಬಂಧುಗಳು ಅನುಭವಿಸುತ್ತಿದ್ದ ನರಕಯಾತನೆ ನೋಡಲು ಅಸಾಧ್ಯವಾಗಿತ್ತು. ಬೆಳಗ್ಗೆ ಪೋನಿನಲ್ಲಿ ಮಾತನಾಡಿದ್ದೇ ಬರುತ್ತೇವೆಂದು ಹೇಳಿದ್ದರು. ಆದರೆ ಅವರು ಬಾರದ ಲೋಕಕ್ಕೆ ತೆರಳಿದರು. ಇನ್ನೂ ಯಾರ ಬಳಿ ಮಾತನಾಡಲಿ ಎಂದು ಮೃತನ ಸಹೋದರ ಮಂಜುನಾಥ ರೋದಿಸುತ್ತಿರುವುದು ನೋಡುವವರ ಕರಳು ಚುರುಕ್ ಎನ್ನುವಂತಾಗಿತ್ತು. ಪುಟ್ಟ ಕಂದಮ್ಮಗಳ ಹಸನ್ಮುಖಿ ಕುಟುಂಬವೊಂದು ಹೆದ್ದಾರಿಯಲ್ಲಿ ಹೆಣದ ರಾಶಿಯಾಗಿ ಬಿದ್ದಿರುವುದು ಇಡೀ ಬಳ್ಳಾರಿಯ ಗುಡಾರ್ ನಗರವನ್ನು ಶೋಕಸಾಗರದಲ್ಲಿ ಮುಳುಗಿಸಿದಂತಾಗಿದೆ.

ಡಿಕ್ಕಿಯ ರಭಸಕ್ಕೆ ಪಿಕಪ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ಷಣ ಕಾಲ ವಾಹನ ಸಂಚಾರ ವ್ಯತ್ಯಯವಾಗಿತ್ತು. ವಾಹನ ತೆರವುಗೊಳಿಸುವಲ್ಲಿ ಪೊಲೀಸರು ಹರಸಾಹಸ ಪಡುವಂತಾಗಿತ್ತು.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಡಿವೈಎಸ್‌ಪಿ ಸತ್ಯನಾರಾಯಣ ರಾವ್, ಮೊಳಕಾಲ್ಮೂರು ಪೊಲೀಸ್ ಠಾಣೆಯ ಸಿಪಿಐ ನಾಗರಾಜ, ಪಿಎಸ್ಐ ಮಹೇಶ್ ಹೊಸಪೇಟೆ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.